ಯಾಸಿನ್ ಭಟ್ಕಳ್ ಪರಾರಿಗೆ ಸಂಚು ರೂಪಿಸಿದ್ದ ವಿದ್ಯಾರ್ಥಿ
ನವದೆಹಲಿ, ಮಾರ್ಚ್, 21: ಉಗ್ರ ಯಾಸಿನ್ ಭಟ್ಕಳ್ ನನ್ನು ಜೈಲಿನಿಂದ ಪರಾರಿ ಮಾಡಲು ಉಗ್ರ ಸಂಘಟನೆಗಳು ಸಂಚು ರೂಪಿಸಿದ್ದವು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 19 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅಶಿಕ್ ಅಹಮದ್ ನನ್ನು ಗುಪ್ತಚರ ದಳ ಬಂಧಿಸಿದ ನಂತರ ಈ ಮಾಹಿತಿ ಗೊತ್ತಾಗಿದೆ.
ಹೂಗ್ಲಿಯ ನಿವಾಸಿಯಾಗಿದ್ದ ಅಶಿಕ್ ಅಹಮದ್ ನನ್ನು ಉಗ್ರ ಚಟುವಟಿಕೆ ಅನುಮಾನದ ಆಧಾರದ ಮೇಲೆ ಗುಪ್ತಚರ ದಳ ಬಂಧನ ಮಾಡಿತ್ತು. ಜುಂದ್-ಅಲ್-ಖಲೀಫಾ-ಹಿಂದ್ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಅಶಿಕ್ ಅಹಮದ್ ನನ್ನು ಗುರುವಾರ ಬಂಧನ ಮಾಡಲಾಗಿತ್ತು. ಈತ ಉಗ್ರ ಸಂಘಟನೆ ಐಎಸ್ ಐಎಸ್ ಜತೆ ಸಹ ಸಂಪರ್ಕ ಇಟ್ಟುಕೊಂಡಿದ್ದ.[ಉಗ್ರ ಯಾಸಿನ್ ಭಟ್ಕಳ್ ಜೇಬಿನಲ್ಲಿ ಇದ್ದದ್ದಾದರೂ ಏನು?]
ಅಶಿಕ್ ಅಹಮದ್ ಮತ್ತು ಹೈದ್ರಾಬಾದಿನ ಮೊಹಮದ್ ನಫೀಜ್ ಯಾಸಿನ್ ಭಟ್ಕಳ್ ನನ್ನು ಜೈಲಿನಿಂದ ಪರಾರಿ ಮಾಡಿಸಲು ಸಂಚು ರೂಪಿಸಿದ್ದರು. ತಿಹಾರ್ ಜೈಲಿನಲ್ಲಿರುವ ಯಾಸೀನ್ ಬಿಡುಗಡೆ ಮಾಡಿಸುವ ಉದ್ದೇಶ ಹೊಂದಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

ಇಡೀ ಕಾರ್ಯತಂತ್ರದ ಬಗ್ಗೆ ಅಹಮದ್ ಮಾಹಿತಿ ನೀಡಿಲ್ಲ. ಆದರೆ, ಜೆಕೆಎಚ್ ಸಂಘಟನೆಯ ಮುಂಬರುವ ಯೋಜನೆಗಳಲ್ಲಿ ಯಾಸಿನ್ ಭಟ್ಕಳ್ನನ್ನು ಜೈಲಿನಿಂದ ಬಿಡುಗಡೆ ಮಾಡಿಸುವುದೂ ಒಂದಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅಹಮದ್ ಹಾಗೂ ನಫೀಜ್ ನಡೆಸಿರುವ ಸಂಭಾಷಣೆಗಳಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.[ಪತ್ನಿಗೆ ಕರೆ ಮಾಡಿದ್ದ ಯಾಸಿನ್]
ಅಶಿಕ್ ಅಹಮದ್ ಉಗ್ರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ತನ್ನ ಸ್ನೇಹಿತರನ್ನು ಬಳಸಿಕೊಂಡು ಯಾಸಿನ್ ಭಟ್ಕಳ್ ನನ್ನು ಜೈಲಿನಿಂದ ಪರಾರಿ ಮಾಡಲು ಯತ್ನ ನಡೆಸಿದ್ದ ಎಂಬ ಆಘಾತಕಾರಿ ಅಂಶ ಇದೀಗ ಬಯಲಾಗಿದೆ.
ಯಾಸಿನ್ ಭಟ್ಕಳ್ ಯಾರು?
ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಭಾರತದ ಹೊಣೆ ಹೊತ್ತಿದ್ದ ಯಾಸಿನ್ ಭಟ್ಕಳ್ ಮೇಲೆ ಸರಣಿ ಬಾಂಬ್ ಸ್ಫೋಟ ನಡೆಸಿದ ಆರೋಪವಿದೆ. ಸದ್ಯ ತಿಹಾರ್ ಜೈಲಿನಲ್ಲಿ ಬಿಗಿ ಭದ್ರತೆ ನಡುವೆ ಇಡಲಾಗಿದೆ.











Click it and Unblock the Notifications