ಮಹದಾಯಿ ಬಗ್ಗೆ ನವಲಗುಂದ ಶಾಸಕ ಕೋನರಡ್ಡಿ ಲೇಖನ
ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ 13 ತಾಲೂಕುಗಳ ಲಕ್ಷಾಂತರ ಜನರ ಕುಡಿಯುವ ನೀರಿನ ಏಕೈಕ ಆಶಾಕಿರಣವಾದ ಮಹಾದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗಾಗಿ ಕಳೆದ ಹಲವು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ.
ಅದು ಕಳೆದ 500ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಮಹಾಜನಾಂದೋಲನವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ನವಲಗುಂದ, ನರಗುಂದ, ಅಣ್ಣಿಗೇರಿ, ಹುಬ್ಬಳ್ಳಿ-ಧಾರವಾಡ, ಬೈಲಹೊಂಗಲ, ಬದಾಮಿ, ರಾಮದುರ್ಗ, ಖಾನಾಪೂರ ಹಾಗೂ ಬೆಂಗಳೂರ ಸೇರಿದಂತೆ ರಾಜ್ಯದ ವಿವಿಧೆಡೆ ಕಳೆದ ಒಂದು ವರ್ಷದಿಂದ ರೈತರು, ರೈತಪರ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಈ ಹೋರಾಟಕ್ಕೆ ಇಡೀ ಚಿತ್ರರಂಗವೇ ಸಂಪೂರ್ಣ ಬೆಂಬಲ ನೀಡುವ ಮೂಲಕ ಬೀದಿಗಿಳಿದಿದ್ದು ಯಾರೊಬ್ಬರು ಮರೆಯುವಂತಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ನೂರಾರು ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಬಹಿರಂಗ ಸಮಾವೇಶ ನಡೆಸುವ ಮೂಲಕ ಉತ್ತರ ಕರ್ನಾಟಕದ ಜನತೆಯ ಕುಡಿಯುವ ನೀರಿನ ಯೋಜನೆಗೆ ಸ್ಪಂದಿಸಿದ್ದಾರೆ.
ವ್ಯಾಪಾರಸ್ಥರು, ವಿಧ್ಯಾರ್ಥಿಗಳು, ಎಲ್ಲ ಜನಪ್ರತಿನಿಧಿಗಳು ಕಳಸಾ-ಬಂಡೂರಿ ಯೋಜನೆ ಜಾರಿಯ ಹೋರಾಟಕ್ಕಾಗಿ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿ, ಕುಡಿಯುವ ನೀರಿನ ಹಕ್ಕಿಗಾಗಿ, ವರ್ಷಗಟ್ಟಲೇ ಹೋರಾಟಗಳನ್ನು ನಡೆಸಿದ್ದಾರೆ.
ಮಹದಾಯಿ ನ್ಯಾಯಾಧೀಕರಣದ ನ್ಯಾಯಮೂರ್ತಿ ಜೆ.ಎಂ. ಪಾಂಚಾಳ, ನ್ಯಾಯಾಧೀಕರಣದ ಹೊರಗಡೆಯೇ ರಾಜೀ ಸಂಧಾನ ಮಾಡಿಕೊಳ್ಳಲು ತಮ್ಮ ಅಭ್ಯಂತರವಿಲ್ಲ ಎಂದು ಮೂರು ರಾಜ್ಯಗಳ ಪರ ವಾದ ಮಾಡಿದ ವಕೀಲರಿಗೆ ಸ್ಪಷ್ಟವಾಗಿ ಹೇಳಿದ್ದರೂ, ಈವರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡದಿರುವುದು ನೋವಿನ ಸಂಗತಿಯಾಗಿದೆ.
ನ್ಯಾಯಾಧೀಕರಣದ ಹೊರಗಡೆಯೇ ಈ ಸಮಸ್ಯೆ ಬಗೆಹರಿಸಿ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸಬೇಕು ಎಂಬುದು ರಾಜ್ಯದ ಜನತೆಯ ಹಕ್ಕೋತ್ತಾಯವಾಗಿದೆ. ಈ ಹಿಂದಿನ ಪ್ರಧಾನಮಂತ್ರಿಗಳಾದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಹೆಚ್.ಡಿ. ದೇವೆಗೌಡರು ಹಾಗೂ ಮನಮೋಹನಸಿಂಗ್ ಅವರು ಅಧಿಕಾರದಲ್ಲಿದ್ದಾಗ ಇಂತಹ ಕುಡಿಯುವ ನೀರಿನ ಸಮಸ್ಯೆಗಳು ನ್ಯಾಯಾಧೀಕರಣದಲ್ಲಿದ್ದಾಗಲೂ ಕೂಡ ರಾಜೀ ಸಂಧಾನದ ಮೂಲಕ ಬಗೆಹರಿಸಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಅಂತೆಯೇ ಕಾವೇರಿ ನೀರಿನ ವಿವಾದ ನ್ಯಾಯಾಧೀಕರಣದಲ್ಲಿದ್ದಾಗಲೂ ಅಂದಿನ ಪ್ರಧಾನಮಂತ್ರಿ ಎಚ್.ಡಿ. ದೇವೆಗೌಡ ಅವರು ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ 9 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದರು. ಅದರಂತೆಯೇ ಮಹಾದಾಯಿ, ಕಳಸಾ-ಬಂಡೂರಿ ಯೋಜನೆಗೂ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು. ಅಲ್ಲದೆ, ನ್ಯಾಯಾಧೀಕರಣದ ಹೊರಗಡೆ ಬಗೆಹರಿಸಲು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕೆಂದು ಒಂದು ವರ್ಷದಿಂದ ರೈತರು ಹಾಗೂ ವಿವಿಧ ಸಂಘಟನೆಗಳು ಹೋರಾಟ ಮಾಡಿದರೂ ಕೇಂದ್ರ ಸರಕಾರ ಸ್ಪಂದನೆ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ.
ಅಲ್ಲದೆ, ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ರಾಜ್ಯದ ಬಿಜೆಪಿ ಮುಖಂಡರು ಕೇಂದ್ರ ಸರಕಾರದ ಮೇಲೆ ಅಗತ್ಯ ಒತ್ತಡ ಹೇರುವಲ್ಲಿ ವಿಫಲರಾಗಿರುವುದು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಧೀಕರಣದಲ್ಲಿ ಕರ್ನಾಟಕ ಹಾಗೂ ಗೋವಾ ಸರಕಾರ ತಮ್ಮ ವಾದವನ್ನು ಮಂಡಿಸುತ್ತಿವೆ.
ಆದರೆ, ದುರಂತದ ಸಂಗತಿಯೆಂದರೆ, ಕರ್ನಾಟಕದ ವಿರುದ್ಧ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಟರಿ ಜನರಲ್ ಆದ ಆತ್ಮಾನಂದ ನಾಡಕರ್ಣಿ ಅವರು ವಾದ ಮಂಡಿಸುತ್ತಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರ ಅಗತ್ಯ ಒತ್ತಡ ಹಾಕುವ ಮೂಲಕ ಅವರನ್ನು ಆ ಹುದ್ದೆಯಿಂದ ತೆಗೆದು ಹಾಕುವಂತೆ ಮಾಡಬೇಕು. ಇಲ್ಲವೇ ಅವರೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.