ವಿಶ್ವಕ್ಕೆ ಲಸಿಕೆ ನೀಡಿ ಬೀಗಿದ್ದ ಪ್ರಧಾನಿ ಮೋದಿ, 2ನೇ ಅಲೆಯ ಮುಂದೆ ಶರಣಾಗತಿ!
ಕೊರೊನಾ ವೈರಸ್ಗೆ ರಾಮಬಾಣವೆಂದೇ ಪ್ರಖ್ಯಾತಿ ಪಡೆದು, ವಿಜೃಂಭಣೆಯಿಂದ ಮಾರುಕಟ್ಟೆಗೆ ಆಗಮಿಸಿದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್, ಕೊರೊನಾ ಹಾಹಾಕಾರವನ್ನು ಒಂದು ಮಟ್ಟಿಗೆ ನಿಲ್ಲಿಸಿದ್ದಂತೂ ಹೌದು.
ಸುಮಾರು ತೊಂಬತ್ತು ರಾಷ್ಟ್ರಗಳಿಗೆ ಲಸಿಕೆಯನ್ನು ಸರಬರಾಜು ಮಾಡಿ, ಜಗತ್ತಿಗೆ ಭಾರತದ ವೈದ್ಯಕೀಯ ಕ್ಷೇತ್ರದ ತಾಕತ್ತನ್ನು ಪ್ರಧಾನಿ ತೋರಿಸಿದ್ದಂತೂ ನೋ ಡೌಟ್. ಆದರೆ, ಕೊರೊನಾ ಎರಡನೇ ಅಲೆ ತನ್ನ ರುದ್ರರೂಪವನ್ನು ತೋರಿಸಲಾರಂಭಿಸಿದಾಗ, ಲಸಿಕೆಯ ಅಭಾವ ಎದುರಾಯಿತು.
ಪಂಚ ರಾಜ್ಯಗಳ ಚುನಾವಣಾ ಪ್ರಚಾರದ ವೇಳೆ ಮೊದಮೊದಲು ಲಸಿಕೆ ರಫ್ತನ್ನು ಸಾಧನೆಯೆಂದು ಬಿಂಬಿಸುತ್ತಿದ್ದ, ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಎರಡನೇ ಅಲೆ ಈ ಮಟ್ಟಿಗೆ ಹಾನಿಯನ್ನು ಮಾಡುತ್ತದೆ ಎನ್ನುವುದರ ಅರಿವಿರಲಿಲ್ಲವೋ ಅಥವಾ ಏನು ಮಾಡಿದರೂ ಜನ ಒಪ್ಪಿಕೊಳ್ಳುತ್ತಾರೆ ಎನ್ನುವ ಓವರ್ ಕಾನ್ಫಿಡೆನ್ಸ್ ಇದ್ದಿರ ಬಹುದು.
ವಿರೋಧ ಪಕ್ಷಗಳು ಸಶಕ್ತರಿಲ್ಲದ ಈ ಸಮಯದಲ್ಲಿ ಕೇಂದ್ರ ಸರಕಾರದ ಆನೆ ನಡೆದಿದ್ದೇ ದಾರಿ ಎನ್ನುವ ಹುಂಬುತನದಿಂದಾಗಿ ಇಂದು ಸಾರ್ವಜನಿಕ ವಲಯದಲ್ಲಿ ಈ ಮಟ್ಟಿಗೆ ವಿರೋಧ ವ್ಯಕ್ತವಾಗುತ್ತಿದೆ.ಬಹುಶಃ ಈ ಲೆಕ್ಕಾಚಾರ ಕೇಂದ್ರಕ್ಕೆ ಇಲ್ಲದೇ ಇದ್ದಿರಬಹುದು.

ಆರ್ಥಿಕ ಅಪೇಕ್ಷೆ ಇಲ್ಲದೇ ಭಾರತದಿಂದ ಲಸಿಕೆ ರಫ್ತು
ಏಷ್ಯಾದ ಕೆಲವೊಂದು ಬಡರಾಷ್ಟ್ರಗಳಿಗೆ ಯಾವುದೇ ಆರ್ಥಿಕ ಅಪೇಕ್ಷೆ ಇಲ್ಲದೇ ಭಾರತ ಸರಕಾರ ಲಸಿಕೆಯನ್ನು ರಫ್ತು ಮಾಡಿತ್ತು. ಮಾನವೀಯತೆಯ ಆಧಾರದಲ್ಲಿ ಇದೊಂದು ಒಳ್ಳೆಯ ಕೆಲಸವಾಗಿದ್ದರೂ, ಬೇರೆ ರಾಷ್ಟ್ರಗಳಿಗೆ ಸರಬರಾಜು ಮಾಡುವ ಗೌಜಿನಲ್ಲಿ ದೇಶದಲ್ಲಿ ಲಸಿಕೆ ಅಭಾವ ಎದುರಾಗಲಾರಂಭಿಸಿತು. ಮೊದಲು ನಾವು, ನಮ್ಮವರು, ಆಮೇಲೆ ಇನ್ನೊಬ್ಬರು ಎನ್ನುವ ನಿಲುವಿಗೆ ಮೋದಿ ಸರಕಾರ ಬಂದಿದ್ದರೆ, ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಕೇಂದ್ರ ಸರಕಾರ ಆಹಾರವಾಯಿತು.

