ಹನೂರಲ್ಲಿ ಅರಿಶಿನದ ನಡುವೆ ಗಾಂಜಾ ಬೆಳೆದ ಆರೋಪಿಗಳ ಬಂಧನ
ಚಾಮರಾಜನಗರ, ನವೆಂಬರ್.02: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬೇರೆ ಕೃಷಿ ಫಸಲಿನ ನಡುವೆ ಗಾಂಜಾ ಬೆಳೆದಿದ್ದ ಮೂವರನ್ನು ಹನೂರು ಪೊಲೀಸರು ಗಾಂಜಾ ಸಹಿತ ಬಂಧಿಸಿರುವ ಘಟನೆ ನಡೆದಿದೆ.
ಜಮೀನಿನಲ್ಲಿ ಅರಿಶಿನ ಬೆಳೆಯ ಜೊತೆಗೆ ಗಾಂಜಾ ಗಿಡವನ್ನು ಬೆಳೆದಿದ್ದ ಬಗ್ಗೆ ಮಾಹಿತಿಯನ್ನಾಧರಿಸಿದ ಹನೂರು ಪೊಲೀಸರು ಬೋರೆದೊಡ್ಡಿ ಗ್ರಾಮದ ಸಿದ್ದನಾಯ್ಕ ಹಾಗೂ ಆಂಡಿಪಾಳ್ಯ ಗ್ರಾಮದ ರಾಚಪ್ಪ ಕೊತ್ತನೂರು ಗ್ರಾಮದ ನಟೇಶ್ ಎಂಬುವವರನ್ನು ಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಹನೂರು ತಾಲೂಕಿನ ಬೊರೆದೊಡ್ಡಿ ಗ್ರಾಮದ ಮೆಳೆಕೆರೆ ಅರಣ್ಯ ಪ್ರದೇಶ ಅಂಚಿನಲ್ಲಿರುವ ಜಮೀನಿನಲ್ಲಿ ಅರಿಶಿನ ಬೆಳೆ ಫಸಲಿನ ನಡುವೆ ಸಿದ್ದನಾಯ್ಕ ಎಂಬಾತನು ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಆತನಿಂದ 1 ಕೆಜಿ 600 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹನೂರು ಸಮೀಪದ ಆಂಡಿಪಾಳ್ಯ ಗ್ರಾಮದ ರಾಚಪ್ಪ ಜಮೀನಿನಲ್ಲಿ ಅರಿಶಿನ ಫಸಲಿನೊಂದಿಗೆ ಅಕ್ರಮವಾಗಿ ಬೆಳೆದಿದ್ದ 5 ಕೆಜಿ ತೂಕದ ಒಂದು ಗಾಂಜಾ ಗಿಡವನ್ನು ಪಿಎಸ್ ಐ ನಾಗೇಶ್ ದಾಳಿ ನಡೆಸಿ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ನೇತೃತ್ವದ ತಂಡ ಬಾಣೂರು ಗೇಟ್ ಹತ್ತಿರದ ಗುತ್ತಿಗೆ ಜಮೀನಿನಲ್ಲಿ ಕೊತ್ತನೂರು ಗ್ರಾಮದ ನಟೇಶ್ ಬಾಳೆ ಹಾಗೂ ಅರಿಶಿಣ ಬೆಳೆಯ ನಡುವೆ ಬೆಳೆದಿದ್ದ 16 ಕೆ.ಜಿ.400 ಗ್ರಾಂ. ತೂಕದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ಜತೆಯಲ್ಲಿ ಮುಖ್ಯ ಪೇದೆಗಳಾದ ಸಿದ್ದೇಶ್, ಹೂವಯ್ಯ, ಮಲ್ಲಿಕಾರ್ಜುನಸ್ವಾಮಿ, ರಾಮದಾಸ್, ಪೇದೆಗಳಾದ ರಾಜು, ಪ್ರದೀಪ್, ಮಖಂದರ್ ಪಾಷ, ವಿಶ್ವನಾಥ್, ಚಂದ್ರು, ವೀರಭದ್ರ ಪಾಲ್ಗೊಂಡಿದ್ದರು.












Click it and Unblock the Notifications