ಹಾವೇರಿ ಜಿಲ್ಲೆ ಹಳ್ಳಿಯ ಪ್ರತಿಭೆ ಈಗ ಭಾರತೀಯ ವಾಯುಪಡೆ ಪೈಲಟ್
ಹಾವೇರಿ, ಮೇ 31: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಯುವಕನೊಬ್ಬ ಭಾರತೀಯ ವಾಯಪಡೆ ಪೈಲಟ್ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಭಾರತೀಯ ವಾಯಪಡೆ ಪೈಲಟ್ ಆಗಿ ಆಯ್ಕೆಗೊಳ್ಳುವ ಮೂಲಕ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಪುನೀತ್ ಬಣಕಾರ್, ಹಾವೇರಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
2019ರಲ್ಲಿ ಯುಪಿಎಸ್ಸಿ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಪರೀಕ್ಷೆಯ 140ನೇ ಬ್ಯಾಚ್ನಲ್ಲಿ ತೇರ್ಗಡೆ ಹೊಂದಿ ವಾಯಪಡೆ ಪೈಲಟ್ ಹುದ್ದೆಗೆ ಆಯ್ಕೆಯಾಗಿದ್ದರು.

ಮಹಾರಾಷ್ಟ್ರದ ಪುಣೆ ಕಡಕ ವಾಸ್ಲಾದಲ್ಲಿ ವಾಯುಪಡೆ ಪೈಲಟ್ 3 ವರ್ಷಗಳ ತರಬೇತಿ ಪಡೆದಿದ್ದಾರೆ. ಮೇ 29 ರಂದು ನಡೆದ ಪಾಸಿಂಗ್ ಔಟ್ ಪರೇಡ್ನಲ್ಲಿ ಮತ್ತೊಮ್ಮೆ ತೇರ್ಗಡೆ ಹೊಂದಿದ್ದು, ವಿಶೇಷ ತರಬೇತಿ ಪಡೆಯಲು ಹೈದರಾಬಾದ್ಗೆ ತೆರಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೆಚ್ಚುಗೆ
"ನಮ್ಮ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಪ್ರತಿಭಾವಂತ ಯುವಕನೊಬ್ಬ ವಾಯುಪಡೆ ಫೈಟರ್ ಪೈಲಟ್ ಹುದ್ದೆಗೆ ನೇಮಕಗೊಂಡಿರುವುದು ನಮ್ಮ ಕರ್ನಾಟಕಕ್ಕೆ ಅತ್ಯಂತ ಹೆಮ್ಮೆಯ ವಿಷಯ. ನಿಮ್ಮ ಮುಂದಿನ ದಿನಗಳಿಗೆ ಶುಭವಾಗಲಿ ಪುನೀತ್ ಬಣಕಾರ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಬಿ.ವೈ ವಿಜಯೇಂದ್ರ ಶ್ಲಾಘನೆ
"ಎಷ್ಟೇ ಅಡಚಣೆಗಳಿರಲಿ, ಸತತ ಪರಿಶ್ರಮ, ಸಾಧಿಸುವ ಛಲ, ಧೈರ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನಲು ನಮ್ಮ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಹೊಸಳ್ಳಿ ಗ್ರಾಮದ ಪುನೀತ ಬಣಕಾರ ನಿದರ್ಶನವಾಗಿದ್ದಾರೆ. ಅಪ್ಪಟ ಹಳ್ಳಿಯ ಪ್ರತಿಭಾವಂತ ಯುವಕನೊಬ್ಬ ವಾಯುಪಡೆ ಫೈಟರ್ ಪೈಲಟ್ ಹುದ್ದೆಗೆ ನೇಮಕಗೊಂಡಿರುವುದು ಹೆಮ್ಮೆಯ ವಿಷಯ. ಶುಭವಾಗಲಿ ಪುನೀತ್'' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಶ್ಲಾಘಿಸಿದ್ದಾರೆ.












Click it and Unblock the Notifications