Bus Ticket Price: ಬಸ್ ಟಿಕೆಟ್ ದರ ಮತ್ತೆ ಏರಿಕೆ ಆಗುತ್ತಾ? ಮಹತ್ವದ ಸುಳಿವು ಕೊಟ್ಟ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ವಿಧಾನಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಜರುಗಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಅವರು ಸಾರ್ವಜನಿಕ ಆಡಳಿತ, ಸಾರಿಗೆ, ಆರೋಗ್ಯ ಮತ್ತು ವಿದ್ಯುತ್ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ಹಲವಾರು ಜನಪರ ನಿರ್ಧಾರಗಳನ್ನು ಪ್ರಕಟಿಸಿದರು. ಇದೇ ವೇಳೆ ಬಸ್ ಟಿಕೆಟ್ ದರ ಏರಿಕೆಯಾಗುವ ಬಗ್ಗೆಯೂ ಸಿಎಂ ಮಾತನಾಡಿದರು.
ರಾಜ್ಯದಲ್ಲಿ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ದರ ಏರಿಕೆಯಾಗಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, "ಖಾಸಗಿ ಹಾಗೂ ಸರ್ಕಾರಿ ಸಾರಿಗೆ ನಿಗಮಗಳ ಡಿಪೋಗಳಲ್ಲಿನ ಡೀಸೆಲ್ ಬೆಲೆ ವ್ಯತ್ಯಾಸವು ಸದ್ಯ ಸುಮಾರು 40 ರೂಪಾಯಿಗಳಷ್ಟಿದೆ. ಇದು ನಿಜಕ್ಕೂ ಆತಂಕಕಾರಿ ಸಂಖ್ಯೆ. ಡೀಸೆಲ್ ದರ ಹೆಚ್ಚಾದಾಗ ಟಿಕೆಟ್ ದರವೂ ಹೆಚ್ಚಾಗಬೇಕು ಎಂಬ ನಿಯಮ ಈ ಹಿಂದೆಯೇ ಇತ್ತು. ಆದರೆ, ನಮಗೆ ಸಾರಿಗೆ ಸಂಸ್ಥೆಗಳ (KSRTC) ಉಳಿವು ಎಷ್ಟು ಮುಖ್ಯವೋ, ಜನಸಾಮಾನ್ಯರ ಹಿತವೂ ಅಷ್ಟೇ ಮುಖ್ಯ. ಹೀಗಾಗಿ ಸಾರ್ವಜನಿಕರಿಗೆ ಹೊರೆಯಾಗದಂತೆ ಜನರ ಹಿತದೃಷ್ಟಿಯಿಂದ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ವರದಿ ಕೇಳಲಾಗಿದೆ" ಎಂದರು.

ಜನಸಾಮಾನ್ಯರ ಅಹವಾಲು ಆಲಿಸಲು ಹೊಸ ಇಲಾಖೆ
ಸಾರ್ವಜನಿಕರ ದೂರುಗಳು, ಕುಂದುಕೊರತೆಗಳು ಹಾಗೂ ವಿವಿಧ ಹೋರಾಟಗಳ ಅಹವಾಲುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಲಿಸಲು ರಾಜ್ಯ ಸರ್ಕಾರವು ಹೊಸದಾಗಿ "ಪ್ರಜಾಸೇವೆ ಇಲಾಖೆ"ಯನ್ನು ಪ್ರಾರಂಭಿಸುತ್ತಿದೆ. ಈ ನೂತನ ಇಲಾಖೆಗೆ ಸ್ವತಂತ್ರವಾಗಿ ಒಬ್ಬರು ಸಚಿವರನ್ನು ನೇಮಿಸಿ ಜವಾಬ್ದಾರಿ ವಹಿಸಲಾಗುವುದು. ಇಲಾಖೆಯ ಸುಗಮ ಕಾರ್ಯನಿರ್ವಹಣೆಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುತ್ತಿದ್ದು, ಅವರು ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಮುಖ್ಯಮಂತ್ರಿ ಹಾಗೂ ಇತರ ಸಚಿವರಿಗೆ ಸಾರ್ವಜನಿಕರು ನೀಡುವ ಮನವಿ ಪತ್ರಗಳನ್ನು ಇನ್ಮುಂದೆ ಇದೇ ಇಲಾಖೆಯಡಿ ತರಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿಯ ಜಿಲ್ಲೆಗಳಲ್ಲಿ ವಾರಕ್ಕೊಮ್ಮೆ ಸ್ಥಳೀಯ ಶಾಸಕರೊಂದಿಗೆ ಸೇರಿ ಈ ಇಲಾಖೆಯ ಮೂಲಕ ಕಡ್ಡಾಯವಾಗಿ 'ಜನಸ್ಪಂದನ ಸಭೆ'ಗಳನ್ನು ನಡೆಸಬೇಕು ಎಂದು ಸಿಎಂ ಆದೇಶಿಸಿದರು.
