ದೀಪಾವಳಿಗೆ ಸಾಲು ಸಾಲು ರಜೆ: ಉತ್ತರಕನ್ನಡದ ಪ್ರವಾಸಿ ತಾಣಗಳತ್ತ ಮುಖ ಮಾಡಿದ ಜನ
ಕಾರವಾರ, ಅಕ್ಟೋಬರ್, 24: ರಾಜ್ಯದೆಲ್ಲೆಡೆ ದೀಪಾವಳಿ ಸಂಭ್ರಮ ಮುಗಿಲು ಮುಟ್ಟಿದೆ. ಹಬ್ಬಕ್ಕೆ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಜನರು ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ಕುಟುಂಬ ಸಮೇತ ಜಿಲ್ಲೆಯ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಜಿಲ್ಲೆಯ ಬಹುತೇಕ ತಾಣಗಳು ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿವೆ.
ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಲ್ಲದೆ ಹಬ್ಬವೂ ವಾರದ ಆರಂಭದಲ್ಲಿಯೇ ಬಂದಿದ್ದರಿಂದ ನಾಲ್ಕನೆ ಶನಿವಾರ ಹಾಗೂ ಭಾನುವಾರ ರಜೆ ಇದ್ದು, ಬಹುತೇಕ ಸರ್ಕಾರಿ ಹಾಗೂ ಖಾಸಗಿ ನೌಕರರು ತಮ್ಮ ಊರುಗಳತ್ತ ತೆರಳಿದ್ದಾರೆ. ಇನ್ನು ಕೆಲವರು ಕೆಲಸದ ಜಂಜಾಟದ ನಡುವೆಯೇ ಸಿಕ್ಕಂತಹ ಸುದೀರ್ಘ ರಜೆಯನ್ನು ಪ್ರವಾಸಿ ತಾಣಗಳಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಕಳೆಯುತ್ತಿದ್ದಾರೆ. ಹೀಗೆ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದಲೇ ತುಂಬಿಕೊಂಡಿವೆ. ಮುರುಡೇಶ್ವರ ಕಡಲತೀರ, ಹೊನ್ನಾವರದ ಬ್ಲೂಫ್ಲ್ಯಾಗ್ ಇಕೋ ಬೀಚ್, ಮ್ಯಾಂಗ್ರೋವ್ ಬೋರ್ಡ್ ವಾಕ್, ಗೋಕರ್ಣದ ಕಡಲ ತೀರಗಳು, ಮಿರ್ಜಾನ್ ಕೋಟೆ, ಕಾರವಾರದ ಟ್ಯಾಗೋರ ಕಡಲತೀರ ಹೀಗೆ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಿದೆ.
ದಾವಣಗೆರೆ ಜಿಲ್ಲೆಯ ಟಾಪ್ 5 ಪ್ರವಾಸಿ ತಾಣಗಳು, ತಲುಪುವ ಮಾರ್ಗ
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಭ್ರಮ
ರಾಜ್ಯ, ನೆರೆ ರಾಜ್ಯದಿಂದ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಸಂಭ್ರಮಿಸುತ್ತಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮುರುಡೇಶ್ವರ ಪ್ರವಾಸಿ ತಾಣಕ್ಕೆ ಶನಿವಾರದಿಂದಲೇ ಪ್ರವಾಸಿಗರು ಹರಿದುಬರುತ್ತಿದ್ದಾರೆ. ಕಡಲತೀರ ಅಕ್ಷರಶಃ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿದೆ. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ದೇವರ ದರ್ಶನ ಪಡೆಯುವುದರ ಜೊತೆಗೆ ಕಡಲ ತೀರಕ್ಕೆ ಇಳಿದು ಸಂಭ್ರಸುತ್ತಿದ್ದಾರೆ.
