ಆಡಿಕೊಳ್ಳುವವರ ಬಾಯಿಗೆ ಆಹಾರವಾದ ಗೋರಖಪುರದ ಯೋಗಿ ಸೋಲು
Recommended Video
ಗೆದ್ದೇ ಗೆಲ್ಲುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸದ ಫಲವೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಗೋರಖಪುರ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಗಾದ ಸೋಲು, ಇದನ್ನು ಯೋಗಿ ಒಪ್ಪಿಕೊಂಡಿದ್ದಾರೆ ಕೂಡಾ..
ವಿರೋಧಿಗಳನ್ನು ಸೋಲಿಸಲೇ ಬೇಕೆಂದು ಸಂಘಟಿತ ಪ್ರಯತ್ನ ನಡೆಸಿದರೆ, ನಾಗಾಲೋಟದಲ್ಲಿರುವ ಬಿಜೆಪಿಯ ವಿರುದ್ದ ಗೆಲುವು ಗಗನಕುಸುಮವೇನಲ್ಲ ಎನ್ನುವುದನ್ನು ಗೋರಖಪುರದ ಮತದಾರ ತೋರಿಸಿಕೊಟ್ಟಿದ್ದಾನೆ. ಈ ಉಪಚುನಾವಣೆಯ ಫಲಿತಾಂಶದ ಮುಂದಿನ ರಾಜಕೀಯ ಲೆಕ್ಕಾಚಾರ ಏನೇ ಇರಲಿ, ಸದ್ಯದ ಮಟ್ಟಿಗೆ ಆಡಿಕೊಳ್ಳುವವರ ಬಾಯಿಗೆ ಆದಿತ್ಯನಾಥ್ ಆಹಾರವಾಗಿದ್ದಾರೆ.
ಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿ
ಈಗಾಗಲೇ ಮೂರು ಸುತ್ತಿನಲ್ಲಿ ಬಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡಿ ಹೋಗಿರುವ ಯೋಗಿ ಆದಿತ್ಯನಾಥ್ ಅವರಿಗೆ, ಅದೇ ಹಿಂದಿನ ಗತ್ತಿನಲ್ಲಿ ಪ್ರಚಾರಕ್ಕೆ ಬರಲು ಸ್ವಲ್ಪ ಹಿನ್ನಡೆಯಾಗುವುದಂತೂ ಹೌದು. ಜೊತೆಗೆ, ಅವರ ಭಾಷಣದಲ್ಲಿನ ಪ್ರಖರತೆಯ ಕಾವು ಕಳೆದುಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.
ಅವರ ಕ್ಷೇತ್ರವನ್ನೇ ಅವರಿಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಇನ್ನು ಇಲ್ಲಿಗೆ ಬಂದು ಏನು ಮಾಡಲು ಸಾಧ್ಯ ಎನ್ನುವ ವ್ಯಂಗ್ಯದ ಮಾತಿನ ಬಾಣಗಳು, ರಾಜ್ಯ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಅವರಿಗೆ ಚುಚ್ಚದೇ ಇರದು. ಗೋರಖಪುರದ ಸೋಲು, ರಾಜ್ಯದ ಬಿಜೆಪಿಯ ಚುನಾವಣಾ ಪ್ರಚಾರಕ್ಕೂ ಕೊಂಚ ಹಿನ್ನಡೆಯೆಂದೇ ಸದ್ಯದ ಮಟ್ಟಿಗೆ ಹೇಳಬಹುದಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಾಗಿದ್ದರೂ, ಮೋದಿ, ಅಮಿತ್ ಶಾ ನಂತರ ಜನಪ್ರಿಯತೆಯ ಆಧಾರದಲ್ಲಿ ನಂತರದ ಸ್ಥಾನದಲ್ಲಿರುವ, ಯೋಗಿ ಆದಿತ್ಯನಾಥ್ ಅವರ ಊರಲ್ಲೇ ಬಿಜೆಪಿ ಮುದುಡಿದ್ದು ಪಕ್ಷಕ್ಕೆ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಮುಂದೆ ಓದಿ..
ಯೋಗಿ ಆಡಳಿತವಿದ್ದರೂ ಕ್ಷೇತ್ರ ಉಳಿಸಿಕೊಳ್ಳಲು ಆಗಲಿಲ್ಲ
ಕರ್ನಾಟಕದ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಕನಿಷ್ಟ ಆರೇಳು ಬಾರಿಯಾದರೂ, ಯೋಗಿ ಆದಿತ್ಯನಾಥ್ ಅವರನ್ನು ಇಲ್ಲಿಗೆ ಕರೆಸಿ ಚುನಾವಣಾ ಪ್ರಚಾರಕ್ಕೆ ಇನ್ನಷ್ಟು ಮೈಲೇಜ್ ನೀಡಲು ಮುಂದಾಗಿದ್ದ ರಾಜ್ಯ ಬಿಜೆಪಿ ಘಟಕದ ಲೆಕ್ಕಾಚಾರ ಏನಿತ್ತೋ, ಅದು ಮುಂದಿನ ದಿನಗಳಲ್ಲಿ ಹೇಗಿರುತ್ತೋ ಕಾದು ನೋಡಬೇಕಿದೆ. ಕರ್ನಾಟಕಕ್ಕೆ ಬಂದಾಗ, ಅವರ ಕ್ಷೇತ್ರ, ಅವರದ್ದೇ ಆಡಳಿತವಿದ್ದರೂ ಕ್ಷೇತ್ರ ಉಳಿಸಿಕೊಳ್ಳಲು ಆಗಲಿಲ್ಲ ಎನ್ನುವ ಹೇಳಿಕೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಂದ ಬರದೇ ಇರದು.
