ಜಮ್ಮು ಕಾಶ್ಮೀರ: ಗ್ರಾಮಸ್ಥರಲ್ಲಿ ಭದ್ರತೆಯ ಭಾವ ಮೂಡಿಸಲು ಗ್ರಾಮ ರಕ್ಷಣಾ ಸಮಿತಿಗಳಿಗೆ ಸೇನೆಯಿಂದ ತರಬೇತಿ
ಶ್ರೀನಗರ, ಜ. 09: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್ನ ಗ್ರಾಮಸ್ಥರಲ್ಲಿ ಭದ್ರತೆಯ ಭಾವವನ್ನು ಮೂಡಿಸಲು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಗ್ರಾಮ ರಕ್ಷಣಾ ಸಮಿತಿಗಳಿಗೆ ತರಬೇತಿ ನೀಡುತ್ತದೆ.
ಭಯೋತ್ಪಾದಕ ದಾಳಿಗಳಿಂದ ರಕ್ಷಿಸಿಕೊಳ್ಳಲು ಮತ್ತು ಅವುಗಳ ವಿರುದ್ಧ ಎಚ್ಚರಿಕೆಯಿಂದಿರಲು ಸರ್ಕಾರದಿಂದ ಶಸ್ತ್ರಸಜ್ಜಿತವಾದ ಗ್ರಾಮ ರಕ್ಷಣಾ ಸಮಿತಿಗಳಿಗೆ ಸಿಆರ್ಪಿಎಫ್ ತರಬೇತಿ ನೀಡಲಿದೆ.
"ಸಿಆರ್ಪಿಎಫ್ ಗ್ರಾಮಸ್ಥರಿಗೆ ತರಬೇತಿ ನೀಡಲಿದೆ. ಆದರೆ ಅವರಿಗೆ ಶಸ್ತ್ರಾಸ್ತ್ರಗಳನ್ನು ಸಹ ನೀಡಬೇಕೇ, ನೀಡಿದರೂ ಅದು ಸಣ್ಣ ಶಸ್ತ್ರಾಸ್ತ್ರ ಅಥವಾ ರೈಫಲ್ ಆಗಲಿದೆಯೇ ಎಂದು ಇನ್ನೂ ನಿರ್ಧರಿಸಲಾಗಿಲ್ಲ" ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿ ಪ್ರಕಾರ, ತರಬೇತಿ ವೇಳಾಪಟ್ಟಿ, ಸೇರಿಸಬೇಕಾದ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಭಾಗವಹಿಸುವವರ ಸಂಖ್ಯೆಯನ್ನು ಸರಿಯಾದ ಸಮಯದಲ್ಲಿ ನಿರ್ಧರಿಸಲಾಗುತ್ತದೆ.
ರಾಜೌರಿ ಜಿಲ್ಲೆಯ ಧಂಗ್ರಿ ಘಟನೆಯಲ್ಲಿ ಏಳು ಜನರು ಮೃತಪಟ್ಟ ನಂತರ ಜಮ್ಮು ಮತ್ತು ಕಾಶ್ಮೀರ ಆಡಳಿತವು ಇತ್ತೀಚೆಗೆ ಗ್ರಾಮ ರಕ್ಷಣಾ ಸಮಿತಿಗಳು ಎಂದು ಕರೆಯಲ್ಪಡುವ ಗ್ರಾಮ ರಕ್ಷಣಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ಮರುಹಂಚಿಕೆ ಮಾಡಲು ಪ್ರಾರಂಭಿಸಿದೆ. ಈ ಗ್ರಾಮ ರಕ್ಷಣಾ ಸಮಿತಿಗಳು ಸ್ಥಳೀಯ ಗ್ರಾಮದ ಸ್ವಯಂಸೇವಕರನ್ನು ಒಳಗೊಂಡಿರುತ್ತವೆ.
1990 ರ ದಶಕದಲ್ಲಿ ರಾಜೌರಿ - ಪೂಂಚ್ ಪ್ರದೇಶಗಳಲ್ಲಿ ಗ್ರಾಮ ರಕ್ಷಣಾ ಸಮಿತಿಗಳಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಲಾಗಿತ್ತು. " ಈ ಸಮುದಾಯದ ಒಂದು ಘಟಕದ ಮೇಲೆ ದಾಳಿಗಳು ನಡೆದವು. ಹೀಗಾಗಿ ಸಾಮೂಹಿಕ ವಲಸೆಯನ್ನು ತಡೆಯುವ ಸಲುವಾಗಿ ಗ್ರಾಮ ರಕ್ಷಣಾ ಸಮಿತಿಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಯಿತು" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇತ್ತೀಚಿನ ದಾಳಿಯ ನಂತರ, ಭಯೋತ್ಪಾದಕರು ಜಮ್ಮುವಿನಲ್ಲಿ ಶಾಂತಿಯುತ ವಾತಾವರಣವನ್ನು ಹಾಳುಮಾಡಬಹುದು ಎಂಬ ಆತಂಕದ ನಡುವೆ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಮುಂಬರುವ ಗಣರಾಜ್ಯೋತ್ಸವದ ಕುರಿತು ಮುಂಜಾಗ್ರತೆ ವಹಿಸುತ್ತಿದೆ. ಹೀಗಾಗಿ ಗ್ರಾಮ ರಕ್ಷಣಾ ಸಮಿತಿಗಳಿಗೆ ಜಾಗರೂಕರಾಗಿರಲು ತಿಳಿಸಿದೆ.
ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಭಾರತ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಗ್ರಾಮ ರಕ್ಷಣಾ ಸಮಿತಿಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications