ರಿಷಬ್ ಶೆಟ್ಟಿಗೆ ಡಿ.ಕೆ.ಶಿವಕುಮಾರ್ ಕಾಂಪಿಟೇಟರ್: ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವ್ಯಂಗ್ಯ
ಚಿಕ್ಕಮಗಳೂರು, ಅಕ್ಟೋಬರ್ 02: ಭಾರತ್ ಜೋಡೋ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಕಣ್ಣೀರಿಟ್ಟಿದ್ದರು. ಇದಕ್ಕೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಡಿ.ಕೆ. ಶಿವಕುಮಾರ್ ಒಳಗಡೆ ಇಂತಹ ಕಲಾವಿದ ಇದ್ದಾನೆಂದು ನಾನು ಅಂದುಕೊಂಡಿರಲಿಲ್ಲ ವ್ಯಂಗ್ಯವಾಡಿದ್ದಾರೆ.
ಡಿ.ಕೆ.ಶಿವಕುಮಾರ್ ನಟ ಆಗಿದ್ದರೆ ಅವರಿಗೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. "ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ. ಬಣ್ಣ, ಗ್ಲಿಸರಿನ್ ಹಾಕದೇ ಕಣ್ಣೀರು ಹಾಕುವ ನಟನೆ ಅವರಿಗೆ ಒಲಿದು ಬಂದಿದೆ. ಈ ನಟನೆ ಡಿ.ಕೆ.ಶಿವಕುಮಾರ್ ಅವರಿಗೆ ಹುಟ್ಟುತ್ತಲೇ ಬಂದಿದೆ. ದಾರಿ ತಪ್ಪಿ ಅವರು ರಾಜಕೀಯಕ್ಕೆ ಬಂದು ಬಿಟ್ಟಿದ್ದಾರೆ. ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದ್ದು, ವಿಲನ್ ಆಗುವುದಕ್ಕೂ ತಾಕತ್ತು ಇಲ್ಲದಂತಾಗಿದೆ," ಎಂದು ಡಿ.ಕೆ.ಸೀವಕುಮಾರ್ ವಿರುದ್ಧ ಸಿ.ಟಿ. ರವಿ ಹರಿಹಾಯ್ದಿದ್ದಾರೆ.
"ರಿಷಬ್ಗೆ ಡಿ.ಕೆ.ಶಿ ಕಾಂಪಿಟೇಟರ್"
"ಅವರು ಪ್ರಯತ್ನ ಪಟ್ಟರೆ ನಟನಾಗುವುದಕ್ಕೆ ಪೋಷಕ ಪಾತ್ರಗಳು ಸಿಗುತ್ತದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಕಾಂಪಿಟೇಟರ್ ಹುಟ್ಟುಕೊಂಡಿದ್ದಾರೆ. ರಿಷಬ್ ಶೆಟ್ಟಿಗೂ ಅವಕಾಶ ಸಿಗದಂತೆ ಡಿ.ಕೆ.ಶಿವಕುಮಾರ್ ನಟನೆ ಮಾಡಿದ್ದಾರೆ. ಇನ್ಮುಂದೆ ಪ್ರಶಸ್ತಿ ಏನಿದ್ದರೂ ಡಿ.ಕೆ.ಶಿವಕುಮಾರ್ ಪಾಲಿಗೆ ಬರಲಿ ಎನ್ನುವ ಕಮೆಂಟ್ಗಳನ್ನು ನಾನು ನೋಡಿದ್ದೇನೆ. ತಡವಾಗಿದೆ, ಆದರೂ ಕೂಡ ಅವರಿಗೆ ಕೊನೆಯ ಅವಕಾಶ ಸಿಕ್ಕರೂ ಸಿಗಬಹುದು. ಸಿನಿಮಾದಲ್ಲಿ ನಟಿಸಲು ಡಿ.ಕೆ. ಶಿವಕುಮಾರ್ ಪ್ರಯತ್ನ ಮಾಡುವುದು ಒಳ್ಳೆಯದು," ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಅಣಕಿಸಿದ್ದಾರೆ.

ಇನ್ನು "ಭಾರತವನ್ನು ತುಂಡರಿಸುವಾಗ ಸಹಿ ಹಾಕಿದ್ದು ಕಾಂಗ್ರೆಸ್ನವರು, ಬಿಜೆಪಿಯಲ್ಲ. ಕೋಟ್ಯಂತರ ಜೀವವನ್ನು ಮತಾಂದರ ಕೈಗೆ ಕೊಟ್ಟು ಬಂದಿದ್ದಾರೆ. ಮಹಿಳೆಯರು ಮಾನ, ಪ್ರಾಣ ಉಳಿಸಿಕೊಳ್ಳಲಾಗದೆ ಸಾಯಬೇಕಾಗಿತ್ತು. ಇಂತಹ ವಿಭಜಿತ ಭಾರತವನ್ನು ಸ್ವತಂತ್ರ್ಯ ಹೋರಾಟಗಾರರು ನಿರೀಕ್ಷಿಸಿರಲಿಲ್ಲ. ಅದಕ್ಕೆ ಕಾಂಗ್ರೆಸ್ಸಿಗೆ ಪಶ್ಚಾತ್ತಾಪ ಇದೆಯಾ?," ಎಂದು ಕಾಂಗ್ರೆಸ್ಗೆ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.

"ಕಾಂಗ್ರೆಸ್ ನಿರ್ಬಲವಾಗುತ್ತಿದೆ"
"ತುರ್ತು ಪರಿಸ್ಥಿತಿ ಹೇರಿಕೆ ನಮ್ಮಿಂದಾದ ಅಪರಾಧ ಎಂದು ವರ್ಷಗಳ ಬಳಿಕ ಪಶ್ಚಾತ್ತಾಪ ಪಟ್ಟಿದ್ದರು. ಭಾರತ ವಿಭಜನೆಗೆ ಸಹಿ ಹಾಕಿದ್ದು ಅಪರಾಧ ಎಂದು ಕಾಂಗ್ರೆಸ್ನವರಿಗೆ ಅರಿವಾಗುತ್ತಾ? ಈ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಾದಯಾತ್ರೆ ಮುಂದುವರೆಸಲಿ, ಆಗ ಅದಕ್ಕೊಂದು ಅರ್ಧ ಇರುತ್ತದೆ. ಕಾಂಗ್ರೆಸ್ ನಿರ್ಬಲ ಆಗುತ್ತಿದೆ. ಅದಕ್ಕೆ ರಾಹುಲ್ ಗಾಂಧಿಗೆ ಬಲ ತುಂಬಲು ಹೊರಟಿದ್ದಾರೆ. ಪ್ರಿಯಾಂಕ ವಾದ್ರಾ ಅವರೇ ನೇತೃತ್ವ ವಹಿಸಿದ್ದರೂ 387 ಸ್ಥಾನದಲ್ಲಿ ಡೆಪಾಸಿಟ್ ಹೊಯಿತು. ನೀತಿ, ನಿಯತ್ತು, ನೇತೃತ್ವ ಇಲ್ಲದ ಕಡೆ ಬಲ ಸಿಗುವುದಿಲ್ಲ. ಕಾಂಗ್ರೆಸ್ನವರಿಗೆ ಇದೀಗ ಈ ಮೂರು ಇಲ್ಲದಂತಾಗಿದೆ," ಎಂದು ಚಿಕ್ಕಮಗಳೂರಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications