ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಕಮಿಷನ್ ಪಡೆದು ವಿಧಾನಸೌಧಕ್ಕೆ ಹೋಗ್ತಾರೆ: ಬಿಹಾರ "ಕೈ" ನಾಯಕಿ ಗಂಭೀರ ಆರೋಪ
ಚಿತ್ರದುರ್ಗ, ಮೇ, 05: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜಕೀಯ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.
ಅದೆ ರೀತಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಕಮಿಷನ್ ಪಡೆದು ವಿಧಾನಸೌಧಕ್ಕೆ ಹೋಗುತ್ತಾರೆ ಎಂದು ಬಿಹಾರ ರಾಜ್ಯಸಭೆ ಸದಸ್ಯೆ ರಂಜೀತ್ ರಂಜನ್ ಯಾದವ್ ಆರೋಪಿಸಿದ್ದಾರೆ.
ನಗರದ ಹೊರವಲಯದ ತೋಟವೊಂದರಲ್ಲಿ ಕಾಂಗ್ರೆಸ್ ಕಾಡುಗೊಲ್ಲ ಸಮುದಾಯದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಪೂರ್ಣಿಮಾ ಅವರನ್ನು ನೀವು ಆಯ್ಕೆ ಮಾಡಿದರೆ ಅವರು ಕಮಿಷನ್ ಪಡೆಯುತ್ತಾರೆ ಅಷ್ಟೇ. ಅವರು ಅಭಿವೃದ್ಧಿ ಮಾಡುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುತ್ತವೆ ಎಂದು ಹೇಳಿಕೊಂಡು ಮತಪಡೆದು ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಪಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪೂರ್ಣಿಮಾ ಮತ್ತು ಅವರ ಪತಿ ಶ್ರೀನಿವಾಸ್ ಕಮಿಷನ್ ಪಡೆದ ಹಣದಲ್ಲಿ ಚುನಾವಣೆಗೆ ಕರ್ಚು ಮಾಡುತ್ತಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಸೋತರೂ ಕೂಡ ನಿಮ್ಮ ಜೊತೆಯಲ್ಲಿದ್ದಾರೆ. ಆದ್ದರಿಂದ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು. ಹಾಗೆಯೆ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಸಿಗುತ್ತದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಅವರನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ನಾನು ಕಾಡುಗೊಲ್ಲ ಹೆಣ್ಣು ಮಗಳು
ನಾನು ಬಿಹಾರ ರಾಜ್ಯದ ಕಾಡುಗೊಲ್ಲ ಸಮುದಾಯ ಹೆಣ್ಣು ಮಗಳು, ಊರುಗೊಲ್ಲ ಅಲ್ಲ ಎನ್ನುವ ಮೂಲಕ ಜಾತಿ ಹೆಸರಿನಲ್ಲಿ ಪ್ರಚಾರ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಕರ್ನಾಟಕದಲ್ಲಿ ಇದ್ದಂತೆ ಕಾಡುಗೊಲ್ಲ ಮತ್ತು ಊರುಗೊಲ್ಲ ಸಮಸ್ಯೆ ಬಿಹಾರ ರಾಜ್ಯದಲ್ಲೂ ಇದೆ. ನಾನು ಕಾಡುಗೊಲ್ಲ ಸಮುದಾಯಕ್ಕೆ ಸೇರಿದವಳು. ಆದ್ದರಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದ ಮತಗಳು ಹೆಚ್ಚು ಇರುವುದರಿಂದ ನಮ್ಮ ಪಕ್ಷದ ನಾಯಕರು ಬಿಹಾರದಿಂದ ಹಿರಿಯೂರು ಕ್ಷೇತ್ರಕ್ಕೆ ಕಳುಹಿಸಿದ್ದಾರೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಅವರಿಗೆ ಮತ ನೀಡಬೇಡಿ, ಅವರು ಕಾಡುಗೊಲ್ಲರ ವಿರೋಧಿ ಎಂದು ಟೀಕಿಸಿದರು.
ಕಾಡುಗೊಲ್ಲರು ರಾಜ್ಯದ ಕೆಲವು ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶದ ಕಲ್ಯಾಣದುರ್ಗ, ರಾಯದುರ್ಗ, ಅಮರಾಪುರ, ಮಡಕಶಿರಾ ಭಾಗದಲ್ಲಿ ಕಂಡುಬರುತ್ತಾರೆ. ಆದರೆ ಬಿಹಾರದಲ್ಲಿ ಕಾಡುಗೊಲ್ಲರು ಕಂಡುಬರುತ್ತಾರೆ. ಇದು ಎಲ್ಲಿಯೂ ಉಲ್ಲೇಖವಾಗಿಲ್ಲ.
ಮತ್ತೊಂದೆಡೆ ಬಿಹಾರ ಸಂಸದೆ ರಂಜೀತ್ ರಂಜನ್ ಯಾದವ್ ಅವರು, ನಾನು ಕಾಡುಗೊಲ್ಲ ಸಮುದಾಯ ಮಹಿಳೆ, ಊರುಗೊಲ್ಲ ಮಹಿಳೆ ಅಲ್ಲ ಎಂದು ಹೇಳಿದ್ದು, ಮತಕ್ಕಾಗಿ ಸುಳ್ಳು ಹೇಳಿದ್ದಾರಾ ಎನ್ನುವ ಮಾತುಗಳು ಕೂಡ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಇನ್ನು ಇವರ ಹೇಳಿಕೆ ಜಾತಿ, ಜಾತಿ ಮಧ್ಯೆ ಸಂಘರ್ಷಕ್ಕೆ ಸಾಕ್ಷಿಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಇದ್ದಂತೆ ಕಾಡುಗೊಲ್ಲ ಮತ್ತು ಊರುಗೊಲ್ಲ ಸಮಸ್ಯೆ ಬಿಹಾರ ರಾಜ್ಯದಲ್ಲೂ ಇದೆ. ನಾನು ಕಾಡುಗೊಲ್ಲ ಸಮುದಾಯಕ್ಕೆ ಸೇರಿದವಳು ಎಂದು ತಿಳಿಸಿದರು. ನನ್ನನ್ನು ನೀವು ಕಾಡುಗೊಲ್ಲ ಸಮಾಜದ ಮಗಳಾಗಿ ಅಥವಾ ನಿಮ್ಮೂರಿನ ಸೊಸೆಯೆಂದು ತಿಳಿದುಕೊಳ್ಳಿ. ಬೂತ್ ಮಟ್ಟದಲ್ಲಿ ಕಾಡುಗೊಲ್ಲ ಸಮಾಜದ ಗಟ್ಪಿಯಾದ ಮುಖಂಡರು ಬೂತ್ ಏಜೆಂಟ್ ಆಗಿ ಕುಳಿತುಕೊಂಡು ಮತವನ್ನು ಹಾಕಿಸಿ. ನಿಮ್ಮ ಮನೆಯ ಮಗಳಾಗಿ ಕೇಳಿ ಕೊಳ್ಳುತ್ತೇನೆ, ನೀವೆಲ್ಲರೂ ಕೈ ಮೇಲೆ ಎತ್ತಿ ಹೇಳಿ ಎಂದು ಮನವಿ ಮಾಡಿದರು.
ಒಟ್ಟಾರೆಯಾಗಿ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಈ ಹೇಳಿಕೆ ಬಗ್ಗೆ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications