ಆರ್ಎಸ್ಎಸ್ ಸಂಘಟನೆ ಬಗ್ಗೆ ಟೀಕಿಸಿದ್ದಕ್ಕೆ ಜೆಡಿಎಸ್ ಪಕ್ಷ ಸೋತಿದೆ: ಶಾಸಕ ಪ್ರೀತಂ ಗೌಡ
ಹಾಸನ, ನವೆಂಬರ್ 5: "ದೇಶಪ್ರೇಮ ಮತ್ತು ಆರ್ಎಸ್ಎಸ್ ಸಂಘಟನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಜೆಡಿಎಸ್ ಪಕ್ಷವನ್ನು ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಮತದಾರರು ತಿರಸ್ಕರಿಸಿ, ಉಪ ಚುನಾವಣೆ ಫಲಿತಾಂಶದ ಮೂಲಕ ಅವರಿಗೆ ಉತ್ತರ ನೀಡಿದ್ದಾರೆ," ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಆರ್ಎಸ್ಎಸ್ ಸಂಘಟನೆಯ ಬಗ್ಗೆ ಟೀಕೆ ಮಾಡಿರುವ ಜೆಡಿಎಸ್ ಬಗ್ಗೆ ನನ್ನ ವಿರೋಧವಿದೆ, ನಾನು ಮನೆ ಮತ್ತು ದೇಶ ಕಟ್ಟುವವನೇ ಹೊರತು, ಒಡೆಯುವ ಕೆಲಸ ಮಾಡುವವನಲ್ಲ ಎಂದು ಜೆಡಿಎಸ್ಗೆ ಶಾಸಕ ಪ್ರೀತಂ ಗೌಡ ಟಾಂಗ್ ನೀಡಿದ್ದಾರೆ.
ಹಾಸನ ನಗರಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಂದು ಏನಿದ್ದರೂ ಮನೆ ಕಟ್ಟುವ ಕೆಲಸ. ಬೇರೆಯವರ ಹಾಗೆ ಮನೆ, ಅಂಗಡಿ, ಬಿ.ಎಂ. ರಸ್ತೆಯನ್ನು ಹೊಡೆಯುವ ಕೆಲಸ ಮಾಡುವುದಿಲ್ಲ," ಎಂದು ಮಾಜಿ ಸಚಿವ, ಜೆಡಿಎಸ್ನ ಎಚ್.ಡಿ. ರೇವಣ್ಣನಿಗೆ ಪರೋಕ್ಷ ತಿರುಗೇಟು ನೀಡಿದರು.
"ಇನ್ನು ಹಾಸನ ನಗರದ ಹೊಸ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣಗಳ ಮೇಲ್ಸೇತುವೆ ಕಾಮಗಾರಿಗಳು ಮುಗಿಯಬೇಕಿತ್ತು. ಆದರೆ ಕೋವಿಡ್ ಹಿನ್ನಲೆಯಲ್ಲಿ 3 ತಿಂಗಳ ಕಾಲಾವಕಾಶ ಕೇಳಿದ್ದು, ಮಾರ್ಚ್ 31ರ ವೇಳೆಗೆ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಹಾಸನ ನಗರ ಮತ್ತು ಸುತ್ತಮುತ್ತಲ ಹೊಂದಿಕೊಂಡಿರುವ 25 ಗ್ರಾಮಗಳನ್ನು ನಗರಸಭೆಯ ವ್ಯಾಪ್ತಿಗೆ ತುರುವ ಮೂಲಕ ನಂತರದಲ್ಲಿ ಜನಸಂಖ್ಯೆ ಅನುಗುಣದ ಆಧಾರದ ಮೇಲೆ ಹಾಸನ ತಾನಾಗಿಯೇ ಮಹಾನಗರಪಾಲಿಕೆ ಆಗಲಿದೆ," ಎಂದರು.
