ಪ್ರತಿಭಟನೆ: ಹೆಲ್ಮೆಟ್ ಧರಿಸಿ ಬಿಜೆಪಿ ಕಾರ್ಯಕ್ರಮಕ್ಕೆ ಹೋದ ವರದಿಗಾರರು!
ರಾಯಪುರ, ಫೆಬ್ರವರಿ 07: ಹೆಲ್ಮೆಟ್ ಧರಿಸಿ ಬಿಜೆಪಿ ಮುಖಂಡರೊಬ್ಬರ ಸಂದರ್ಶನವನ್ನು ವರದಿಗಾರರು ರಾಯಪುರದಲ್ಲಿ ಪಡೆದಿದ್ದಾರೆ. ಅವರು ಹೀಗೆ ಮಾಡಿರುವುದು ಬಿಜೆಪಿ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಲು.
ರಾಯಪುರದಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಎಲ್ಲ ಸ್ಥಳೀಯ ವರದಿಗಾರರು ಹೆಲ್ಮೆಟ್ ಧರಿಸಿ ತೆರಳಿ ಕಾರ್ಯಕ್ರಮದ ವರದಿ ಮಾಡಿದರು. ಕಾರ್ಯಕ್ರಮದ ನಂತರ ಬಿಜೆಪಿ ಮುಖಂಡನ ಬೈಟ್ ಪಡೆಯಬೇಕಾದರೆ ಕೂಡ ಹೆಲ್ಮೆಟ್ ಧರಿಸಿಯೇ ಇದ್ದರು.
'ನಾವು ಹೆಲ್ಮೆಟ್ ಧರಿಸಿ ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಸಂದೇಶ ಕಳುಹಿಸಲು ಬಯಸಿದ್ದೇವೆ, ಇದು ನಮ್ಮ ಪ್ರತಿಭಟನೆ, ಜೊತೆಗೆ ಬಿಜೆಪಿಯವರು ಮತ್ತೆ ನಮ್ಮ ಮೇಲೆ ದಾಳಿ ಮಾಡಿದರೆ ರಕ್ಷಿಸಿಕೊಳ್ಳುವ ಉಪಾಯವೂ ಹೌದು' ಎಂದು ಮಾಧ್ಯಮ ಸಿಬ್ಬಂದಿ ಹೇಳಿದ್ದಾರೆ.
ಚತ್ತೀಸ್ಘಡದ ರಾಯಪುರದಲ್ಲಿ ಕಳೆದ ಶನಿವಾರದಂದು ನಡೆದ ಬಿಜೆಪಿ ಸಮಾವೇಶದ ವರದಿ ಮಾಡುವ ಸಮಯದಲ್ಲಿ ಕೆಲವು ಮಾಧ್ಯಮದ ಸಿಬ್ಬಂದಿ ಒಬ್ಬರ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದರ ವಿರುದ್ಧ ರಾಜ್ಯದ ವರದಿಗಾರರು ಪ್ರತಿಭಟನೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ನಡುವೆ ಆಗುತ್ತಿದ್ದ ಗಲಾಟೆಯನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸುಮನ್ ಪಾಂಡೆ ಎಂಬ ವರದಿಗಾರನ ಮೇಲೆ ಬಿಜೆಪಿಯ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಆತನ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಘಟನೆಯನ್ನು ಖಂಡಿಸಿ ಚತ್ತೀಸ್ಘಡ ರಾಜ್ಯದ ಪತ್ರಕರ್ತರು ಪ್ರತಿಭಟನೆ ಮಾಡಿದ್ದರು. ಈಗಲೂ ಪ್ರತಿಭಟನೆ ಮುಂದುವರೆದಿದೆ.