ಕುಂಭಮೇಳದಲ್ಲೂ ಲಕ್ಷಾಂತರ ಭಕ್ತರು ಸೇರಿದ್ದರು
ಮಾರ್ಚ್ ಅಂತ್ಯದವರೆಗೂ ಎಲ್ಲವೂ ಸರಿದಾರಿಯಲ್ಲೇ ಸಾಗಿತ್ತು, ಕುಂಭಮೇಳದಲ್ಲೂ ಲಕ್ಷಾಂತರ ಭಕ್ತರು ಸೇರಿದ್ದರು. ಚುನಾವಣಾ ಪ್ರಚಾರದಲ್ಲಿ ಕಾನೂನು ರೂಪಿಸುವ ರಾಜಕಾರಣಿಗಳೇ, ಕಾನೂನು ಉಲ್ಲಂಘಿಸುವುದು ಹೇಗೆ ಎಂದು ತೋರಿಸಿಕೊಟ್ಟರು. ಇದನ್ನೆಲ್ಲಾ ನೋಡಿಕೊಂಡು ಕೊರೊನಾ ಎರಡನೇ ವೈರಸ್ ಸುಮ್ಮನಿರುತ್ತಾ, ತನ್ನ ಅಬ್ಬರವನ್ನು ಆರಂಭಿಸಿತು. ಇದು ಎಷ್ಟರ ಮಟ್ಟಿಗೆ ಎಂದರೆ, ಮತ್ತೆ ಕರ್ಫ್ಯೂ, ಲಾಕ್ ಡೌನ್. ಅಲ್ಲಿಗೆ, ದೈನಂದಿನ ಸಂಪಾದನೆಯ ಜನರ ಬದುಕೂ ಲಾಕ್ ಆಯಿತು.

ಆಕ್ಸಿಜನ್, ಬೆಡ್ ಕೊರತೆ, ಶವಸಂಸ್ಕಾರಕ್ಕೂ ಸಮಸ್ಯೆ
ಎಲ್ಲೆಲ್ಲೂ ಆಕ್ಸಿಜನ್, ಬೆಡ್ ಕೊರತೆ, ಶವಸಂಸ್ಕಾರ ಮಾಡುವುದಕ್ಕೆ ಮಸಣದಲ್ಲಿ ಸಾಲುಸಾಲು ಸರದಿ. ಬಹುಶಃ ನಮಗೆಲ್ಲಾ ಬುದ್ದಿತಿಳಿದ ಮೇಲೆ ಇಂತಹ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಾವು ನೋಡಿರಲಿಕ್ಕಿಲ್ಲ. ಇದೆಲ್ಲವೂ, ಆಡಳಿತ ಯಂತ್ರದ ವೈಫಲ್ಯ, ನಮ್ಮನ್ನು ಪ್ರಶ್ನಿಸುವವರು ಯಾರು ಎನ್ನುವ ದುರಂಹಕಾರ, ಲಂಗುಲಗಾಮಿಲ್ಲದೇ ನಡೆಯುತ್ತಿರುವ ಖಾಸಗಿಗಳ ದರ್ಬಾರ್. ಜೊತೆಗೆ, ಎಲ್ಲವನ್ನೂ ನೋಡುತ್ತಾ ಕೈಕಟ್ಟಿ ಕುಳಿತಿರುವ ರಾಜ್ಯ ಮತ್ತು ಕೇಂದ್ರ ಸರಕಾರ. ಪರಿಣಾಮ.. ಲಾಕ್ ಡೌನ್, ವೀಕೆಂಡ್ ಕರ್ಪ್ಯೂ..

ಪ್ರಧಾನಿ ಮೋದಿ, 2ನೇ ಅಲೆಯ ಮುಂದೆ ಶರಣಾಗತಿ!
ಲಸಿಕೆಯನ್ನು ರಫ್ತು ಪಡೆದುಕೊಂಡಿದ್ದ ದೇಶಗಳೇ ಈಗ 'ಇಂಡಿಯಾ ನೀಡ್ಸ್ ಆಕ್ಸಿಜನ್' ಎಂದು ಜಗತ್ತಿಗೆ ಮನವಿ ಮಾಡುತ್ತಿದೆ. ಕೊರೊನಾ ಲಸಿಕೆಯನ್ನು ವಿಶ್ವಕ್ಕೇ ಪರಿಚಯಿಸಿದ್ದ ಭಾರತಕ್ಕೆ ಆಕ್ಸಿಜನ್ ಉತ್ಪಾದಿಸುವಷ್ಟು ಶಕ್ತಿಯಿಲ್ಲವೇ? ಕೊರೊನಾ ಮೊದಲ ಮತ್ತು ಎರಡನೇ ಅಲೆಯ ನಡುವೆ ನಮ್ಮ ಸರಕಾರ ಏನೂ ಪಾಠ ಕಲಿತಿಲ್ಲವೇ? ಕಳೆದ ಒಂದು ವರ್ಷದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸರಕಾರದ ಕೊಡುಗೆ ಏನು? ಪ್ರಪಂಚದ ಮುಂದೆ ಭಾರತ ತಲೆತಗ್ಗಿಸುವಂತಾಗಿದ್ದು ಏಕೆ? ಈ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿಯುತ್ತದೆ, ಕಾರಣ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಸಾರ್ವಜನಿಕರ ಉದಾಸೀನತೆ.












Click it and Unblock the Notifications