ಸೋನಿಯಾ ಅಧ್ಯಕ್ಷತೆಯಲ್ಲಿ ವಿಪಕ್ಷಗಳ ಸಭೆ, ಕೇಜ್ರಿವಾಲ್ನ ಆಪ್ಗೆ ಇಲ್ಲ ಆಹ್ವಾನ!
ನವದೆಹಲಿ, ಆಗಸ್ಟ್ 20: ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಲಿರುವ ವಿರೋಧ ಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ಇಂದು ವಹಿಸಿಕೊಳ್ಳಲಿದ್ದಾರೆ. ಈ ವಿರೋಧ ಪಕ್ಷಗಳ ಸಭೆಯನ್ನು ವಿರೋಧ ಪಕ್ಷಗಳ ನಾಯಕರು ಹಾಗೂ ಬಿಜೆಪಿಯೇತರ ಆಡಳಿತ ಪಕ್ಷದ ರಾಜ್ಯದ ಮುಖ್ಯಮಂತ್ರಿಗಳು ಹಾಜರಾಗಲಿದ್ದಾರೆ. ಆದರೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮಾತ್ರ ಈ ಸಭೆಯ ಆಹ್ವಾನ ನೀಡಿಲ್ಲ ಎಂದು ಹೇಳಲಾಗಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಕೂಟದ ವಿರುದ್ದ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ಸಭೆಯನ್ನು ನಡೆಸಲಿದೆ ಎಂದು ಹೇಳಲಾಗಿದೆ. ಈಗಾಗಲೇ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ವಿರುದ್ದ ಒಕ್ಕೂಟ ಕಟ್ಟಲು ಹಲವಾರು ಸಭೆಗಳನ್ನು ನಡೆಸಿದ್ದಾರೆ. ಈ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಈ ನಿಟ್ಟಿನಲ್ಲೇ ದೆಹಲಿಗೆ ಪ್ರವಾಸ ಕೂಡಾ ಬಂದಿದ್ದಾರೆ.
ಐಕ್ಯ ವಿರೋಧ ಪಕ್ಷಗಳು: ಮುಂದಿನ ವಾರ ಸೋನಿಯಾರ ವರ್ಚುವಲ್ ಮೀಟ್
ಮಾಧ್ಯಮದ ವರದಿಗಳ ಪ್ರಕಾರ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ನ ನಾಯಕಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಇತರರನ್ನು ಆಹ್ವಾನಿಸಿದ್ದಾರೆ. ಶರದ್ ಪವಾರ್, ಮಮತಾ ಬ್ಯಾನರ್ಜಿ ಮತ್ತು ಎಂಕೆ ಸ್ಟಾಲಿನ್ ಆಹ್ವಾನಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಯಾವೆಲ್ಲಾ ಪಕ್ಷಗಳು ಭಾಗಿ?
ಇನ್ನು ಕನಿಷ್ಠ 18 ವಿರೋಧ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಲಿದೆ ಎಂದು ವರದಿಗಳು ತಿಳಿಸಿದೆ. ಎನ್ಸಿಪಿ, ಆರ್ಜೆಡಿ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ನ್ಯಾಷನಲ್ ಕಾನ್ಪರೆನ್ಸ್, ಜೆಡಿಎಸ್, ಎಡಪಕ್ಷಗಳು, ಜೆಎಂಎಂ ಮತ್ತು ಇತರರು ಈ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಆದರೆ ಈ ನಡುವೆ ದೆಹಲಿಯ ಆಡಳಿತಾರೂಠ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಗೆ ಮಾತ್ರ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿಲ್ಲ ಎಂದು ವರದಿಗಳು ಹೇಳಿದೆ.
ಕಾಂಗ್ರೆಸ್ ಮಾಜಿ ಸಂಸದೆ ಟಿಎಂಸಿ ಸೇರ್ಪಡೆ: ಕೇಂದ್ರ ನಾಯಕತ್ವದ ವಿರುದ್ದ ಸಿಬಲ್ ವಾಕ್ ಪ್ರಹಾರ
ಸಭೆಯಲ್ಲಿ ಶರದ್, ಉದ್ದವ್ ಭಾಗಿ
ತಮ್ಮ ಪಕ್ಷಕ್ಕೆ ಆಹ್ವಾನ ಲಭಿಸಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಿವ ಸೇನೆ ನಾಯಕ ಸಂಜಯ್ ರಾವತ್, "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಸಭೆಗೆ ಹಾಜರಾಗಲಿದ್ದಾರೆ. ಎನ್ಸಿಪಿಯಿಂದ ಶರದ್ ಪವಾರ್ ವಿರೋಧ ಪಕ್ಷದ ಸಭೆಗೆ ಹಾಜರಾಗಲಿದ್ದಾರೆ," ಎಂದು ಎನ್ಸಿಪಿ ಸಂಸದ ಸುಪ್ರಿಯಾ ಸುಳೆ ಖಚಿತಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಆಡಳಿತದ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಕೂಡಾ ಸೇರಿದೆ.
