ಸಿದ್ದು ಅಕ್ಕಪಕ್ಕದಲ್ಲಿ ಲೂಟಿಕೋರರು : ಶ್ರೀನಿವಾಸ ಪ್ರಸಾದ್
ಸಮಾಜವಾದಿಯಿಂದ ಬಂದವರು ಸಮಾಜದ ಸಮಾನತೆ ಉಳಿಸಬೇಕು, ಆದರೆ ದ್ವೇಷ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ, ದುಡ್ಡು ಮಾಡುವ ಪ್ರವೃತ್ತಿ ಇರುವವರನ್ನು ಎಡ ಮತ್ತು ಬಲ ಭಾಗದಲ್ಲಿ ಇರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ.
ಚಾಮರಾಜನಗರ, ನವೆಂಬರ್ 27 : ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಗೇಟ್ಪಾಸ್ ನೀಡಿ ಲೂಟಿಕೋರರನ್ನಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ ಎಂದು ರಾಜಕೀಯ ಮುತ್ಸದ್ದಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರದ ತಾಲೂಕು ಕಚೇರಿಯ ಪಕ್ಕದಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಅಭಿಮಾನಿಗಳು ಶನಿವಾರ ಏರ್ಪಡಿಸಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ವಾಚಾಮಗೋಚರವಾಗಿ ಟೀಕಿಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರದಿಂದ ನಾಲ್ಕು ಬಾರಿ ಲೋಕಸಭೆಗೆ ಪ್ರವೇಶ ಮಾಡಿದ್ದು, ಚಾಮರಾಜನಗರ ನನಗೆ ರಾಜಕೀಯ ಕರ್ಮಭೂಮಿಯಾಗಿದೆ. 25ನೇ ವಯಸ್ಸಿನಲ್ಲಿ ನಾನು ಲೋಕಸಭೆಗೆ ಸ್ಪರ್ಧೆ ಮಾಡಿದಾಗ ಸಿದ್ದರಾಮಯ್ಯ ಇನ್ನೂ 'ಬಚ್ಚ' ಎಂದು ಲೇವಡಿ ಮಾಡಿದರು. [ನೂರು ಶ್ರೀನಿವಾಸ ಪ್ರಸಾದ್ ಹುಟ್ಕೋತಾರೆ]
ಸಮಾಜವಾದಿಯಿಂದ ಬಂದವರು ಸಮಾಜದ ಸಮಾನತೆ ಉಳಿಸಬೇಕು, ಆದರೆ ದ್ವೇಷ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ, ದುಡ್ಡು ಮಾಡುವ ಪ್ರವೃತ್ತಿ ಇರುವವರನ್ನು ಎಡ ಮತ್ತು ಬಲ ಭಾಗದಲ್ಲಿ ಇರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ಸಿದ್ದರಾಮಯ್ಯರವರನ್ನು ಅಧಿಕಾರದಿಂದ ಇಳಿಸಲು ತಮ್ಮ ಮನೆಗೆ ಬಂದಿದ್ದು ಜಗತ್ತಿಗೆ ಗೊತ್ತಿದೆ. ಅದು ಇಲ್ಲ ಎನ್ನುವುದಾದರೆ ಮಹದೇವಪ್ರಸಾದ್ ಬಹಿರಂಗ ಸಭೆಯಲ್ಲಿ ಮಾತನಾಡಲಿ ಎಂದು ಸವಾಲು ಹಾಕಿದರು.
ದಿ. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಧರ್ಮಸಿಂಗ್ರೊಂದಿಗೆ ತಮ್ಮ ಮನೆ ಬಾಗಿಲಿಗೆ ಬಂದು ಮಂತ್ರಿಗಿರಿ ಕೊಡಿಸುವಂತೆ ಗೋಗರೆದಿದ್ದನ್ನು ಖರ್ಗೆ ಮರೆತಿರಬೇಕು. ಆದರೂ ಅವರ ಮನಸ್ಸಿನಲ್ಲಿ ಅವರಿಗೆ ನಾನು ಮಾಡಿದ ನೆರವು ಗೊತ್ತಿರುತ್ತದೆ ಎಂದು ಹಳೆಯ ನೆನಪನ್ನು ಕೆದಕಿದರು.
ನಾನು ಎಂದಿಗೂ ಅಧಿಕಾರ ಕೊಡಿಸಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ, ಆದರೆ ನನ್ನ ಮನೆ ಬಾಗಿಲಿಗೆ ಅಧಿಕಾರ ಕೊಡಿಸಿ ಎಂದು ಬಂದವರು ಅನೇಕರಿದ್ದಾರೆ ಎಂದು ಹೇಳಿದರು. ದ್ವೇಷ ರಾಜಕಾರಣಕ್ಕೆ ತಾವು ಬಲಿಯಾಗಿದ್ದು, ಕಾಲ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಸಮಾವೇಶದಲ್ಲಿ ಮಾಜಿ ಮೂಡ ಅಧ್ಯಕ್ಷ ಮೋಹನ್ ಕುಮಾರ್, ವೆಂಕಟರಮಣಸ್ವಾಮಿ, ಕಂಬ್ರಳ್ಳಿ ಸುಬ್ಬಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.