ಸ್ಚಚ್ಛ ಭಾರತ: ದಾವಣಗೆರೆ ಈಗ ಬಯಲು ಶೌಚ ಮುಕ್ತ ಜಿಲ್ಲೆ
ದಾವಣಗೆರೆ, ಡಿಸೆಂಬರ್ 21: ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಶೇ 100 ರಷ್ಟು ಬಯಲು ಶೌಚ ಮುಕ್ತ ತಾಲ್ಲೂಕುಗಳಾಗಿದ್ದು ದಾವಣಗೆರೆ ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬಯಲು ಶೌಚ ಮುಕ್ತವಾಗಿದ್ದು, ಅಕ್ಟೋಬರ್ 2, 2017 ರೊಳಗೆ ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು ಶೇ.100 ರಷ್ಟು ಹಾಗೂ ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕುಗಳನ್ನು ನವೆಂಬರ್ 19, 2017 ರೊಳಗೆ 2017 ರ ಬೇಸ್ಲೈನ್ ಸರ್ವೆ ಪ್ರಕಾರ ಶೇ.100 ರಷ್ಟು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕುಗಳನ್ನಾಗಿ ಮಾಡಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವ ಪದ್ಧತಿಯನ್ನು ತೊಲಗಿಸಲು ಹಾಗೂ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಗ್ರಾಮೀಣ ಜನರ ಜೀವನ ಪದ್ಧತಿಯನ್ನು ಸುಧಾರಿಸುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೆ ತಂದಿದ್ದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ದಾವಣಗೆರೆ ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ರೂಪುಗೊಂಡಿದೆ.
ಮಹಾತ್ಮ ಗಾಂಧಿಯವರ 150ನೇ ಜನ್ಮದಿನವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿಸುವ ಮೂಲಕ ಆಚರಿಸುವುದು ಭಾರತ ಸರ್ಕಾರದ ಉದ್ದೇಶವಾಗಿದೆ. ಆದರೆ ಇದಕ್ಕೂ ಮುಂಚಿತವಾಗಿ ರಾಜ್ಯ ಸರ್ಕಾರ ಮಾರ್ಚ್- 2018 ಕ್ಕೆ ಕರ್ನಾಟಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸುವ ಧ್ಯೇಯ ಹೊಂದಿದ್ದು, ಸರ್ಕಾರಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.












Click it and Unblock the Notifications