ಹಾಸನದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರತಿನಿಧಿ ಎಲೆಕ್ಷನ್: ನಡುರಸ್ತೆಯಲ್ಲಿ ಬಡಿದಾಡಿಕೊಂಡ ವಿದ್ಯಾರ್ಥಿಗಳು
ಹಾಸನ, ಡಿಸೆಂಬರ್, 21: ಮಲೆನಾಡು ತಾಂತ್ರಿಕ ತಾಂತ್ರಿಕ ಮಹಾವಿದ್ಯಾಲ ಹಾಸನ ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಆಗಿದೆ. ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಅನೇಕ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಿನ್ನೆ ಕಾಲೇಜಿನಲ್ಲಿ ಪ್ರತಿನಿಧಿ ಎಲೆಕ್ಷನ್ ನಡೆದಿದ್ದು, ಗೆದ್ದವರು ರಸ್ತೆಯಲ್ಲಿ ಮೆರವಣಿಗೆ ಮಾಡಿಕೊಂಡು ಅದ್ದೂರಿಯಾಗಿ ಸಂಭ್ರಮಾಚರಣೆಗೆ ಮುಂದಾಗಿದ್ದರು. ಈ ವೇಳೆ ಗೆದ್ದವರು ಹಾಗೂ ಸೋಲನುಭವಿಸಿದವರ ನಡುವೆ ಗಲಾಟೆಯಾಗಿದೆ. ಅಲ್ಲದೇ ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ. ನಂತರ ಪೊಲೀಸರು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಹಾಸನ ನಗರದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿನ್ನೆ ಇಂತಹದ್ದೊಂದು ಘಟನೆ ನಡೆದಿದೆ. ಮೆಕ್ಯಾನಿಕಲ್ ವಿಭಾಗದ ಪ್ರತಿನಿಧಿ ಆಯ್ಕೆಗಾಗಿ ಚುನಾವಣೆ ನಡೆದಿದ್ದು, ನಿನ್ನೆಯೇ ಫಲಿತಾಂಶ ಬಂದಿದೆ. ಫಲಿತಾಂಶದಲ್ಲಿ ಗೆದ್ದ ವಿದ್ಯಾರ್ಥಿಗಳ ಗುಂಪು ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಸಂಭ್ರಮಿಸುವುದಕ್ಕೆ ಬಡಾವಣೆ ಪೊಲೀಸರ ಅನುಮತಿಯನ್ನು ಕೇಳಿದ್ದಾರೆ. ಈ ವೇಳೆ ಪೊಲೀಸರು ಸಂಭ್ರಮಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಕೂಡ ವಿದ್ಯಾರ್ಥಿಗಳು ಅದ್ಧೂರಿಯಾಗಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ಸಂಭ್ರಮಿಸುವುದಕ್ಕೆ ಮುಂದಾಗಿದ್ದಾರೆ. ಆಗ ಸೋತ ವಿದ್ಯಾರ್ಥಿಗಳ ಗುಂಪಿನವರು ಕೂಡ ಅದೇ ಜಾಗಕ್ಕೆ ಬಂದಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಗಲಾಟೆ ಆಗಿದೆ. ಮಾತಿಗೆ ಮಾತು ಬೆಳೆದು ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಅರಸೀಕೆರೆ ಬಂದ್ ಯಶಸ್ವಿ
ಗಲಾಟೆ ಬಗ್ಗೆ ಹರಿರಾಮ್ ಶಂಕರ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಸನ ಎಸ್ಪಿ ಹರಿರಾಮ್ ಶಂಕರ್, ಸಾರ್ವಜನಿಕ ಪ್ರದೇಶದಲ್ಲಿ ನ್ಯೂಸೆನ್ಸ್ ಕ್ರಿಯಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಗುಂಪುಗಳ ಮೇಲೆ ಪ್ರಕರಣ ದಾಖಲಿಸುತ್ತೇವೆ. ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರೊಂದಿಗೆ ಮಾತನಾಡಿ, ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಓರ್ವನ ಮೇಲೆ 150ಕ್ಕೂ ಹೆಚ್ಚು ಜನರಿಂದ ಹಲ್ಲೆ
ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಿಕೊಂಡಿದ್ದಾರೆ. ಓರ್ವನ ಮೇಲೆ ತುಂಬಾ ಜನ ಸೇರಿಕೊಂಡು ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರೂ ಕೂಡ ಘಟನೆಯ ಬಗ್ಗೆ ಸ್ಥಳದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಹುಡುಗನ ಮೇಲೆ 150ಕ್ಕೂ ಹೆಚ್ಚು ಜನರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಕಾಲೇಜಿನಲ್ಲಿ ಪ್ರತಿನಿಧಿ ಆಯ್ಕೆ ಎಲೆಕ್ಷನ್
ಇನ್ನು ಈ ಬಗ್ಗೆ ಪ್ರಕ್ರಿಯೆ ನೀಡಿರುವ ಕಾಲೇಜು ಪ್ರಾಂಶುಪಾಲರು, ಕಾಲೇಜಿನಲ್ಲಿ ಪ್ರತೀ ವರ್ಷವೂ ವಿಭಾಗದ ಪ್ರತಿನಿಧಿಯ ಆಯ್ಕೆ ನಡೆಯುತ್ತದೆ. ಈ ಸಂಬಂಧ ನಿನ್ನೆ ಮೆಕ್ಯಾನಿಕಲ್ ವಿಭಾಗದಲ್ಲಿ ಎಲೆಕ್ಷನ್ ಇತ್ತು. ನಾಮಿನೇಶನ್ ಫೈಲ್ ಮಾಡಿದಾಗಲೇ ಅವರಿಂದ ಪ್ರಮಾಣ ಪತ್ರವನ್ನು ತೆಗೆದುಕೊಂಡು, ಯಾವುದೇ ಸಮಸ್ಯೆ ಮಾಡುವುದಿಲ್ಲವೆಂದು ಬರೆಸಿಕೊಳ್ಳಲಾಗಿತ್ತು. ನಿನ್ನೆ ಎಲೆಕ್ಷನ್ ಪ್ರಕ್ರಿಯೆ ಎಲ್ಲಾ ಮುಗಿದ ಬಳಿಕ, ಪೊಲೀಸರ ಅನುಮತಿ ಪಡೆಯದೇ ಸಂಭ್ರಮಾಚರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಗ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಇದು ಕಾಲೇಜು ರೆಪಿಟೇಶನ್ಗೂ ಕೂಡ ಧಕ್ಕೆಯಾಗಿದೆ. ಪೋಷಕರನ್ನು ಕರೆಸಿ ಈ ಬಗ್ಗೆ ಮಾತನಾಡುತ್ತೇವೆ. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದರು.
ರಾಜಕೀಯ ಮುಖಂಡರು ಭಾಗಿ, ಆರೋಪ
ಪ್ರತಿಷ್ಠಿತ ಕಾಲೇಜಿನಲ್ಲಿ ಆಗಿರುವ ಗಲಾಟೆ ಹಿಂದೆ ರಾಜಕೀಯ ಪಕ್ಷಗಳ ಕೈವಾಡವಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಜಕೀಯ ಪಕ್ಷದ ಮುಖಂಡರುಗಳ ಸಂಬಂಧಿಕರೂ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪೋಷಕರು ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎನ್ನುವ ನಿಟ್ಟಿನಿಂದ ಕಷ್ಟಪಟ್ಟು ಕೂಲಿ ಮಾಡಿ ಓದಿಸುತ್ತಾರೆ. ಮಕ್ಕಳು ಮಾತ್ರ ಎಲೆಕ್ಷನ್, ಗಲಾಟೆ, ಗದ್ದಲ ಮಾಡಿಕೊಂಡು ಭವಿಷ್ಯ ಹಾಳುಮಾಡಿಕೊಳ್ಳುತ್ತಾ ಇದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರು ಗಮನಹರಿಸಬೇಕಿದೆ ಎನ್ನುವುದು ಸ್ಥಳೀಯರ ಆಶಯವಾಗಿದೆ.