ಕಪಿಲ್ ಹುಟ್ಟುಹಬ್ಬದ ಹಿನ್ನೆಲೆ ವಿಪಕ್ಷಗಳಿಗೆ ಔತಣಕೂಟ: ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚರ್ಚೆ
ಸಭೆಯಲ್ಲಿ ಏನೇನು ಚರ್ಚೆ ನಡೆಯಲಿದೆ?
ಪ್ರಮುಖವಾಗಿ ಈ ಹಿಂದೆ ಮಾನ್ಸೂನ್ ಅಧಿವೇಶನವು ಕೊನೆಗೊಳ್ಳುವ ಮೊದಲು ಕಾಂಗ್ರೆಸ್, ಟಿಎಂಸಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಪೆಗಾಸಸ್ ಬೇಹುಗಾರಿಕೆ ಹಗರಣ, ರೈತ ವಿರೋಧಿ ಕಾಯ್ದೆ, ಹಣದುಬ್ಬರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗೆ ಒಟ್ಟಾಗಿ ಒತ್ತಾಯ ಮಾಡಿದ್ದವು. ಹಾಗೆಯೇ ಸಂಸತ್ತಿನಲ್ಲಿ ಹೊರಗಿನಿಂದ ಮಾರ್ಷಲ್ಗಳನ್ನು ಕರೆಸಿ ಮಹಿಳಾ ಸಂಸದರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪ ಮಾಡಿದ್ದರು. ಸಂಸತ್ತನ್ನು ಶೀಘ್ರವಾಗಿ ಕೊನೆಗೊಳಿಸಿದ್ದನ್ನು ವಿರೋಧ ಮಾಡಿ ಹಾಗೂ ಮಹಿಳಾ ಸಂಸದರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಸಂಸತ್ತಿಗೆ ರ್ಯಾಲಿ ಬರುವ ಮೂಲಕ ಪ್ರತಿಭಟನೆ ನಡೆಸಿದ್ದರು. ಇನ್ನು ಇಂದಿನ ಸಭೆಯಲ್ಲಿ ವಿಮೆ ತಿದ್ದುಪಡಿ ಕಾಯ್ದೆಯ ಅನುಮೋದನೆ ಸಂದರ್ಭದ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ವಿರೋಧ ಪಕ್ಷದ ಕೆಲವು ನಾಯಕರ ಮೇಲೆ ಕಠಿಣ ಕ್ರಮ ಕೈಗೊಂಡಿರುವುದನ್ನು ವಿರೋಧ ಮಾಡಿ ಇಂದಿನ ಸಭೆಯು ನಡೆಯಲಿದೆ ಹಾಗೂ ಈ ಸಭೆಯಲ್ಲಿ ಪೆಗಾಸಸ್, ರೈತ ವಿರೋಧ ಕೃಷಿ ಕಾಯ್ದೆ, ಮುಂದಿನ ಚುನಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಕಪಿಲ್ ಸಿಬಲ್ ಸಭೆಗೂ ಸೋನಿಯಾ ಸಭೆಗೂ ಹೋಲಿಕೆ ಇದೆಯೇ?
ಇನ್ನು ಈ ಸಭೆಯು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತನ್ನ ಹುಟ್ಟು ಹಬ್ಬದ ಒಂದು ದಿನದ ನಂತರ ನಡೆಸಿದ ಭೋಜನ ಕೂಟದ ನೆಪದ ವಿರೋಧ ಪಕ್ಷಗಳ ಸಭೆಯನ್ನು ಹೋಲಲಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆಯ ಬಗ್ಗೆ ಹಲವಾರು ಬಾರಿ ಮಾತು ಎತ್ತಿದ್ದ ಕಪಿಲ್ ಸಿಬಲ್ ನಡೆಸಿದ ವಿರೋಧ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕತ್ವದ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹಾಗೆಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವವರೆಗೂ ಬಿಜೆಪಿ ವಿರುದ್ದ ಸದೃಢ ವಿರೋಧ ಪಕ್ಷಗಳ ಒಕ್ಕೂಟ ಸ್ಥಾಪನೆ ಸಾಧ್ಯವಾಗದು ಎಂದು ಹಲವು ಮಂದಿ ಅಭಿಪ್ರಾಯ ಪಟ್ಟಿದ್ದರು. ಕಪಿಲ್ ಸಿಬಲ್ ಸಭೆಯಲ್ಲಿ ಕಪಿಲ್ ಮನೋಭಾವನೆಯಂತೆ ಯೋಚಿಸುವ ನಾಯಕರುಗಳನ್ನು ಮಾತ್ರ ಆಹ್ವಾನಿಸಲಾಗಿತ್ತು.
(ಒನ್ ಇಂಡಿಯಾ)