ಜಯಲಲಿತಾ ಸತ್ತಿದ್ದು ಬಹುಅಂಗ ವೈಫಲ್ಯದಿಂದ : ಡಾ. ಬೇಲ್
ಜಯಲಲಿತಾ ಸಾವಿಗೆ ಸಂಬಂಧಿಸಿದಂತೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದವು. ಕೆಲವರು ಅದು ಕೊಲೆ, ಇದರ ಹಿಂದೆ ಹಲವರ ಸಂಚಿದೆ ಎಂದು ದೂರಿದ್ದರು. ಇದಕ್ಕೆ ಉತ್ತರ ನೀಡಿರುವ ಡಾ. ಬೇಲ್ ಎಲ್ಲ ಊಹಾಪೋಹಗಳನ್ನು ದೂರ ಮಾಡಿದ್ದಾರೆ.
ಚೆನ್ನೈ, ಫೆಬ್ರವರಿ 06 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಜೆ. ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿ ಸತ್ತಿದ್ದು ಹೇಗೆ? ಅವರ ಸಾವಿನ ಹಿಂದೆ ಯಾರದಾದರೂ ಸಂಚಿತ್ತಾ? ಅವರು ಸಹಜವಾಗಿ ಸಾವನ್ನಪ್ಪಿದರಾ? ಅವರನ್ನು ಕೊಲೆ ಮಾಡಲಾಯಿತಾ?
ಜಯಲಲಿತಾ ಅವರು ಸಾವಿಗೀಡಾಗಿ ಎರಡು ತಿಂಗಳು ಕಳೆದಿವೆ. ಈ ಪ್ರಶ್ನೆಗಳಿಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ, ಈ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿದ ಡಾ. ರಿಚರ್ಡ್ ಬೇಲ್ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಜಯಲಲಿತಾ ಅವರ ಸಾವು ಕುರಿತಂತೆ ಹರಿದಾಡುತ್ತಿದ್ದ ಎಲ್ಲ ಊಹಾಪೋಹಗಳನ್ನು ಡಾ. ರಿಚರ್ಡ್ ಬೇಲ್ ತಳ್ಳಿಹಾಕಿದ್ದಾರೆ. [ಶಶಿಕಲಾ ಹಣೆಬರಹ ನಿರ್ಧರಿಸಲಿರುವ ಸುಪ್ರೀಂ ತೀರ್ಪು!]
ಡಾ. ರಿಚರ್ಡ್ ಬೇಲ್ ಅವರ ಮಾತಿನ ಸಾರಾಂಶ ಇಲ್ಲಿದೆ.
* ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದಾಗ ಅವರು ಸ್ಪಂದಿಸುತ್ತಿರಲಿಲ್ಲ. ನಂತರ ಆರೋಗ್ಯ ಸುಧಾರಿಸಿದಂತೆ ಮಾತುಗಳಿಗೆ ಸ್ಪಂದಿಸಲು ಆರಂಭಿಸಿದರು.
* ಅವರಿಗೆ ಚಿಕಿತ್ಸೆ ಕೊಡುವ ಮುನ್ನ ಅವರೊಂದಿಗೆ ಮಾತನಾಡಿದ್ದೆ. ಪತ್ರಗಳಿಗೆ ಸಹಿ ಕೂಡ ಹಾಕಿಸಿಕೊಳ್ಳಲಾಗಿತ್ತು. ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗಿತ್ತು.
* ನಂತರ ಸೋಂಕು ತಗುಲಿದ್ದು ಆರೋಗ್ಯ ಹದಗೆಡಲು ಶುರುವಾಯಿತು. ಆದರೆ, ಜಯಲಲಿತಾ ಅವರು ಆರೋಗ್ಯ ದಿಢೀರನೆ ಕುಸಿಯುತ್ತದೆಂದು ನಿರೀಕ್ಷಿಸಿರಲಿಲ್ಲ.
* ಸೆಪ್ಸಿಸ್ (Sepsis is a life-threatening condition that arises when the body's response to infection injures its own tissues and organs.) ನಿಂದಾಗಿ ಅವರ ಅಂಗಾಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಆರಂಭಿಸಿದವು.
* ಐಸಿಯುನಲ್ಲಾಗಲಿ, ವಾರ್ಡುಗಳಲ್ಲಾಗಲಿ ಸಿಟಿಟಿವಿ ಇರುವುದಿಲ್ಲ. ಇದ್ದರೂ ಅವುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದಿಲ್ಲ.
* ವಾಡಿಕೆಯಂತೆ ರೋಗಿಗಳ ಫೋಟೋ ತೆಗೆಯುವುದಾಗಲಿ ಮತ್ತು ಖಾಸಗಿ ವಿಷಯಗಳನ್ನು ಪ್ರಕಟ ಮಾಡುವುದಕ್ಕಾಗಲಿ ಅವಕಾಶವಿರುವುದಿಲ್ಲ. ಇದು ರೋಗಿಗಳ ಖಾಸಗಿತನದ ಮೇಲೆ ಸವಾರಿ ಮಾಡಿದಂತೆ.
* ಜಯಲಲಿತಾ ಅವರು ಅಂತಿಮವಾಗಿ ಸತ್ತಿದ್ದು ಬಹುಅಂಗ ವೈಫಲ್ಯದಿಂದ. ಅಂತಿಮವಾಗಿ ಹೃದಯಾಘಾತವಾಗಿ ಅವರು ಸಾವಿಗೀಡಾದರು.