ಹೇಮಾವತಿ ಮೇಲ್ದಂಡೆ ನಾಲೆಯಿಂದ 205 ಕೆರೆಗಳಿಗೆ ನೀರು
ಹಾಸನ, ಜೂನ್ 22: 'ಪ್ರಸ್ತುತದ ಸಂದರ್ಭದಲ್ಲಿ ನೀರು ಬಂಗಾರಕ್ಕೆ ಸಮನಾಗಿದ್ದು, ನಾಲೆಯಲ್ಲಿ ಹರಿಸುತ್ತಿರುವ ಪ್ರತಿ ಹನಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕು' ಎಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ತಿಳಿ ಹೇಳಿದ್ದಾರೆ.
ಅರಕಲಗೂಡು ಸಮೀಪದ ಹೇಮಾವತಿ ಜಲಾಶಯದ ಹೇಮಾವತಿ ಬಲ ಮೇಲ್ದಂಡೆ ಆರಂಭದ ಗೇಟ್ ಬಳಿ ಬೋರಣ್ಣಗೌಡ ನಾಲೆಗೆ ನೀರು ಹರಿಸಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಸುಮಾರು 10 ವರ್ಷಗಳ ಕಾಲ ಬರ ಪರಿಸ್ಥಿತಿ ಇತ್ತು. ಜಲಾಶಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬೋರಣ್ಣಗೌಡ ನಾಲೆಗೆ ಜೂನ್ ತಿಂಗಳಿನಲ್ಲೇ ಹೇಮಾವತಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ.

ಬಲ ಮೇಲ್ಡಂಡೆ ನಾಲೆ ಎತ್ತರಲ್ಲಿದ್ದು, ಜಲಾಶಯ ತುಂಬಿದಾಗ ಮಾತ್ರ ನೀರು ಬಿಡಲು ಸಾಧ್ಯ. ನದಿಗೆ ಮತ್ತು ಇತರೆ ನಾಲೆಗಳಿಗೆ ನೀರು ಬಿಟ್ಟರೆ ಈ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ.
ಈ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಮತ್ತು ಬತ್ತಿಹೋಗಿರುವ ಕೆರೆಕಟ್ಟೆಗಳಲ್ಲಿ ಅಂತರ್ಜಲ ವೃದ್ಧಿಯಾಗಲಿ ಎಂಬ ಆಶಯದಿಂದ ಈಗ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ರೈತರು ಮತ್ತು ಜನರು ಇದನ್ನು ಅರಿತು ಹನಿ ನೀರೂ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರಿದರು.
ತಾವು ಶಾಸಕನಾಗಿ ಆಯ್ಕೆಯಾದ ನಂತರ ಮೊದಲ ಸಭೆ ನಡೆಸಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ, ಕಳೆದ ಸಾಲಿನಲ್ಲಿ ಕುಡಿಯುವ ನೀರಿಗಾಗಿಯೇ ಹೋರಾಟ ನಡೆಸಲಾಗಿತ್ತು. ಆಗ ಜಲಾಶಯದಲ್ಲಿ ಕೇವಲ 3.5 ಟಿ.ಎಂ.ಸಿ ನೀರಿತ್ತು ಎಂದು ಅವರು ಸ್ಮರಿಸಿದರು. ಎಲ್ಲರ ಅದೃಷ್ಟದಿಂದ. ಈ ಬಾರಿ ಮುಂಗಾರು ಉತ್ತಮವಾಗಿದೆ. ಜಲಾಶಯದಲ್ಲಿ 20.56 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.

ಕುಡಿಯುವ ನೀರಿನ ಸಮಸ್ಯೆ: ಸರ್ಕಾರಕ್ಕೆ ಇಲ್ಲಿನ ಜನರು ಜಾನುವಾರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ವರದಿ ಸಲ್ಲಿಸಿದ್ದು, ಪರಿಸ್ಥಿತಿಯ ತೀವ್ರತೆ ಮತ್ತು ಅನಿವಾರ್ಯತೆ ಅರಿತು ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮತ್ತು ಲೋಕೋಪಯೋಗಿ ಸಚಿವರಾದ ರೇವಣ್ಣ ಅವರು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ರವರು ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಸಕಾರಾತ್ಮಕವಾಗಿ ಸ್ಪಂದಿಸಿ ಕುಡಿಯುವ ನೀರಿಗೆ ನಾಲೆಯಲ್ಲಿ ನೀರು ಹರಿಸಲು ಅದೇಶ ನೀಡಿದ್ದಾರೆ ಎಂದು ಶಾಸಕರು ಹೇಳಿದರು.
ಬೋರಣ್ಣಗೌಡ ನಾಲೆ ವ್ಯಾಪ್ತಿಯಲ್ಲಿ 205 ಕೆರೆಗಳು ಬರುತ್ತವೆ. ಅವುಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಬೇಕಿದೆ. ಈ ಮಾನವೀಯ ಸಹಕಾರಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.












Click it and Unblock the Notifications