ಬೋಟ್ ಮೂಲಕ ಸಮುದ್ರಯಾನ
ಕಡಲತೀರದಲ್ಲಿ ಸ್ಪೀಡ್ ಬೋಟ್, ಜೆಟ್ ಸ್ಕೀ, ಬೋಟಿಂಗ್ನಲ್ಲಿ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ಬೋಟ್ ಮೂಲಕ ಸಮುದ್ರಯಾನ ನಡೆಸಿ ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಇನ್ನು ರಾಜ್ಯದಲ್ಲಿಯೇ ಮುರುಡೇಶ್ವರ ನೇತ್ರಾಣಿ ದ್ವೀಪದಲ್ಲಿ ಮಾತ್ರ ಸಿಗುವ ಸ್ಕೂಬಾ ಡೈವಿಂಗ್ ಜಲಸಾಹಸ ಕ್ರೀಡೆಗೂ ಜನ ಮುಗ್ಗಿ ಬಿದ್ದಿದ್ದಿದ್ದಾರೆ. ಇದರಲ್ಲಿ ಕಡಲಾಳಕ್ಕೆ ಇಳಿದು ಅಲ್ಲಿನ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಸ್ಕೂಬಾ ಡೈವಿಂಗ್ಗೆ ಜನಸಾಗರ
ಕಡಲಾಳದಲ್ಲಿ ಮೀನುಗಳ ಜೊತೆಗೆ ಈಜಾಡುತ್ತಾ ಸಮುದ್ರದ ಆಳದ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ದೇಶದ ಕೆಲವೇ ಕೆಲವು ಭಾಗಗಳಲ್ಲಿ ಸ್ಕೂಬಾ ಡೈವಿಂಗ್ಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಇಲ್ಲಿನ ಸ್ಕೂಬಾ ಡೈವಿಂಗ್ಗೆ ಜನರು ಕಿಕ್ಕಿರಿದು ಬರುತ್ತಿದ್ದಾರೆ. ಹಾಗೀ ಇಲ್ಲಿ 12 ಆಳದಲ್ಲಿ ಕಾಣಸಿಗುವ ಹವಳದಂಡೆಗಳು ಹಾಗೂ ಭಿನ್ನ ವಿಭಿನ್ನವಾದ ಜಲಚರಗಳನ್ನು ಕಣ್ತುಂಬಿಕೊಳ್ಳಲಾಗುತ್ತಿದೆ.
ವಿವಿಧ ಕಡೆಯಿಂದ ಪ್ರವಾಸಿಗರ ಆಗಮನ
ಕೊರೊನಾ ಹೊಡೆತದಿಂದಾಗಿ ನೆಲಕಚ್ಚಿದ್ದ ಪ್ರವಾಸೋದ್ಯಮ ಇದೀಗ ಚೇತರಿಕೆ ಹಾದಿ ಹಿಡಿದಿದ್ದು, ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಮೊದಲಿನಂತೆಯೇ ಪ್ರವಾಸಿಗರಿಂದ ತುಂಬಿಕೊಳ್ಳುತ್ತಿದೆ. ಕೊರೊನಾ ಕುಗ್ಗಿದ್ದು, ಪ್ರವಾಸಿಗರು ತಾಣಗಳತ್ತ ಬಂದು ಸಂಭ್ರಮಿಸತೊಡಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರೇ ಇಲ್ಲದಿದದ್ದರಿಂದ ಮುಚ್ಚುವ ಹಂತಕ್ಕೆ ತಲುಪ್ಪಿದ್ದ ಪ್ರವಾಸಿ ತಾಣಗಳಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿಯೂ ಇದೀಗ ವ್ಯಾಪಾರ ಜೋರಾಗಿದೆ. ಕೊರೊನಾ ನಿರ್ಬಂಧ ಸಡಿಲಗೊಂಡಿದ್ದು, ಇದೀಗ ಸುದೀರ್ಘ ರಜೆ ಸಿಕ್ಕ ಹಿನ್ನೆಲೆಯಲ್ಲಿ ಉತ್ತರಕನ್ನಡ, ಗೋವಾ, ಉಡುಪಿ ಭಾಗದಲ್ಲಿ ಕುಟುಂಬಸ್ಥರು, ಸ್ನೇಹಿತರ ಜೊತೆಗೂಡಿ ಪ್ರವಾಸ ಮಾಡುತ್ತಿದ್ದೇವೆ. ಮುರುಡೇಶ್ವರ, ಮಿರ್ಜಾನ್ ಕೋಟೆ ಸೇರಿದಂತೆ ಹಲವು ಕಡಲತೀರಗಳಿಗೆ ತೆರಳಿದಾಗ ತುಂಬಾ ಸಂತೋಷವಾಯಿತು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಸ್ವರ್ಗದಂತಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ತುಂಬಾ ಖುಷಿ ಆಗುತ್ತಿದೆ ಎಂದು ಬೆಂಗಳೂರಿನ ಪ್ರವಾಸಿಗ ಸುಜ್ಞಾನ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.