ಆರೋಗ್ಯ ಸೇವೆಗಾಗಿ ಬಿಬಿಎಂಪಿಯ ವಾರ್ಡ್ಗೊಂದು ನಮ್ಮ ಕ್ಲಿನಿಕ್!
ಬೆಂಗಳೂರು, ಜುಲೈ 01: ಕೋವಿಡ್ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪ್ರತಿ ವಾರ್ಡ್ನಲ್ಲಿ ಕ್ಲಿನಿಕ್ ತೆರೆಯಲು ತೀರ್ಮಾನಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ಕೈಗೊಂಡಿದ್ದು 'ನಮ್ಮ ಕ್ಲಿನಿಕ್' ಸ್ಥಾಪನೆ 103ಕೋಟಿ ಹಣವನ್ನು ಮೀಸಲು ಇಡಲಾಗಿದೆ.
ಬಿಬಿಎಂಪಿ ಪ್ರತಿಯೊಂದು ವಾರ್ಡ್ನಲ್ಲಿಯೂ 'ನಮ್ಮ ಕ್ಲಿನಿಕ್' ತೆರೆಯಲು ತೀರ್ಮಾನಿಸಲಾಗಿದೆ. ನಮ್ಮ ಕ್ಲಿನಿಕ್ ತೆರೆಯಲು ಸುಮಾರು 30ರಿಂದ 35 ಲಕ್ಷ ಹಣ ಖರ್ಚು ತಗುಲಲಿದ್ದು. ಇದಕ್ಕಾಗಿ ಸಂಪುಟ ಸಭೆಯಲ್ಲಿ 103 ಕೋಟಿ ಹಣವನ್ನು ಮೀಸಲು ಇಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಸರ್ಕಾರ 'ನಮ್ಮ ಕ್ಲಿನಿಕ್' ಯೋಜನೆ ಮಾಡಲು ನಿರ್ಧಾರ ಮಾಡಿದ್ದು. ಪ್ರತಿ ಅರ್ಬನ್, ಲೋಕಲ್ ಬಾಡಿಯಲ್ಲಿ ಕ್ಲಿನಿಕ್ ಸ್ಥಾಪಿಸಲು ನಿರ್ಧಾರ. ಅದಕ್ಕಾಗಿ 438 ವೈದ್ಯರು 438 ನರ್ಸ್ ನೇಮಕ ಮಾಡಲಾಗುತ್ತದೆ. ವೈದ್ಯರು ಮತ್ತು ನರ್ಸ್ಗಳನ್ನು ಟೆಂಪ್ರವರಿಯಾಗಿ ನೇಮಕ ಮಾಡಲಾಗುತ್ತದೆ. ಈ ನಮ್ಮ ಕ್ಲಿನಿಕ್ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ತೆರೆಯಲು ಅನುಮತಿಯನ್ನು ನೀಡಲಾಗಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಜೆ. ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರಾಥಮಿಕ ಚಿಕಿತ್ಸೆಗೆ ನೆರವು
ಬಿಬಿಎಂಪಿ ವಾರ್ಡ್ ಮರುವಿಂಗಡಣೆಯ ಬಳಿಕ 243 ವಾರ್ಡ್ಗಳನ್ನು ರಚನೆ ಮಾಡಲಾಗಿದೆ. ಈ ಎಲ್ಲಾ ವಾರ್ಡ್ಗಳಲ್ಲೂ ನಮ್ಮ ಕ್ಲಿನಿಕ್ ತೆರೆಯಲು ತೀರ್ಮಾನವನ್ನು ಸಂಪುಟ ಸಭೆ ತೀರ್ಮಾನಿಸಿದೆ. ಈ ಕ್ಲಿನಿಕ್ನಲ್ಲಿ ಸಾಂಕ್ರಮಿಕ ಸಣ್ಣಪುಟ್ಟ ರೋಗಗಳು ಸೇರಿದಂತೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲು ಅನುಕೂಲವಾಗಲಿದ್ದು ಔಷಧವನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.
