ಬೆಂಗಳೂರು: ಶಾರುಖ್ ನಟನೆಯ ಪಠಾಣ್ ಪೋಸ್ಟರ್ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ ವಿಎಚ್ಪಿ ಕಾರ್ಯಕರ್ತರು
ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಶಾರುಖ್ ಖಾನ್ ಸಿನಿಮಾ ಪಠಾಣ್ ರಾಜ್ಯದಲ್ಲೂ ಬಿಡುಗಡೆಯಾಗಿದೆ. ಆದರೆ, ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಆಗಿದ್ದೇನು?
ಬೆಂಗಳೂರು, ಜನವರಿ. 25: ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಪ್ರದರ್ಶನವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವಿಎಚ್ಪಿ ಕಾರ್ಯಕರ್ತರು ಬಾಲಿವುಡ್ ಮತ್ತು ನಟ ಶಾರುಖ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ಪಠಾಣ್ ಚಿತ್ರದ ಪೋಸ್ಟರ್ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಶಾರುಖ್ ಖಾನ್ ಯಾರು? ಎಂದು ಪ್ರಶ್ನಿಸಿ, ನಂತರ ಪಠಾಣ್ ಚಿತ್ರಕ್ಕೆ ತೊಂದರೆಯಾಗದು ಎಂದು ಭರವಸೆ ನೀಡಿದ ಅಸ್ಸಾಂ ಸಿಎಂ!
ಶಾರುಖ್ ಖಾನ್ ಮತ್ತು ಅವರ ಸಿನಿಮಾಗಳು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದು ವಿಎಚ್ಪಿ ಸದಸ್ಯರು ಘೋಷಣೆಗಳನ್ನು ಕೂಗಿದ್ದಾರೆ. ಇದಲ್ಲದೆ ನಟಿ ದೀಪಿಕಾ ಪಡುಕೋಣೆ ಅವರು ಜವಹಾರ್ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು)ಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿ 'ತುಕ್ಡೆ ತುಕ್ಡೆ ಗ್ಯಾಂಗ್'ನ ಬೆಂಬಲಿಗರು ಎಂದು ಕಿಡಿಕಾರಿದ್ದಾರೆ.
ಹಿಂದೂಪರ ಕಾರ್ಯಕರ್ತರು ಸ್ವರೂಪ ಮತ್ತು ನರ್ತಕಿ ಚಿತ್ರಮಂದಿರಗಳಿಗೆ ನುಗ್ಗಿ ಚಿತ್ರದ ಪೋಸ್ಟರ್ಗಳನ್ನು ಹರಿದು ಹಾಕಿದರು. ಸಿನಿಮಾಗೆ ಬಹಿಷ್ಕಾರದ ಕರೆ ನೀಡಿದರೂ ಸಿನಿಮಾ ಬಿಡುಗಡೆ ಮಾಡಿರುವುದನ್ನು ಖಂಡಿಸಿ ಬ್ಯಾನರ್ಗಳನ್ನು ಹರಿದು ಹಾಕಿದ್ದರು. ಚಿತ್ರಮಂದಿರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ಇನ್ನು, ಕಲಬುರಗಿಯಲ್ಲಿಯೂ 'ಪಠಾಣ್' ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದ ಮೇಲೆ ಹಿಂದುಪರ ಸಂಘಟನೆಗಳ ಕೆಲ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ. ಬೆಳಗಾವಿಯ ಥಿಯೇಟರ್ಗಳಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾನ್' ಚಿತ್ರ ಪ್ರದರ್ಶನವನ್ನು ತಡೆಯಲು ಯತ್ನಿಸಿದ ಮತ್ತು ಹಿಂಸಾಚಾರದಲ್ಲಿ ತೊಡಗಿದ್ದಕ್ಕಾಗಿ ಪೊಲಿಸರು ಕ್ರಮಕೈಗೊಂಡಿದ್ದಾರೆ.
ಬೆಂಗಳೂರು, ಕಲಬುರಗಿ, ಬೆಳಗಾವಿಯ ಸೇರಿದಂತೆ ಹಲವು ಕಡೆಗಳಲ್ಲಿ ಸುಮಾರು 30 ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಎಚ್ಪಿಯ ಯುವ ಘಟಕವಾದ ಬಜರಂಗದಳದ ಸದಸ್ಯರು ಗುಜರಾತ್ನ ಅಹಮದಾಬಾದ್ನಲ್ಲಿ ಮಾಲ್ನಲ್ಲಿ ಪ್ರತಿಭಟನೆ ನಡೆಸಿ, ಚಿತ್ರದ ಪೋಸ್ಟರ್ಗಳನ್ನು ಹರಿದು ಹಾಕಿದರು.
'ಬೇಷರಂ ರಂಗ್' ಹಾಡು ಬಿಡುಗಡೆಯಾದ ಬಳಿಕ ದೇಶಾದ್ಯಂತ ಹಲವಾರು ಬಲಪಂಥೀಯ ಸಂಘಟನೆಗಳು 'ಪಠಾಣ್' ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಹಾಡಿನಲ್ಲಿ ದೀಪಿಕಾ ತೊಟ್ಟಿದ್ದ ಕೇಸರಿ ಬಿಕಿನಿ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಭಾರಿ ಹೇಳಿಕೆ ನಿಡುತ್ತಿದ್ದರು. ಆದರೆ, ಪ್ರಧಾನಿ ಸೂಚನೆ ನಂತರ ಅದು ನಿಂತಿದೆ ಆಗಿದೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚನೆ ನೀಡಿದ್ದರು.