ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ, ಮನೆಗಳಿಗೆ ನುಗ್ಗಿದ ಮಳೆ ನೀರು
ಚಿಕ್ಕಮಗಳೂರು, ಸೆಪ್ಟೆಂಬರ್, 01: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತವಾಗಿ ಎರಡು ಗಂಟೆಗಳ ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ. ಪರಿಣಾಮ ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲಿ ಮಳೆರಾಯ ಆರ್ಭಟಿಸಿದ್ದು, ಅಲ್ಲಿನ ಜನರ ಜೀವನ ನೀರಲ್ಲಿ ಹೋಮ ಮಾಡಿದಂತಾಗಿದೆ.
ಎರಡು ಗಂಟೆ ಸುರಿದ ಮಳೆಗೆ ಜನರು ತತ್ತರ
ಎರಡೇ ಗಂಟೆ ಸುರಿದ ಮಹಾಮಳೆಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಮಳೆ ನೀರು ರಸ್ತೆಯಲ್ಲಿ ಕೆರೆಯಂತೆ ಹರಿಯುತ್ತದೆ. ರಸ್ತೆಯಲ್ಲಿ ಎರಡರಿಂದ 3 ಅಡಿ ಎತ್ತರದಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಗುಡ್ಡಗಾಡು ಪ್ರದೇಶದಲ್ಲಿ ಧಾರಾಕಾರವಾಗಿ ಸುರಿದಿದ್ದು, ನೀರಿನ ಜೊತೆ ರಾಶಿ ರಾಶಿ ಮಣ್ಣು ಕೂಡ ನುಗ್ಗಿದ ಪರಿಣಾಮ ಜಯಪುರ ಪಟ್ಟಣ ಅಕ್ಷರಶಃ ನಲುಗಿ ಹೋಗಿದೆ. ಇನ್ನು ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದ ಬಳಿಯೂ ಕಳೆದ ಐದು ದಿನಗಳ ಹಿಂದೆಯಷ್ಟೇ ನಾಟಿ ಮಾಡಿದ್ದ ಭತ್ತದ ಗದ್ದೆ ಸಂಪೂರ್ಣ ಜಲಾವೃತವಾಗಿದೆ. ಹತ್ತಾರು ಎಕರೆ ಕಾಫಿ, ಅಡಿಕೆ ತೋಟ ಕೂಡ ಜಲಾವೃತಗೊಂಡಿವೆ.

ಬೆಟ್ಟ, ಗುಡ್ಡಗಳ ಮಣ್ಣು ಕುಸಿತ
ಇನ್ನು ರಾಜ್ಯ ಹೆದ್ದಾರಿಯಲ್ಲಿ ಅಡಿಗಟ್ಟಲೇ ನೀರು ನಿಂತ ಪರಿಣಾಮ ವಾಹನ ಸವಾರರು ಗಂಟೆಗಟ್ಟಲೇ ಪರದಾಡಿದ್ದಾರೆ. ಕಳೆದ 15 ದಿನಗಳಿಂದ ಬಿಡುವ ನೀಡಿದ್ದ ವರುಣದೇವ ಮತ್ತೆ ಅಬ್ಬರಿಸಿ ಬೊಬ್ಬೆರೆದ ಪರಿಣಾಮ ಮಲೆನಾಡಿಗರು ಅಕ್ಷರಶಃ ಕಂಗಾಲಾಗಿದ್ದಾರೆ. ಜಯಪುರ ಸುತ್ತಮುತ್ತ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗುದ್ದು, ಸ್ಥಳೀಯರು ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಮುಂಜಾಗ್ರತ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಜಯಪುರದಲ್ಲಿ ಎರಡು ಗಂಟೆಗೆ ಅಂದಾಜು 88 ಮಿಲಿ ಮೀಟರ್ ಮಳೆ ಸುರಿದಿದೆ ಎನ್ನಲಾಗಿದೆ. ಕಳೆದ ಎರಡು ದಶಕಗಳಲ್ಲೇ ಇದು ದಾಖಲೆ ಮಳೆ ಆಗಿದೆ. ಧಾರಾಕಾರ ಮಳೆಗೆ ಬೆಟ್ಟ, ಗುಡ್ಡಗಳ ಮಣ್ಣು ಕುಸಿಯುತ್ತಿದ್ದು, ಅಲ್ಲಿನ ಸುತ್ತಮುತ್ತಲಿನ ಜನರಿಗೆ ಆತಂಕ ಶುರು ಆಗಿದೆ.

ಮೂಡಿಗೆರೆಯಲ್ಲೂ ಮಳೆರಾಯ ಆರ್ಭಟಿಸಿದ್ದು, ಮೇಗಲ್ಪೇಟೆಯಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮನೆಯವರು ಮಳೆ ನೀರನ್ನು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಮೆಸ್ಕಾಂ ಇಲಾಖೆಯಿಂದ ಮನೆಗಳಿಗೆ ನುಗ್ಗಿದ್ದರಿಂದ, ಅಲ್ಲಿನ ಸ್ಥಳೀಯರು ಮೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.












Click it and Unblock the Notifications