ಪಟಾಕಿ ದರದಲ್ಲಿ ಭಾರೀ ಏರಿಕೆ; ವ್ಯಾಪಾರಿಗಳು ಹೇಳೋದೇನು?
ದಾವಣಗೆರೆ, ಅಕ್ಟೋಬರ್ 25: ಬೆಳಕಿನ ಹಬ್ಬ ದೀಪಾವಳಿ. ಎಲ್ಲೆಡೆ ಹಬ್ಬದ ಸಂಭ್ರಮ, ಸಡಗರ ಕಂಡು ಬರುತ್ತಿದೆ. ಈ ಹಬ್ಬದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದು ಪಟಾಕಿ. ಬಣ್ಣಬಣ್ಣದ ಪಟಾಕಿಗಳು ಜನರನ್ನು ಆಕರ್ಷಿಸುತ್ತಿವೆ. ಕೊರೊನಾ ಬಂದ ಕಾರಣ ಕಳೆದ ಮೂರು ವರ್ಷ ಮಂಕು ಕವಿಯುವಂತೆ ಮಾಡಿತ್ತು. ಆದರೆ, ಈ ಬಾರಿ ಹಬ್ಬ ಜೋರಾಗಿದ್ದರೂ, ಪಟಾಕಿ ದರ ಕೇಳಿ ಗ್ರಾಹಕರು ದಂಗಾಗುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಎಲ್ಲಾ ಪಟಾಕಿಗಳು ಜನರ ಕೈಸುಡುತ್ತಿವೆ. ಮಾರಾಟಗಾರರು ಕಂಗಾಲಾಗಿದ್ದಾರೆ. ಯಾಕೆಂದರೆ ಈ ಬಾರಿ ಪಟಾಕಿ ಮಾರಾಟಕ್ಕೆ ಜಿಎಸ್ಟಿ ವಿಧಿಸಿರುವುದು.
ಎಲ್ಲೆಡೆ ಪಟಾಕಿಯ ಢಂ.. ಢಂ.. ಶಬ್ದ ಕಿವಿಗೆ ರಾಚುತ್ತದೆ. ಪಟಾಕಿಯೂ ಈ ಬಾರಿ ಜಾಸ್ತಿನೇ ಮಾರುಕಟ್ಟೆಗೆ ಬಂದಿದೆ. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ 50 ಪಟಾಕಿಗಳ ಅಂಗಡಿಗಳನ್ನು ಹಾಕಲಾಗಿದೆ. ಈ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದಷ್ಟೇ ತರೇಹವಾರಿ ಪಟಾಕಿಗಳು ಬಂದಿವೆ. ಹೂವು, ಹಣ್ಣು, ತರಕಾರಿ ಸೇರಿದಂತೆ ಎಲ್ಲಾ ದರವೂ ಗಗನಕ್ಕೇರಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.
ದೀಪಾವಳಿ 2022: ಗೋವರ್ಧನ ಪೂಜೆ ಏಕೆ ನಡೆಯುತ್ತದೆ, ಅದರ ಮಹತ್ವವೇನು?
ಎಲ್ಲಾ ಕಡೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೂ ಪಟಾಕಿ ಖರೀದಿ ಭರಾಟೆ ಜೋರಾಗಿದ್ದರೂ, ವ್ಯಾಪಾರ ಹೇಳಿಕೊಳ್ಳುವಷ್ಟು ಆಗುತ್ತಿಲ್ಲ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿರುವುದೂ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಹೆಚ್ಚಾಗಿ ಬರುತ್ತಿದ್ದ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಈ ಬಾರಿ ಶೇಕಡಾ 99ರಷ್ಟು ಹಸಿರು ಪಟಾಕಿ ಮಾತ್ರ ಸರಬರಾಜಾಗಿದೆ. ತೈಲ ಬೆಲೆ ಏರಿಕೆ ಹಾಗೂ ಪಟಾಕಿ ತಯಾರಿಕೆಗೆ ಬಳಸುವ ಕಚ್ಚಾ ವಸ್ತು ದರ ಹೆಚ್ಚಳದಿಂದ, ಪಟಾಕಿ ಬೆಲೆ ಏರಿಕೆಯಾಗಿದೆ. ಕಡಿಮೆ ಸರಬರಾಜಾಗಿರುವುದರಿಂದ ದರವೂ ಹೆಚ್ಚಾಗಿದೆ ಎನ್ನುತ್ತಾರೆ ಹಲವಾರು ವರ್ಷಗಳಿಂದ ಪಟಾಕಿ ಮಾರಾಟ ಮಾಡುತ್ತಿರುವ ಹಾಲೇಶ್.
ಪರಿಸರ ಸ್ನೇಹಿ ದೀಪಾವಳಿಯಿಂದ ವರ್ತಕರಿಗೆ ನಷ್ಟ
ದರ ಹೆಚ್ಚಳ ಕಾರಣದಿಂದಲೇ ಪಟಾಕಿ ಮಾರಾಟ ಪ್ರಮಾಣವು ತಗ್ಗಿದೆ ಎಂದು ಕೆಲ ವರ್ತಕರು ಅಳಲು ತೋಡಿಕೊಂಡಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳಿದ್ದು ಜನರಲ್ಲಿ ಮೊದಲಿದ್ದ ಹಬ್ಬದ ಸಂಭ್ರಮ ಹೆಚ್ಚಾಗಿ ಕಂಡು ಬರುತ್ತಿಲ್ಲ. ಈ ನಡುವೆ ಪರಿಸರ ಮಾಲಿನ್ಯ ಮಂಡಳಿಯು ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಮನವಿ ಮಾಡಿದೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ ಇತರೆ ಪಟಾಕಿಗಳ ಮಾರಾಟ ಮಾಡದಂತೆ ವರ್ತಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆದರೆ ಯಾವುದು ಹಸಿರು ಪಟಾಕಿ? ಅಲ್ಲ? ಎಂಬುವುದರ ಬಗ್ಗೆ ನಾಗರೀಕರಿಗೆ ಸಮರ್ಪಕ ಮಾಹಿತಿಯೇ ಇಲ್ಲವಾಗಿದೆ. ಕೆಲ ವರ್ತಕರು ಎಲ್ಲ ರೀತಿಯ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.
ಉತ್ತರಕನ್ನಡದಲ್ಲಿ ವಿಭಿನ್ನ ರೀತಿಯ ದೀಪಾವಳಿ ಆಚರಣೆ, ಇಲ್ಲಿದೆ ವಿವರ
ಶೇಕಡಾ 75ಕ್ಕೂ ಹೆಚ್ಚರಷ್ಟು ದರ ಹೆಚ್ಚಳ
ಕಳೆದ ವರ್ಷ 60 ಪಟಾಕಿಗಳಿದ್ದ ಗಿಫ್ಟ್ ಬಾಕ್ಸ್ 1000 ರೂಪಾಯಿ ಇತ್ತು. ಈ ಬಾರಿ 1700 ರೂಪಾಯಿ ಇದೆ. 20 ಲಕ್ಷ್ಮೀ ಪಟಾಕಿ ಪ್ಯಾಕೇಟ್ 20 ರೂ.ನಿಂದ 40 ರೂಪಾಯಿಗೆ, ಸ್ಪಾಕರ್ಸ್ 100 ರೂಪಾಯಿಯಿಂದ 150 ರೂಪಾಯಿಗೆ, ಫ್ಲವರ್ ಪಾಟ್ 120 ರಿಂದ 180, ಬಿಜಿಲಿ 40 ರೂಪಾಯಿಯಿಂದ 100 ರೂಪಾಯಿಗೆ, ಪಟಾಕಿ ಬಾಕ್ಸ್ 800 ರೂಪಾಯಿಯಿಂದ 1300 ರೂಪಾಯಿ, ಶಾರ್ಟ್ಸ್ 120 ಪಟಾಕಿಗೆ 2000 ದಿಂದ 3000 ರೂಪಾಯಿಯವರೆಗೆ, ವಾಲ್ಸ್ 300 ರೂಪಾಯಿಯಿಂದ 600 ರೂಪಾಯಿಯವರೆಗೆ, ಮ್ಯಾಜಿಕಲ್ ಪಿಕಾಕ್ ಸಹ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಎಸ್ಟಿ ಹಾಕಿರುವುದರಿಂದ ಶೇಕಡಾ 75ಕ್ಕೂ ಹೆಚ್ಚರಷ್ಟು ದರ ಹೆಚ್ಚಳವಾಗಿದೆ ಎಂದು ಹಾಲೇಶ್ ಮಾಹಿತಿ ನೀಡಿದರು.
