ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಇಲ್ಲ:ಕಾರಜೋಳ
ಬೆಂಗಳೂರು, ಸೆಪ್ಟಂಬರ್ 15: ಬೀದರ್ ಜಿಲ್ಲೆಯಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಹೆಚ್ಚುವರಿ ಪರಿಹಾರ ನೀಡಲು ಕಾನೂನಾತ್ಮಕವಾಗಿ ಯಾವುದೇ ಅವಕಾಶ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಅರವಿಂದ್ ಕುಮಾರ್ ಅವರು ಪ್ರಕರಣ ಕುರಿತು ಪ್ರಶ್ನಿಸಿದರು. ಕಾರಂಜಾ ಮುಳುಗಡೆ ಪರಿಹಾರಕ್ಕೆ ಒತ್ತಾಯಿಸಿ ರೈತರು 80 ದಿನಗಳಿಂದ ಧರಣಿ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ ಏಕೆ ಎಂದು ಅವರು ಕೇಳಿದರು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ 69 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ. ಇನ್ನೂ ಕೆಲವು ರೈತರು ಕೋರ್ಟ್ಗೆ ಹೋಗಿಲ್ಲ. ಕೋರ್ಟ್ಗೆ ಹೋಗದೆ ಇರುವ ರೈತರು ಸರ್ಕಾರಕ್ಕೆ ಅರ್ಜಿ ಹಾಕಿದವರಿಗೂ ಕೂಡ ಪರಿಹಾರ ಕೊಡಲು ಅವಕಾಶ ಇದೆ. ಆದರೆ, ಅವರು ಮೂರು ತಿಂಗಳ ಒಳಗೆ ಅರ್ಜಿ ಹಾಕಿಕೊಂಡಿಲ್ಲ. ಈಗ 25ರಿಂದ 30 ವರ್ಷದ ನಂತರ ಧರಣಿ ಕೂತರೇ ಕೊಡಲು ಸಾಧ್ಯವಿಲ್ಲ ಎಂದರು.

2014ರಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಪರಿಹಾರ ಕೊಡಲು ಅವಕಾಶ ಇಲ್ಲ ಎಂಬುದಾಗಿ ಸಂಪುಟದಲ್ಲಿ ನಿರ್ಣಯವಾಗಿದೆ. ಯುಕೆಪಿ ಮಾದರಿಯಲ್ಲಿ ಪರಿಹಾರ ಕೊಡುವುದಕ್ಕೆ ಅವಕಾಶ ಇಲ್ಲ. ಯುಕೆಪಿ ಯೋಜನೆಗೆ ವಿಶ್ವಬ್ಯಾಂಕ್ ನೆರವು ತೆಗೆದುಕೊಂಡಿದ್ದೇವೆ. ವಿಶ್ವ ಬ್ಯಾಂಕ್ನವರಿಂದ ಯಾವ ರೀತಿ ಪರಿಹಾರ ಕೊಡಬೇಕು ಎಂಬುದಾಗಿ ಕೆಲವು ಷರತ್ತುಗಳು ಇವೆ. ಆ ಷರತ್ತು ಒಪ್ಪಿಕೊಂಡ ನಂತರವೇ ಸರ್ಕಾರಕ್ಕೆ ವಿಶ್ವಬ್ಯಾಂಕ್ ಸಾಲ ನೀಡಿದೆ. ಹೀಗಾಗಿ ಪರಿಹಾರ ವಿಚಾರದಲ್ಲಿ ಹೊಲಿಕೆ ಮಾಡಲು ಬರುವುದಿಲ್ಲ ಎಂದರು.
ಯೋಜನೆ ಆರಂಭಿಸಿ 30ರಿಂದ 40 ವರ್ಷಗಳೇ ಆಗಿವೆ. ಈವರೆಗೆ ಸಂತ್ರಸ್ತರ 69 ಕೋಟಿ ರೂ. ಪರಿಹಾರ ತೆಗೆದುಕೊಂಡಿದ್ದಾರೆ. ಇನ್ನುಮುಂದೆ ಒಂದು ರೂಪಾಯಿ ಪರಿಹಾರ ಕೊಡಲು ಸಾಧ್ಯವಿಲ್ಲ. ಹೈಕೋರ್ಟ್ ಸಹ ಮನವಿಗಳನ್ನು ತಿರಸ್ಕರಿಸಿದೆ. ಇಂತಹ ಬೇಡಿಕೆಗಳನ್ನ ತರುವಾಗ ಸಂಪೂರ್ಣ ತಿಳಿದು ಮೇಲ್ಮನೆಗೆ ತರುವಂತೆ ಸಚಿವರು ಸೂಚಿಸಿದರು.

ಅನುದಾನದ ಲಭ್ಯತೆ ಮೇಲೆ ಯೋಜನೆ ಅನುಷ್ಠಾನ
ಬಳ್ಳಾರಿ ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಯೋಜನೆ ಕುರಿತು ಸದನದಲ್ಲಿ ಪ್ರಸ್ತಾಪಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಇರುವುದು ನೀರಾವರಿ ಸೌಲಭ್ಯ ಒದಗಿಸಲು ಎಂಬುದು ಗಮನದಲ್ಲಿರಲಿ. ಅಲ್ಲದೇ 60 ಕೋಟಿ ರೂ.ವೆಚ್ಚದ ಯೋಜನೆಗೆ ಅನುಮೋದನೆ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಯೋಜನೆ ಅನುಮೋದನೆಯೇ ದೊರೆತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕುಡಿಯುವ ನೀರಿನ ಯೋಜನೆ 2019-2020 ಸಾಲಿನ ಬಜೆಟ್ನಲ್ಲಿ ಘೋಷಣೆ ಆಗಿದೆ. ಯೋಜನೆಗಳು 2013ರಿಂದ ಈವರೆಗೂ ಘೋಷಣೆ ಆಗುತ್ತಲೇ ಇವೆ. ಇವತ್ತಿನ ಕಾಮಗಾರಿಗಳಿಗೆ 1ಲಕ್ಷ ರೂ.ನಿಂದ 2ಸಾವಿರ ಕೋಟಿ ರೂ.ವರೆಗೆ ವೆಚ್ಚ ಹೆಚ್ಚಾಗಿದೆ. ಸದ್ಯ ನಮಗೆ ಬಜೆಟ್ನಲ್ಲಿ 18ರಿಂದ 19 ಸಾವಿರ ಕೋಟಿ ವರೆಗೆ ಮಾತ್ರ ಅನುದಾನ ಸಿಗುತ್ತಿದೆ. ಹೀಗಾಗಿ ಅನುದಾನದ ಲಭ್ಯತೆ ಆಧಾರದಲ್ಲಿ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಅವರು ಪುನರುಚ್ಚರಿಸಿದರು.












Click it and Unblock the Notifications