ಜೈಲು ಅಧಿಕಾರಿಗಳ ಕಣ್ಣಿಗೆ ಕಾರದ ಪುಡಿ ಎರಚಿ ಎಸ್ಕೇಪ್ ಆಗಿದ್ದ ಕೈದಿ 11 ವರ್ಷದ ಬಳಿಕ ಸೆರೆ
ಬೆಂಗಳೂರು, ಡಿ. 06: ಮೂತ್ರಕೋಶ ಸಮಸ್ಯೆ ನಾಟಕವಾಡಿ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕೈದಿಯೊಬ್ಬ ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದು, ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಅಂದಹಾಗೆ ಆತ ಅನಾರೋಗ್ಯ ನಾಟಕವಾಡಿ ಜೈಲಿನಿಂದ ತಪ್ಪಿಸಿಕೊಂಡು ಹೋದ ರೋಚಕ ಕಹಾನಿ ಇಲ್ಲಿದೆ ನೋಡಿ.
ಆತನ ಹೆಸರು ಧರ್ಮಸಿಂಗ್ ಯಾದವ್. ಮೂಲತಃ ಅಸ್ಸಾಂ ಮೂಲದವ. ಏರ್ಫೋರ್ಸ್ನಲ್ಲಿ ಜವಾನನಾಗಿದ್ದ ಧರ್ಮಸಿಂಗ್ ಯಾದವ್ ನಿವೃತ್ತಿ ಬಳಿಕ ಬೆಂಗಳೂರಿನ ಕಂಪನಿಯಲ್ಲಿ ಪರ್ಚೇಸಿಂಗ್ ಆಫೀಸರ್ ಆಗಿದ್ದ. ಈತನಿಗೆ ಇಬ್ಬರು ಮಕ್ಕಳು ಪತ್ನಿ ಜತೆ ನೆಮ್ಮದಿ ಜೀವನ ಮಾಡಿಕೊಂಡಿದ್ದ.
ಈತನಿಗೆ ಎರಡನೇ ಮದುವೆ ಆಗುವ ಆಸೆ ಆಗಿ ತಾನು ಏರ್ ಫೋರ್ಸ್ ಅಧಿಕಾರಿ ಎಂದು ಮದುವೆ ಸಂಬಂಧ ಕಲ್ಪಿಸುವ ಜೀವನ್ ಸಾಥಿ ವೆಬ್ ತಾಣದಲ್ಲಿ ವಿವರ ಹಾಕಿದ್ದ. ಈತನ ಪ್ರೊಪೈಲ್ ನೋಡಿದ್ದ ಯುವತಿಯೊಬ್ಬರು ಮದುವೆಯಾಗಲು ಒಪ್ಪಿದ್ದಳು. ತಾನು ಎರಡನೇ ಮದುವೆಯಾದರೆ ಮೊದಲನೇ ಹೆಂಡತಿ ಅಡ್ಡಿ ಪಡಿಸುತ್ತಾಳೆ ಎಂಬ ದುರುದ್ದೇಶದಿಂದ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ. ಚಿನ್ನಾಭರಣ ಕಳುವು ಮಾಡಲು ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ.
ಧರ್ಮಸಿಂಗ್ ಯಾದವ್ ನಾಟಕ ನೋಡಿದ್ದ ವಿದ್ಯಾರಣ್ಯಪುರ ಪೊಲೀಸರು ಸಾಕ್ಷಿ ಸಮೇತ ಧರ್ಮಸಿಂಗ್ ಯಾದವ್ ನನ್ನು ಬಂಧಿಸಿದ್ದರು. 2008 ರಲ್ಲಿ ಈತನನ್ನು ಜೈಲಿಗೆ ಕಳುಹಿಸಿದ್ದರು. ಎರಡು ವರ್ಷ ಎರಡು ತಿಂಗಳು ಜೈಲಿನಲ್ಲಿಯೇ ಇದ್ದ. ಇತ್ತ ಎರಡನೇ ಮದುವೆ ಆಗುವ ಆಸೆ ಬಿಟ್ಟು ಜೈಲಿನಲ್ಲಿ ಕೊಳೆಯುತ್ತಿದ್ದ.
ಜೈಲಿನಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿದ ಆರೋಪಿ, ತನಗೆ ಮೂತ್ರ ಕೋಶದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದ. ಈತನ ಮಾತು ನಂಬಿ ಜೈಲು ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ನಡೆಸಿದ ಬಳಿಕ ಸ್ವಲ್ಪ ದೂರ ನಡೆಯುವಂತೆ ವೈದ್ಯರು ಹೇಳಿದ್ದರು. ಈ ವೇಳೆ ನಡೆಯುವ ಸೋಗಿನಲ್ಲಿ ಜೈಲು ಅಧಿಕಾರಿಗಳ ಕಣ್ಣಿಗೆ ಕಾರದ ಪುಡಿ ಎರಚಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಹೀಗೆ ಜೈಲು ಸಿಬ್ಬಂದಿ ಮುಖಕ್ಕೆ ಕಾರದ ಪುಡಿ ಎರಚಿ ಹೋದವನು ನಾಪತ್ತೆಯಾಗಿದ್ದ. ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಹನ್ನೊಂದು ವರ್ಷಗಳ ಬಳಿಕ ಸಿಕ್ಕಿಬಿದ್ದ:
ಹನ್ನೊಂದು ವರ್ಷಗಳ ಬಳಿಕ ಧರ್ಮಸಿಂಗ್ ಯಾದವ್ ಅಸ್ಸಾಂನಲ್ಲಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ಪೊಲೀಸರ ನೆರವಿನಿಂದ ಅಸ್ಸಾಂನಲ್ಲಿದ್ದ ಧರ್ಮಸಿಂಗ್ ಯಾದವ್ ನನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ಮತ್ತೆ ಬಂಧಿತ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಇನ್ನು ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಧರ್ಮಸಿಂಗ್ ಯಾದವ್ ಅಸ್ಸಾಂ ನಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಅಲ್ಲಿ ಲಿಕ್ಕರ್ ಲೈಸನ್ಸ್ ಪಡೆದು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. 2012 ರಲ್ಲಿ ಎರಡನೇ ಮದುವೆಯಾಗಿದ್ದ ಈತನಿಗೆ ಮತ್ತೆ ಇಬ್ಬರು ಮಕ್ಕಳು ಆಗಿದ್ದರು. ಹಣೆ ಬರಹ ಕೆಟ್ಟು ಇದೀಗ ಇದೀಗ ಮತ್ತೆ ಜೈಲು ಸೇರಿದ್ದಾನೆ.
ಪೊಲೀಸರ ಪ್ರಶಂಸೆ:
ಇನ್ನು ಸತತ ಹನ್ನೊಂದು ವರ್ಷಗಳ ಬಳಿಕ ಧರ್ಮಸಿಂಗ್ ಯಾದವ್ ನನ್ನು ಪತ್ತೆ ಮಾಡಿದ ವಿವಿಪುರಂ ಪೊಲೀಸರ ಕಾರ್ಯ ಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಹನ್ನೊಂದು ವರ್ಷವಾದ ಬಳಿಕವೂ ಆರೋಪಿ ಬಗ್ಗೆ ನಿಗಾ ಇಟ್ಟು ಪತ್ತೆ ಮಾಡಿರುವ ಪೊಲೀಸರ ಕಾರ್ಯ ಶೈಲಿಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಧರ್ಮಸಿಂಗ್ ಯಾದವ್ ನನ್ನು ಎರಡನೇ ಮದುವೆಯಾದ ಮಹಿಳೆ ಮತ್ತು ಇಬ್ಬರು ಮಕ್ಕಳು ಬೀದಿ ಪಾಲಾಗಿರುವುದನ್ನು ನೆನಪಿಸಿಕೊಂಡರೆ ಎಂಥವರಿಗೂ ಕರುಳು ಚುರ್ ಎನ್ನುತ್ತದೆ. ಏನು ಆರಿಯದ ಮಕ್ಕಳು ಇದೀಗ ನೋವು ಅನುಭವಿಸುವಂತಾಗಿದೆ.
Recommended Video