ಇನ್ನು ಕೊರೊನಾ ಸಂಕಷ್ಟದ ವೇಳೆಯಲ್ಲಿ ಪಟಾಕಿ ವ್ಯಾಪಾರ ಕಡಿಮೆಯಾಗಿದ್ದರೂ ನಮಗೆ ಅಲ್ಪಸ್ವಲ್ಪ ಲಾಭವಾಗಿತ್ತು. ಈ ಬಾರಿ ವ್ಯಾಪಾರವೂ ಜೋರಿಲ್ಲ, ಹಾಕಿದ ಬಂಡವಾಳ ಬರುತ್ತೋ ಇಲ್ಲವೋ ಎನ್ನುವ ಆತಂಕ ಎದುರಾಗಿದೆ. ದರದಲ್ಲಿ ಹೆಚ್ಚಳವಾಗಿರುವ ಕಾರಣ ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ವ್ಯಾಪಾರಕ್ಕೆ ತಾತ್ಕಾಲಿಕ ನೋಂದಣಿ ಪಡೆಯುವುದು
ಜಿಎಸ್ಟಿ ಕಾಯ್ದೆಯಡಿ ಪಟಾಕಿ ಸರಕು ತೆರಿಗೆದಾಯಕ ಸರಕಾಗಿದೆ. ವರ್ತಕರು ತಮ್ಮ ಮುಖ್ಯ ವ್ಯಾಪಾರ ಸ್ಥಳವನ್ನು ಹೊರತುಪಡಿಸಿ ಬೇರೆ ಕಡೆ ವ್ಯಾಪಾರ ನಡೆಸಲು ಸಂಬಂಧಿಸಿದ ವ್ಯಾಪ್ತಿಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ ಮತ್ತು ಎಲ್ಜಿಎಸ್ಟಿಓ ಕಚೇರಿಗಳಲ್ಲಿ ಹೆಚ್ಚುವರಿಯಾಗಿ ತಾತ್ಕಾಲಿಕ ನೋಂದಣಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಜಿಎಸ್ಟಿ ವಿಧಿಸಿರುವುದು ಕೂಡ ಮಾರಾಟಗಾರರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಗ್ರಾಹಕರಿಗೂ ಬರೆ
ಪೂಜೆ ಹಾಗೂ ಮಕ್ಕಳಿಗಾಗಿ ಪಟಾಕಿ ಖರೀದಿಸಲು ಬಂದಿದ್ದೇವೆ. ಈ ಬಾರಿ ದರ ಕೇಳಿದಾಕ್ಷಣ ಇಷ್ಟೊಂದು ಜಾಸ್ತಿಯಾಗಿದೆಯಾ ಅನಿಸುತ್ತಿದೆ. ಕಳೆದ ವರ್ಷ 5000 ರೂಪಾಯಿಗೆ ಹೆಚ್ಚು ಪಟಾಕಿಗೆ ಬಂದಿತ್ತು. ಈ ಬಾರಿ ಅರ್ಧದಷ್ಟು ಬರುತ್ತಿಲ್ಲ. ವ್ಯಾಪಾರಿಗಳಿಗೆ ಕೇಳಿದರೆ ಜಿಎಸ್ಟಿ ವಿಧಿಸಿದ್ದಾರೆ, ಏನು ಮಾಡಲು ಆಗದು. ಕಡಿಮೆ ದರಕ್ಕೆ ಕೇಳಿದರೆ ಬರೋದಿಲ್ಲ ಎನ್ನುತ್ತಾರೆ. ಪಟಾಕಿ ನಮಗೆ ಈ ಬಾರಿ ದುಬಾರಿಯಾಗಿದೆ. ನಷ್ಟ ಮಾಡಿಕೊಂಡು ಕೊಡಲು ಆಗದು. ಬೇಕಿದ್ದರೆ ತೆಗೆದುಕೊಳ್ಳಿ, ಚೌಕಾಸಿ ಮಾಡಬೇಡಿ ಎನ್ನುತ್ತಾರೆ. ಎಲ್ಲವೂ ದರ ಹೆಚ್ಚಾದರೆ ಹಬ್ಬ ಆಚರಣೆ ಮಾಡೋದು ಹೇಗೆ ಎಂದು ಪ್ರಶ್ನಿಸುತ್ತಾರೆ ಗ್ರಾಹಕರು.
ಪರವಾನಗಿ ಪಡೆದು ಮಾರಾಟ
ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡುವ ಹಾಗಿಲ್ಲ. ಹಚ್ಚುವ ಆಗಿಲ್ಲ. ಹಸಿರು ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದಮಾರಾಟಗಾರರು ಮಾತ್ರ ಮಾರಾಟ ಮಾಡತಕ್ಕದ್ದು. ಪರವಾನಿಗೆದಾರರು ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪರವಾನಗಿ ಪತ್ರವನ್ನು ಪಡೆದಂತವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದ್ದಾರೆ.
ಸೊಪ್ಪು-ತರಕಾರಿ ಬೆಲೆಯಲ್ಲಿಯೂ ಏರಿಕೆ
ಅತ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡುವ ಹಬ್ಬಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ದೊಡ್ಡ ತಡೆಯಾಗಿ ಪರಿಣಮಿಸಿದೆ.ಬೆಲೆ ಹೆಚ್ಚಳದ ಹೊರತಾಗಿಯೂ ಜನರು ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ತರಕಾರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. 1 ಕೆಜಿ ಟೊಮೋಟೊ ಬೆಲೆ 40 ರಿಂದ 50 ರೂ., ಬೀನ್ಸ್ 80 ರೂ., ಕ್ಯಾರೆಟ್ 80 ರೂ. ಇದೆ. ಹಾಗೆಯೇ ಕೊತಂಬರಿ ಮತ್ತಿತರ ಸೊಪ್ಪುಗಳ ಬೆಲೆಯೂ ಹೆಚ್ಚಾಗಿದೆ.