'ಯುಪಿಎಯ ರಾಮಸೇತು ಯೋಜನೆ ಅಬಾಧಿತ'
ನವದೆಹಲಿ, ನ.4: ಯುಪಿಎ ಸರ್ಕಾರದ ಸೇತುಸಮುದ್ರಂ ಹಡಗು ನಾಲೆ ಯೋಜನೆ(ಎಸ್ಎಸ್ ಸಿಪಿ) ಅನುಷ್ಠಾನಗೊಳ್ಳಲಿದೆ ಇದರಲ್ಲಿ ಯಾವುದೇ ಸಂಶಯ ಬೇಡ ಜೊತೆಗೆ ರಾಮಸೇತುವೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹಡಗುಯಾನ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಎಸ್ಎಸ್ಸಿಪಿ ಯೋಜನೆ ಅನುಷ್ಠಾನಗೊಳ್ಳುವಾಗ 'ರಾಮ ಸೇತು' ಹಾಳಾಗಲಿದೆ, ಪರಿಸರಕ್ಕೆ ಧಕ್ಕೆ ಉಂಟಾಗಲಿದೆ. ತಮಿಳುನಾಡಿನ ಮೀನುಗಾರರ ದೈನಂದಿನ ಬದುಕಿಗೆ ಬರೆ ಎಳೆದಂತಾಗಲಿದೆ ಎಂಬ ಸುದ್ದಿಯನ್ನು ಸಚಿವ ನಿತಿನ್ ಗಡ್ಕರಿ ಅಲ್ಲಗೆಳೆದಿದ್ದಾರೆ.
ಈಗಾಗಲೇ ಪೂರ್ಣಗೊಂಡಿರುವ ಯೋಜನೆಯ ಭಾಗವನ್ನು ಬಳಸಿಕೊಳ್ಳುತ್ತೇವೆ. ಇನ್ನುಳಿದ ಭಾಗಕ್ಕೆ ಹೊಸ ಮಾರ್ಗವನ್ನು ಹುಡುಕುತ್ತಿದ್ದೇವೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು. ಪಾಕ್ ಜಲಸಂಧಿ(Palk Straits)ಯ ವೀಕ್ಷಣೆ ಮಾಡಿದ ನಿತಿನ್ ಗಡ್ಕರಿ ಅವರು 'ಪೂರ್ವ ಮತ್ತು ಪಶ್ಚಿಮ ಕಡಲ ತೀರಗಳ ನಡುವೆ ಹಡಗುಗಳು ಶ್ರೀಲಂಕಾವನ್ನು ಸುತ್ತಿ ಬಳಸಿ ಬರುವುದರ ಬದಲಿಗೆ ಕಡಿಮೆ ಅಂತರದ ಮಾರ್ಗವನ್ನು ಸೂಚಿಸಲು ಯೋಜನೆ ಸಿದ್ದವಾಗುತ್ತಿದೆ ಎಂದಿದ್ದಾರೆ.
ರಾಮ ಸೇತುವೆ ಧ್ವಂಸಗೊಳಿಸಿ ಸೇತು ಸಮುದ್ರಂ ಯೋಜನೆ ಜಾರಿಗೆ ತರುವುದು ಆರ್ಥಿಕವಾಗಿ ಹಾಗೂ ಪರಿಸರ ದೃಷ್ಟಿಯಿಂದ ಕಾರ್ಯಸಾಧುವಲ್ಲ' ಎಂದು ಆರ್.ಕೆ. ಪಚೌರಿ ವರದಿ ನೀಡಿದ್ದರು, ಸೇತುಸಮುದ್ರ ನೌಕಾಯಾನ ಕಡಲ್ಗಾಲುವೆ ಯೋಜನೆ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿಗಾಗಿ ಕಾರ್ಯಸಾಧ್ಯವಲ್ಲ ಎಂದು ಪಚೌರಿ ಸಮಿತಿ ಹೇಳಿತ್ತು
ಆದರೆ, ಅಂದಿನ ಯುಪಿಎ ಸರ್ಕಾರ ವರದಿಯನ್ನು ತಿರಸ್ಕರಿಸಿ ಸೇತು ಸಮುದ್ರಂ ಯೋಜನೆಗೆ ಈಗಾಗಲೇ 800 ಕೋಟಿ ರೂ. ವೆಚ್ಚ ಮಾಡಿರುವುದರಿಂದ ಯೋಜನೆಯನ್ನು ಮುಂದುವರಿಸುವುದಾಗಿ ಸುಪ್ರೀಂಕೋರ್ಟಿಗೆ ಹೇಳಿತ್ತು.
ಆಡಂನ ಸೇತುವೆ ಎಂದು ಇದಕ್ಕೆ ಹೆಸರಿಟ್ಟಿದ್ದರೂ, ರಾಮ ಸೇತುವೆಂದೇ ಇದು ಜನಪ್ರಿಯವಾಗಿದೆ. ಸುಮಾರು 167 ಕಿ.ಮೀ ದೂರದ 12 ಮೀಟರ್ ಆಳದ 30 ಮೀ ವಿಸ್ತೀರ್ಣದ ಈ ಸೇತುಸಮುದ್ರ ನೌಕಾಯಾನ ಕಡಲ್ಗಾಲುವೆ ಯೋಜನೆ ಪಾಕ್ ಜಲಸಂಧಿ ದಾಟಿ ಭಾರತ ಹಾಗೂ ಶ್ರೀಲಂಕಾಕ್ಕೆ ಸಂರ್ಪಕ ಕಲ್ಪಿಸಲಿದೆ.