ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಜೆಸಿಬಿ, ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ
ಗದಗ, ಜನವರಿ 11: ಮನೆ ಮುಂದೆ ಆಟವಾಡುತ್ತಿದ್ದವನ ಮೇಲೆ ಏಕಾಏಕಿ ಜೆಸಿಬಿ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ನಡೆದಿದೆ. ಮನ್ವಿತ್ ಮಂಜುನಾಥ್ ಏರಿಮನಿ (5) ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.
ಮೃತ ಮನ್ವಿತ್ ಮಂಜುನಾಥ್ ಏರಿಮನಿ ಶಬ್ಬೀರ್ ನಗರದ ತಮ್ಮ ನಿವಾಸದ ಮುಂದೆ ಆಟವಾಡುತ್ತಿದ್ದನು. ಈ ವೇಳೆ ಜೆಸಿಬಿ ಪಟ್ಟಣದ ಶಬ್ಬೀರ್ ನಗರದಿಂದ ಶಿರಹಟ್ಟಿ ಮಾಗಡಿ ಕಡೆಗೆ ತೆರಳುತ್ತಿದ್ದ ಜೆಸಿಬಿ ಚಾಲಕನ ನಿಯಂತ್ರಣ ತಪ್ಪಿ ಬಾಲಕನ ಮೇಲೆ ಹರಿದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮನ್ವಿತ್ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಜೆಸಿಬಿ ಚಾಲಕನ ಅಜಾಗರುಕತೆಯಿಂದ ಈ ಅವಘಡ ಸಂಭವಿಸಿದ್ದು, 5 ವರ್ಷದ ಬಾಲಕ ಜೀವ ಕಳೆದುಕೊಂಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಜೆಸಿಬಿ ಚಾಲಕನ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ವ್ಯಕ್ತಿ ಸಾವು
ಕಟ್ಟಡ ಕಾರ್ಮಿಕ ಕೆಲಸದ ವೇಳೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಐಡಿಎಸ್ಎಮ್ಟಿ ಲೇಔಟ್ನಲ್ಲಿ ನಡೆದಿದೆ. ಹೊರ ರಾಜ್ಯದ ಕಟ್ಟಡ ಕಾರ್ಮಿಕ ಹನುಮೇಶ್ (26) ಎಂಬಾತ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಹನುಮೇಶ್ ಹಾಗೂ ಆತನ ತಂಡ ಐಡಿಎಸ್ಎಮ್ಟಿ ಲೇಔಟ್ನಲ್ಲಿ ಕಟ್ಟಡವೊಂದನ್ನು ನಿರ್ಮಿಸುತ್ತಿದ್ದರು. ಈ ಕಾಮಗಾರಿ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ವಿದ್ಯುತ್ ಪ್ರವಹಿಸಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಕಾರ್ಮಿಕ ರಮೇಶ್ ಎನ್ನುವಾತ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ರಾಯಚೂರು ನಗರದ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ನಡೆಸಿದ್ದಾರೆ.












Click it and Unblock the Notifications