ಸುನಂದಾ ಕೊಲೆ ವಿಷಯ ಕೇಳಿ ದಿಗಿಲಾಯ್ತು ಎಂದ ತರೂರ್
ಬೆಂಗಳೂರು, ಜ. 6: ಸುನಂದಾ ಪುಷ್ಕರ್ರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪೊಲೀಸರು ನೀಡಿರುವ ಹೇಳಿಕೆಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
"ಪೊಲೀಸರು ನನ್ನ ದಿವಂಗತ ಪತ್ನಿ ಸುನಂದಾ ಸಾವಿನ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು ಕೇಳಿ ನಾನು ದಿಗಿಲುಗೊಂಡಿದ್ದೇನೆ. ಪ್ರಕರಣದ ಸಂಪೂರ್ಣ ತನಿಖೆಗೆ ಸಹಕಾರ ನೀಡುತ್ತೇನೆ" ಎಂದು ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. [ಸುನಂದಾ ಸಾವಿನ ಹಿಂದೆ ವಿದೇಶೀಯನ ಕೈವಾಡ]
"ನನ್ನ ಪತ್ನಿಯ ಸಾವು ಒಂದು ಕೊಲೆಯಿರಬಹುದೆಂದು ನಾವು ಯೋಚಿಸಿರಲಿಲ್ಲ. ಆದ್ದರಿಂದ ಕೊಲೆಯ ಕೂಲಂಕಷ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕು" ಎಂದು ಅವರು ಆಗ್ರಹಿಸಿದರು.
"ಇದುವರೆಗೂ ಶವಪರೀಕ್ಷೆ ಹಾಗೂ ಸಿಎಫ್ಎಸ್ಎಲ್ನಂತಹ ಇತರ ತನಿಖೆ ಕುರಿತ ಸಂಪೂರ್ಣ ವರದಿಯನ್ನು ನಮಗೆ ನೀಡಿಲ್ಲ. ಈ ವರದಿಗಳ ಒಂದು ಪ್ರತಿಯನ್ನು ನಮಗೆ ಕೂಡಲೇ ಒದಗಿಸಬೇಕೆಂದು ಪೊಲೀಸರಲ್ಲಿ ಕೋರುತ್ತೇವೆ" ಎಂದು ತಿಳಿಸಿದ್ದಾರೆ. [ಸುನಂದಾ ಪುಷ್ಕರ್ ಸಾವು : ಮೌನ ಮುರಿದ ತರೂರ್]
ಶಶಿ ತರೂರ್ ಮೇಲೇ ಶಂಕೆ : ಇದೊಂದು ಕೊಲೆ ಎಂದು ನಮಗೆ ಮೊದಲೇ ಗೊತ್ತಿತ್ತು ಎಂದು ಪುಷ್ಕರ್ ಸಂಬಂಧಿಕ ಅಶೋಕ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಶಶಿ ತರೂರ್ ಪಾತ್ರವಿಲ್ಲದೆ ಈ ಕೊಲೆ ನಡೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ. [ಅವಳನ್ನು ಬಿಟ್ಟು ಇವಳನ್ನು ಮದುವೆಯಾಗ ಬಯಸಿದ್ದ ತರೂರ್]
"ಪೊಲೀಸರು ಕೊಲೆ ಪ್ರಕರಣ ದಾಖಲಿಸಿರುವ ಕಾರಣ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಮಗೆ ವಿಶ್ವಾಸ ಮೂಡಿದೆ. ಪ್ರಕರಣದಲ್ಲಿ ಶಶಿ ತರೂರ್ ಅವರನ್ನು ತನಿಖೆಗೊಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು" ಎಂದು ಅವರು ಆಗ್ರಹಿಸಿದ್ದಾರೆ.