ಎಸ್ಪಿ- ಬಿಎಸ್ಪಿ ದೋಸ್ತಿಯ ಶಕ್ತಿ ಅರ್ಥ ಮಾಡಿಕೊಳ್ಳದೆ ಹೋದೆ
ಗೋರಖಪುರದದ ಸರಕಾರೀ ಆಸ್ಪತ್ರೆಯಲ್ಲಿನ ಮಕ್ಕಳ ಸಾವು ಮತ್ತು ಉತ್ತರಪ್ರದೇಶದ ಕಾನೂನು, ಸುವ್ಯವಸ್ಥೆಯ ಬಗ್ಗೆ ಟೀಕಿಸಿದ್ದ ಕರ್ನಾಟಕ ಕಾಂಗ್ರೆಸ್ಸಿಗೆ ತನ್ನದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದ ಯೋಗಿ ಆದಿತ್ಯನಾಥ್ ಅವರಿಗೆ ಉಪಚುನಾವಣೆಯಲ್ಲಿನ ಸೋಲಿಗೆ ಜವಾಬು ನೀಡುವುದು ಕಷ್ಟವಾಗಬಹುದು. ಎಸ್ಪಿ- ಬಿಎಸ್ಪಿ ದೋಸ್ತಿಯ ಶಕ್ತಿ ಅರ್ಥ ಮಾಡಿಕೊಳ್ಳದೆ ಹೋದೆ ಎನ್ನುವ ನಿಯತ್ತಿನ ಉತ್ತರವನ್ನೇನೋ ಯೋಗಿ ನೀಡಿದ್ದಾರೆ..ಆದರೆ ರಾಜಕೀಯದಲ್ಲಿ ಇದು ವರ್ಕೌಟ್ ಆಗುತ್ತಾ?
ಯೋಗಿ ಉತ್ತರ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ
ಕರ್ನಾಟಕಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿ ಹೋಗುತ್ತಿದ್ದ ಯೋಗಿಗೆ ಸಿಎಂ ಟ್ವಿಟ್ಟರ್ ಮೂಲಕ ಚಾಟಿ ಬೀಸಿದ್ದರು, ಅದಕ್ಕೆ ಸರಿಯಾದ ಉತ್ತರವನ್ನು ಟ್ವಿಟ್ಟರ್ ಮೂಲಕವೇ ಯೋಗಿ ನೀಡಿದ್ದರು. ನಿಮ್ಮ ಕ್ಷೇತ್ರವನ್ನೇ ನಿಮಗೆ ಉಳಿಸಿಕೊಳ್ಳಲಾಗಲಿಲ್ಲ, ಇಲ್ಲಿಗೆ ಬಂದು ನನಗೇನು ಬೋಧನೆ ಮಾಡುತ್ತೀರಾ ಎನ್ನುವ ಹೇಳಿಕೆ ಸಿಎಂ ಕಡೆಯಿಂದ ಬರದೇ ಇರದು, ಇದಕ್ಕೆ ಯೋಗಿಯವರ ಉತ್ತರ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ನಾನು ಮುಖ್ಯಮಂತ್ರಿಯಾದ ನಂತರ ಒಂದೇ ಒಂದು ಚುನಾವಣೆ ಸೋತಿಲ್ಲ
ನಾನು ಮುಖ್ಯಮಂತ್ರಿಯಾದ ನಂತರ ಒಂದೇ ಒಂದು ಚುನಾವಣೆ ಸೋತಿಲ್ಲ ಎಂದು ಮತದಾರರ ಮುಂದೆ ಸಿದ್ದರಾಮಯ್ಯ ಅಬ್ಬರಿಸದೇ ಇರಲಾರರು. ಅಲ್ಲಿ ನಡೆದದ್ದು ಲೋಕಸಭಾ ಚುನಾವಣೆ, ಇಲ್ಲಿ ನಡೆದದ್ದು ವಿಧಾನಸಭಾ ಚುನಾವಣೆಯಾದರೂ, ಕಾಂಗೆಸ್ಸಿಗೆ ಬಿಜೆಪಿ ವಿರುದ್ದ ಟೀಕಿಸಲು, ಯೋಗಿ ವಿರುದ್ದ ವಾಗ್ದಾಳಿ ನಡೆಸಲು, ಗೋರಖಪುರದ ಫಲಿತಾಂಶ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ.
ಸೋನಿಯಾ, ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಕಿವಿಮಾತೊಂದನ್ನು ಹೇಳಿದ್ದರು
ಕೆಲವೇ ಕೆಲವು ದಿನಗಳ ಹಿಂದೆ ಸೋನಿಯಾ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಕಿವಿಮಾತೊಂದನ್ನು ಹೇಳಿದ್ದರು. ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿರಲಿ, ಆದರೆ ಓವರ್ ಕಾನ್ಫಿಡೆನ್ಸ್ ಬೇಡ ಎಂದು. ಯೋಗಿ ಆದಿತ್ಯನಾಥ್ ಆಡಳಿತದ ಅವಧಿಯಲ್ಲಿ ನಡೆದ ಗೋರಖಪುರ ಮತ್ತು ಫುಲ್ ಪುರ್ ಲೋಕಸಭಾ ಕ್ಷೇತ್ರ, ಬಿಹಾರದಲ್ಲಿನ ಬಿಜೆಪಿ ಮೈತ್ರಿಕೂಟದ ಅವಧಿಯಲ್ಲಿನ ಅಸೆಂಬ್ಲಿ ಫಲಿತಾಂಶ, ಬಿಜೆಪಿಗೆ ಎಚ್ಚರಿಕೆಯ ಗಂಟೆಯೇ ಸರಿ...
ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರುತ್ತರ, ಧೂಳಿಂದ ಮೇಲೆದ್ದ ಎಸ್ ಪಿ