ತಮಿಳುನಾಡು: ಕಾಡ್ಗಿಚ್ಚಿನಲ್ಲಿ ಸಿಲುಕಿದ 20 ವಿದ್ಯಾರ್ಥಿಗಳು, ಕೆಲವರ ರಕ್ಷಣೆ
ಚೆನ್ನೈ, ಮಾರ್ಚ್ 11: ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಎಂಬಲ್ಲಿ ಭಾನುವಾರ ಹೊತ್ತಿಕೊಂಡಿರುವ ಕಾಡ್ಗಿಚ್ಚಿನ ನಡುವೆ ಸುಮಾರು 20 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಕೆಲವು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವು ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.
ಟ್ರೆಕ್ಕಿಂಗ್ಗೆ ಹೋಗಿದ್ದ 20 ಮಮದಿ ವಿದ್ಯಾರ್ಥಿಗಳು ಕಾಡ್ಗಿಚ್ಚಿನ ನಡುವೆ ಸಿಲುಕಿಕೊಂಡಿದ್ದರು. ಭಾರತೀಯ ವಾಯು ಸೇನೆ ಸಹಾಯದಿಂದ ಕೆಲವರನ್ನು ರಕ್ಷಿಸಲಾಗಿದ್ದು, ಇನ್ನು ಕೆಲವು ವಿದ್ಯಾರ್ಥಿಗಳು ಕಾಡಿನಲ್ಲೇ ಇದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳು ಕಾಡ್ಗಿಚ್ಚಿನಲ್ಲಿ ಸಿಲುಕಿರುವ ವಿಷಯ ತಿಳಿದ ಕೂಡಲೇ ತಮಿಳು ನಾಡು ಮುಖ್ಯಮಂತ್ರಿ ಅವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಾಯ ಯಾಚಿಸಿದ್ದಾರೆ. ನಿರ್ಮಲಾ ಅವರು ಭಾರತೀಯ ವಾಯುಸೇನೆಯನ್ನು ನೆರವು ನೀಡುವಂತೆ ಆದೇಶಿಸಿದ್ದಾರೆ ತಕ್ಷಣವೇ ನೆರವಿಗೆ ಧಾವಿಸಿರುವ ಭಾರತೀಯ ವಾಯುಸೇನೆ ಕಾರ್ಯಾಚರಣೆ ನಡೆಸಿ 10-15 ವಿದ್ಯಾರ್ಥಿಗಳನ್ನು ರಕ್ಷಿಸಲು ಯಶಸ್ವಿಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ಕೆಲವು ವಿದ್ಯಾರ್ಥಿಗಳನ್ನು ರಕ್ಷಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.