ಕ್ಲಿನಿಕ್ನಿಂದ ತಗ್ಗಲಿದೆ ಖಾಸಗಿ ಕ್ಲಿನಿಕ್ ದರ್ಬಾರ್
ಕೋವಿಡ್ನಿಂದ ರಾಜ್ಯದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದರು. ಬೆಂಗಳೂರು ಸ್ಮಶಾಣದಂತೆ ಹೆಣಗಳ ರಾಶಿಯಾಗಿದ್ದವು. ಎಲ್ಲಾ ಆಸ್ಪತ್ರೆಗಳಲ್ಲೂ ಹಾಸಿಗೆಗಳು ಪೂರ್ತಿಯಾಗಿದ್ದವು. ಆಸ್ಪತ್ರೆಗೆ ಹೋಗಲು ಜನ ಪರದಾಡುತ್ತಿದ್ದರು. ಈ ವೇಳೆ ಕೋವಿಡ್ ಇಲ್ಲದಿದ್ದರು ಚಿಕಿತ್ಸೆ ಪಡೆಯುವುದು ಅನಾನುಕೂಲವಾಗಿತ್ತು. ಈ ಎಲ್ಲಾ ಅಂಶಗಳನ್ನು ಗಮನಿಸಿದ್ದ ಸರ್ಕಾರ ಬೆಂಗಳೂರನ್ನು ಕೇಂದ್ರಿತವಾಗಿಟ್ಟುಕೊಂಡು ಪ್ರತಿ ವಾರ್ಡ್ ನಲ್ಲೂ ನಮ್ಮ ಕ್ಲಿನಿಕ್ ತೆರೆಯಲು ತೀರ್ಮಾನವನ್ನು ಮಾಡಿದೆ. ಇದರಿಂದ ಖಾಸಗಿ ಕ್ಲಿನಿಕ್ ಸಣ್ಣ ಪುಟ್ಟ ಚಿಕಿತ್ಸೆಗೆ ಸಾವಿರಾರೂ ರೂಪಾಯಿ ಹಣವನ್ನು ಪಡೆಯುತ್ತಿರುವ ಹಾವಳಿಯನ್ನು ತಪ್ಪಿಸಬಹುದಾಗಿದೆ.
ಆರೋಗ್ಯದ ಮಹತ್ವಕಾಂಕ್ಷೆಗೆ ಕ್ಲಿನಿಕ್
ಬಿಬಿಎಂಪಿಯ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿದೆ. ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿಗಾಗಿ ರಾಜ್ಯ ಸರ್ಕಾರ ವಿಶೇಷ ಗಮನವನ್ನು ಕೇಂದ್ರಿಕರಿಸುತ್ತಿದೆ. ಇದರ ಪರಿಣಾಮದಿಂದಾಗಿ ವಾರ್ಡ್ಗೊಂದು ನಮ್ಮ ಕ್ಲಿನಿಕ್ ತೆರೆಯಲು ತೀರ್ಮಾನಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಬಗ್ಗೆ ಕಾಳಜಿಯನ್ನು ಸರ್ಕಾರ ಹೊಂದಿದೆ ಎಂದು ಈ ಮೂಲಕ ತೋರ್ಪಡಿಸಿಕೊಳ್ಳುತ್ತಿದೆ. ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಲ್ಲಿ 30-40 ಸಾವಿರ ಜನ ವಾಸಿಸುತ್ತಿದ್ದು. ಈ ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಕ್ಲಿನಿಕ್ ನೆರವಾಗಲಿದೆ.
ಕೆಲವರಿಗೆ ಸಿಗಲಿದೆ ಉದ್ಯೋಗ ಭಾಗ್ಯ
ನಮ್ಮ ಕ್ಲಿನಿಕ್ಗಳನ್ನು ತೆರೆಯುವುದರಿಂದ ಜನರ ಆರೋಗ್ಯದ ಜೊತೆಗೆ ಕೆಲವರಿಗೆ ಉದ್ಯೋಗವು ಸಿಗಲಿದೆ. 438 ವೈದ್ಯರು ಮತ್ತು 438 ನರ್ಸ್ಗಳನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿದೆ. ಆದರೆ ಈ ನೇಮಕವೂ ತಾತ್ಕಾಲಿಕವಾದದ್ದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅದೇನಾದರೂ ನಮ್ಮ ಕ್ಲಿನಿಕ್ ನಿರ್ಲಕ್ಷ್ಯಕ್ಕೆ ಒಳಗಾಗಿ ಇಂದಿರಾ ಕ್ಯಾಂಟೀನ್ ಹಾದಿಯನ್ನು ಹಿಡಿಯದಿದ್ದರೆ ಸಾಮಾನ್ಯ ಬಡ ಜನರಿಗೆ ನಮ್ಮ ಕ್ಲಿನಿಕ್ನಲ್ಲಿ ಚಿಕಿತ್ಸೆ ಸಿಗಲಿದೆ.