ಬಡವರ ಬಜೆಟ್, ದೇಶದ ಅಭಿವೃದ್ಧಿಗೆ ಪೂರಕ-ಅನಂತ್ ಕುಮಾರ್
2017-18ನೇ ಬಜೆಟನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಇದೊಂದು ಬಡವರ ಪರ, ದೇಶದ ಅಭಿವೃದ್ಧಿಗೆ ಪೂರಕ ಬಜೆಟ್ ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 1: ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಬಡವರ ಬಜೆಟ್ ಆಗಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಬಣ್ಣಿಸಿದ್ದಾರೆ.[ಬಜೆಟ್ 2017: ಮೂಲ ಸೌಕರ್ಯಕ್ಕೆ ಜೇಟ್ಲಿ ಕೊಟ್ಟಿದ್ದು ಬರೀ ಸಪ್ಪೆ ಸಪ್ಪೆ..]
2017ರ ಬಜೆಟ್ ಬಡವರು, ದಲಿತರು, ಶೋಷಿತರ, ವಂಚಿತರು, ಕೃಷಿಕರು, ಮಹಿಳೆಯರು ಮತ್ತು ಯುವಕರನ್ನು ಆಧಾರವಾಗಿಟ್ಟುಕೊಂಡಿದೆ. ಈ ಎಲ್ಲಾ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಬಜೆಟಿನಲ್ಲಿ ಒತ್ತು ನೀಡಲಾಗಿದೆ. ಕೃಷಿಕರಿಗೆ ಈ ಆರ್ಥಿಕ ವರ್ಷದಲ್ಲಿ 10 ಲಕ್ಷ ಕೋಟಿವರೆಗೆ ಸಾಲ ನೀಡಲಾಗುವುದ ಎಂದು ಘೋಷಣೆ ಮಾಡಲಾಗಿದೆ. 50,000 ಗ್ರಾಮ ಪಂಚಾಯತ್ ಗಳನ್ನು ಬರ ಮುಕ್ತ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ನರೇಗಾ ಯೋಜನೆಗೆ 48,000 ಕೋಟಿ ನೀಡಲಾಗಿದೆ. ಗ್ರಾಮೀಣ ಜನರಿಗೆ ಇವೆಲ್ಲಾ ತುಂಬಾ ಉಪಯೋಗಕ್ಕೆ ಬರಲಿವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.[ಜೇಟ್ಲಿ ಬಜೆಟನ್ನು ಠುಸ್ ಪಟಾಕಿ ಎಂದ ರಾಹುಲ್ ಗಾಂಧಿ]

ಇದೇ ರೀತಿ ಗ್ರಾಮೀಣ ಸಡಕ್ ಯೋಜನೆ, ಬಡವರಿಗೆ ಮನೆ ನೀಡುವ ಮಹತ್ತರ ಯೋಜನೆಗಳಿಗೆ ಬಜೆಟಿನಲ್ಲಿ ಮಹತ್ವ ನೀಡಲಾಗಿದೆ. ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ 52,393 ಕೋಟಿ ಹಣ ನೀಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ 31,920 ಕೋಟಿ ಹಾಗೂ ಅಲ್ಪಸಂಖ್ಯಾತರಿಗೆ 4,195 ಕೋಟಿ ನೀಡಿದ್ದಾರೆ. ಕೇಂದ್ರ ಬಜೆಟಿನಲ್ಲಿ ರೈಲ್ವೇ ಬಜೆಟನ್ನು ಸೇರಿಸಿರುವುದು ಸ್ವಾಗತಾರ್ಹ ನಡೆ ಎಂದು ಅನಂತ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications