ದೆಹಲಿಯಲ್ಲಿ ಶೀತದ ಅಲೆ: 6 ದಿನಗಳವರೆಗೆ ಹಳದಿ ಎಚ್ಚರಿಕೆ!
ಉತ್ತರ ಭಾರತದಲ್ಲಿ ಶೀತದ ಅಲೆ ಹೆಚ್ಚಾಗಿದ್ದು ಜನ ಬೆಳಗಿನ ಜಾವ ಮತ್ತು ಸಂಜೆಯಾಗುತ್ತಿದ್ದಂತೆ ಮನೆಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಮೈಕೊರೆಯುವ ಚಳಿಗೆ ಜನ ಹೈರಾಣಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ತಾಪಮಾನ (1.4°C) ಅತ್ಯಂತ ಕಡಿಮೆ ದಾಖಲಾಗಿದೆ. ಹೀಗಾಗಿ ಇಂದಿನಿಂದ ದೆಹಲಿಯಲ್ಲಿ ಮುಂದಿನ ಆರು ದಿನಗಳವರೆಗೆ ತೀವ್ರ ಶೀತಗಾಳಿಯಿಂದಾಗಿ ಹಳದಿ ಎಚ್ಚರಿಕೆಯನ್ನು ಭಾರತ ಹವಾಮಾನ ಇಲಾಖೆ (IMD) ನೀಡಿದೆ. ಮೊದಲ ಮೂರು ದಿನಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವುದರೊಂದಿಗೆ ಮತ್ತೆ ಮೈ ಕೊರೆಯುವ ಚಳಿ ಹೆಚ್ಚಾಗಲಿದೆ. ದೆಹಲಿಯ ಜನರು ಮುಂದಿನ ಮೂರು ದಿನಗಳವರೆಗೆ ದಟ್ಟವಾದ ಮಂಜಿನ ಸ್ಥಿತಿಯನ್ನು ಕಾಣಲಿದ್ದಾರೆ.
ಬುಧವಾರದವರೆಗೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ತೀವ್ರವಾದ ಶೀತ ಅಲೆಯು ಹಿಡಿತ ಸಾಧಿಸುವ ಸಾಧ್ಯತೆಯಿದೆ ಎಂದು IMD ಭಾನುವಾರ ತಿಳಿಸಿದೆ. ಇದರೊಂದಿಗೆ IMD ಪ್ರಕಾರ ದೆಹಲಿ-NCR ನಲ್ಲಿ ಸೋಮವಾರ ಮತ್ತು ಮಂಗಳವಾರ ತಾಪಮಾನ 2 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಬಹುದು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಶೀತ ಅಲೆಯ ಸ್ಥಿತಿಗತಿ ಇಲ್ಲಿದೆ
ಹವಾಮಾನ ಇಲಾಖೆಯು ಬುಧವಾರದಂದು ತಾಪಮಾನ 4 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಇದರ ಪರಿಣಾಮವಾಗಿ ದೆಹಲಿ ನಾಗರಿಕರಿಗೆ ಸ್ವಲ್ಪ ವಿರಾಮದ ನಂತರ ಕೋಲ್ಡ್ವೇವ್ ಪರಿಸ್ಥಿತಿಗಳು ಉಂಟಾಗಬಹುದು ಎಂದು ಹೇಳಿದರು. ಮುಂದಿನ ಐದು ದಿನಗಳವರೆಗೆ ದೆಹಲಿಯಲ್ಲಿ ಭಾರೀ ಮಂಜು ಮತ್ತು ಕಡಿಮೆ ಗೋಚರತೆ ಇರಲಿದೆ ಎಂದು IMD ಮುನ್ಸೂಚನೆ ನೀಡಿದೆ.
ಸೋಮವಾರ ಬೆಳಗ್ಗೆ ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ 13 ರೈಲುಗಳು ತಡವಾಗಿ ಚಲಿಸಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇದೆಲ್ಲದರ ನಡುವೆ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಗೆ ದೆಹಲಿಯಲ್ಲಿ ತಾಲೀಮು ನಡೆಯುತ್ತಿದ್ದು ತೀವ್ತ ಮಂಜು ಪರೇಡ್ಗೆ ಅಡ್ಡಿಯನ್ನುಂಟು ಮಾಡಿದೆ.
ಇಂದು ದೆಹಲಿಯಲ್ಲಿ ತಾಪಮಾನ
IMD ಪ್ರಕಾರ ದೆಹಲಿಯು ಇಂದು ಕನಿಷ್ಠ ತಾಪಮಾನ 4.7 ° Cರಷ್ಟಿದೆ. ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ವರದಿಯಾದ ಕನಿಷ್ಠ ತಾಪಮಾನ 1.4 ° C ಮತ್ತು ಲೋಧಿ ರಸ್ತೆಯಲ್ಲಿ ಪಾದರಸವು ಸೋಮವಾರ ಬೆಳಿಗ್ಗೆ 1.6 ° C ಗೆ ಇಳಿದಿದೆ.
ದೆಹಲಿಯಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಆರು ಡಿಗ್ರಿ ಕಡಿಮೆಯಾಗಿದೆ. IMD ಪ್ರಕಾರ, "ಆಕಾಶ ಸ್ಪಷ್ಟವಾಗಿರುವುದರಿಂದ ಮತ್ತು ಸೂರ್ಯನ ಬೆಳಕು ಉತ್ತಮವಾಗಿರುವುದರಿಂದ ದೈನಂದಿನ ತಾಪಮಾನದಲ್ಲಿ ಯಾವುದೇ ಪ್ರಮುಖ ಕುಸಿತವಿಲ್ಲ. ರಾತ್ರಿ ಮತ್ತು ಮುಂಜಾನೆ ತಾಪಮಾನವು ತುಂಬಾ ಕಡಿಮೆ ಇರುತ್ತದೆ.
ಹವಾಮಾನ ಕಚೇರಿಯ ಪ್ರಕಾರ, ಹಿಮಾಲಯದಿಂದ ವಾಯುವ್ಯ ಭಾರತದ ಬಯಲು ಪ್ರದೇಶದ ಮೇಲೆ ವಾಯುವ್ಯ ಮಾರುತಗಳಿಂದ ಮುಂದಿನ ಎರಡು ದಿನಗಳಲ್ಲಿ ಕನಿಷ್ಠ ತಾಪಮಾನವು 2-4 ಡಿಗ್ರಿಗಳಷ್ಟು ಕುಸಿಯುವ ಸಾಧ್ಯತೆಯಿದೆ.