"ನಾನು ನನ್ನ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಸಂಕ್ಷಿಪ್ತ ಮಾಹಿತಿಯನ್ನು ಶ್ವೇತಪತ್ರದ ರೀತಿಯಲ್ಲಿಯೇ ಮುದ್ರಿಸಿ ಬಿಡುಗಡೆ ಮಾಡುತ್ತೇನೆ. ಅಭಿವೃದ್ದಿ ಮಾಡುತ್ತೇನೆ ಎಂದವರು ಕಳೆದ 25 ವರ್ಷಗಳಿಂದಲೂ ಮಾಡುತ್ತಲೇ ಇದ್ದಾರೆ. ಆದರೆ ನಾನು ಕೆಲಸ ಮಾಡಿದ್ದೇನೆ ಎಂದು ಹೇಳುವವನು. ನಾನು ಮಾತನಾಡುವ ಶಾಸಕನಲ್ಲ, ಕೆಲಸ ಮಾಡುವ ಶಾಸಕ," ಎಂದು ಪ್ರೀತಂಗೌಡ ಹೇಳಿದರು.
"ನನ್ನ ಅವಧಿಯಲ್ಲಿ ಯಾವ ರಸ್ತೆಯ ಕಾಮಗಾರಿಯ ಗುಣಮಟ್ಟ ಸರಿಯಿಲ್ಲವೋ ಅದನ್ನು ಗುಣಮಟ್ಟದಲ್ಲಿ ಮಾಡಿಸುವುದು ನನ್ನ ಕರ್ತವ್ಯ ಅದನ್ನು ಮಾಡುತ್ತಿದ್ದೇನೆ. ನಗರದ ಮೂರ್ನಾಲ್ಕು ಕಡೆ ರಸ್ತೆ ಸರಿಯಿರಲಿಲ್ಲ. ಅದನ್ನು ಸರಿಪಡಿಸಿದ್ದೇನೆ," ಎಂದು ಹಿಂದೆ ಎಚ್.ಡಿ. ರೇವಣ್ಣನವರು ಆರೋಪಿಸಿದ್ದ ರಸ್ತೆ ವಿಚಾರಕ್ಕೆ ಪ್ರತ್ಯುತ್ತರ ನೀಡಿದರು.
ದೇಶಪ್ರೇಮ ಮರೆತು, ಆರ್ಎಸ್ಎಸ್ ಸಂಘಟನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಜೆಡಿಎಸ್ ಪಕ್ಷವನ್ನು ಎರಡು ಕ್ಷೇತ್ರಗಳ ಮತದಾರರು ತಿರಸ್ಕರಿಸಿದ್ದಾರೆ. ಅದಕ್ಕೆ ಉಪ ಚುನಾವಣೆಯ ಫಲಿತಾಂಶದ ಮೂಲಕ ಉತ್ತರವನ್ನು ಮತದಾರರು ನೀಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರುಆರ್ಎಸ್ಎಸ್ ಸಂಘಟನೆ ಬಗ್ಗೆ ಟೀಕಿಸುವುದಕ್ಕೆ ನನ್ನ ವಿರೋಧವಿದ್ದು, ಈಗ ಚುನಾವಣೆ ಮುಗಿದಿದೆ. ಈಗಲಾದರೂ ಆರ್ಎಸ್ಎಸ್ ಸಂಘಟನೆಗೆ ಬಂದು ಚರ್ಚಿಸಿ ಸಂಘಟನೆ ಏನೆಂಬುದನ್ನು ತಿಳಿದುಕೊಳ್ಳಲಿ ಎಂದು ಆಹ್ವಾನ ನೀಡಿದರು.
Recommended Video
ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿ. ರಾಜ್ಯದಲ್ಲಿ ನಡೆದ ಎರಡು ಉಪ ಚುನಾವಣೆಯಲ್ಲಿ ಜೆಡಿಎಸ್ ಅತ್ಯಂತ ಕಳಪೆ ಪ್ರದರ್ಶನ ತೋರಿಸಿದೆ. ಅವರ ತಪ್ಪಿನಿಂದಲೇ ಜೆಡಿಎಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳವ ಪರಿಸ್ಥಿತಿಗೆ ಬಂದಿದೆ. ಈ ಭಾಗದಲ್ಲಿ ಮಾಜಿ ಪ್ರಧಾನಿ, ಮಾಜಿ ಸಿಎಂ, ಸಂಸದರು, ಮಾಜಿ ಸಚಿವರು ಎಲ್ಲಾ ನಾಯಕರು ಪ್ರಚಾರ ಮಾಡಿದರೂ ಅವರ ಶಕ್ತಿ ಕುಂದಿದೆ. ಅವರ ಸ್ಪರ್ಧೆಯಿಂದಲೇ ನಾವು ಗೆಲ್ಲಲು ಸಾಧ್ಯವಾಯಿತು ಎಂದು ಟೀಕಿಸಿದರು.