620 ಹೊಸ ಬಸ್ಗಳು, 11 ಎಲೆಕ್ಟ್ರಿಕ್ ಡಿಪೋಗಳು
ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸಂಪುಟ ಸಭೆಯು ಬೃಹತ್ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿದೆ. ₹235 ಕೋಟಿ ವೆಚ್ಚದಲ್ಲಿ ಒಟ್ಟು 620 ಹೊಸ ಬಸ್ಗಳನ್ನು ಖರೀದಿಸಲಾಗುವುದು. ಇದರಲ್ಲಿ ಗ್ರಾಮೀಣ ಭಾಗದ ಸಂಚಾರಕ್ಕೆ 400 ಬಸ್ಗಳನ್ನು ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ 220 ಬಸ್ಗಳನ್ನು ಹಂಚಿಕೆ ಮಾಡಲಾಗಿದೆ. ₹112 ಕೋಟಿ ವೆಚ್ಚದಲ್ಲಿ ವಿವಿಧ ಸಾರಿಗೆ ನಿಗಮಗಳ ವ್ಯಾಪ್ತಿಯ 11 ಪ್ರಮುಖ ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳಿಗಾಗಿ (E-Bus) ಆಧುನಿಕ ಡಿಪೋಗಳನ್ನು ಸ್ಥಾಪಿಸಲಾಗುವುದು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಕೇಂದ್ರದಲ್ಲಿ ₹30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ಬಸ್ ನಿಲ್ದಾಣ ನಿರ್ಮಿಸಲು ಹಸಿರು ನಿಶಾನೆ ನೀಡಲಾಗಿದೆ ಎಂದರು.
ರಾಜ್ಯದ ವಿವಿಧ ಭಾಗಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಯಾದಗಿರಿಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ₹100 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ಕಾರವಾರ ವೈದ್ಯಕೀಯ ಸಂಸ್ಥೆಯ 6 ಪ್ರಮುಖ ಸಿವಿಲ್ ಕಾಮಗಾರಿಗಳಿಗೆ ₹18 ಕೋಟಿ ಹಾಗೂ ಬೆಂಗಳೂರು ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ (BMCRI) ಆಧುನಿಕ ವೈದ್ಯಕೀಯ ಉಪಕರಣಗಳ ಖರೀದಿಗೆ ₹60 ಕೋಟಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಯಾವತ್ತೋ ಸರಿಹೋಗ್ಬೇಕಿತ್ತು,ಈಗ ಡಿಕೆಶಿ ಸರಿಮಾಡ್ತೀನಿ ಅಂದ್ರೆ ಅದಾಗಲ್ಲ....
ಜೂನ್ 31ರೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಎಲ್ಲ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸರ್ಕಾರ ವಿಶೇಷ ವಿನಾಯಿತಿ ನೀಡಿದೆ. ಈ ಕುರಿತು ಅಧಿಕೃತ ಸರ್ಕಾರಿ ಆದೇಶ ಹೊರಬಿದ್ದ ದಿನದಿಂದ ಕೇವಲ 15 ದಿನಗಳ ಕಾಲಾವಕಾಶ ಮಾತ್ರ ಇರಲಿದೆ. ವಿದ್ಯುತ್ ಸಂಪರ್ಕ ಬಯಸುವ ಕಟ್ಟಡ ಮಾಲೀಕರು ತಮ್ಮ ಕಟ್ಟಡದ ಜೊತೆಗಿನ ಫೋಟೋ ಹಾಗೂ ಜಿಪಿಎಸ್ (GPS) ಲೊಕೇಶನ್ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಗ್ರಾಮೀಣ ಭಾಗದ ರೇಷ್ಮೆ ಸಾಕಾಣಿಕೆ ಮನೆಗಳು ಹಾಗೂ ಹಟ್ಟ/ಕೊಟ್ಟಿಗೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಹೊಸದಾಗಿ ನಿರ್ಮಿಸುವ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದರು.
ದೆಹಲಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಭವನ
ನವದೆಹಲಿಯಲ್ಲಿ ಯುಪಿಎಸ್ಸಿ (UPSC) ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ವಸತಿ ಮತ್ತು ಓದಿನ ಸೌಲಭ್ಯ ಕಲ್ಪಿಸಲು KIWB ವತಿಯಿಂದ ₹80 ಕೋಟಿ ವೆಚ್ಚದಲ್ಲಿ 'ಕರ್ನಾಟಕ ಭವನ-4' ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಹಾಗೂ ಇತರ ಸಮುದಾಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಜೊತೆಗೆ, ದೆಹಲಿಯಲ್ಲಿರುವ ಕರ್ನಾಟಕದ ಕಾನೂನು ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ರಾಜ್ಯಕ್ಕೆ ತರಲು ಮತ್ತು ಇತರ ರಾಜ್ಯಗಳ (ತಮಿಳುನಾಡು, ಗುಜರಾತ್ ಇತ್ಯಾದಿ) ಯಶಸ್ವಿ ಮಾದರಿಗಳನ್ನು ಅಧ್ಯಯನ ಮಾಡಲು ನಿವೃತ್ತ ಹಾಗೂ ಹಿರಿಯ ಐಎಎಸ್/ಐಪಿಎಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಸ್ವಯಂಪ್ರೇರಿತರಾಗಿ ತಮ್ಮ 1,777 ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ಇದರ ಕಾಲಾವಕಾಶವನ್ನು ಸೆಪ್ಟೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಳಸಾಪೂರ ಗ್ರಾಮದ 18 ಎಕರೆ ಜಮೀನಿನಲ್ಲಿ ರೈತರೊಂದಿಗೆ 50:50ರ ಅನುಪಾತದಲ್ಲಿ ₹19.69 ಕೋಟಿ ವೆಚ್ಚದ ವಸತಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಯ ಕುರಿತು ಮಾತನಾಡಿದ ಸಿಎಂ, ಸಚಿವ ಸಂಪುಟ ವಿಸ್ತರಣೆಯಾದ ತಕ್ಷಣವೇ ಈ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು, ಅಲ್ಲಿಯವರೆಗೆ ಈಗಿರುವ ಸಚಿವರೇ ರಾಜ್ಯದಲ್ಲಿ ಎಲ್ಲೂ ನೀರಿನ ಕೊರತೆಯಾಗದಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.












Click it and Unblock the Notifications