ರಾಜ್ಯ ಸರ್ಕಾರದಿಂದಲೇ ರಾಜ್ಯದ ಉದ್ಯಾಗಾಕಾಂಕ್ಷಿಗಳಿಗೆ ಅನ್ಯಾಯ?
Recommended Video
ಬೆಂಗಳೂರು, ಫೆಬ್ರವರಿ 01 : ಬ್ಯಾಂಕುಗಳು ಮತ್ತು ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯ ಈಗ ರಾಜ್ಯ ಸರ್ಕಾರದ ಇಲಾಖೆಗಳ ಉದ್ಯೋಗದಲ್ಲೂ ಆಗುತ್ತಿರುವುದು ಗಮನಕ್ಕೆ ಬಂದಿದೆ.
ಕೆಪಿಟಿಸಿಎಲ್ ನಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗಿಂತಲೂ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.
ಕೆಪಿಟಿಸಿಎಲ್ ಇಲಾಖೆಯು ಕೆಲವು ಹುದ್ದೆಗಳಿಗೆ ನೌಕರರನ್ನು ಆಯ್ಕೆ ಮಾಡಿಕೊಳ್ಳಲು 2016 ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದೀಗ ಆಯ್ಕೆ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದು ನಿಂತಿದೆ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿಬರುತ್ತಿದೆ.
A ಮತ್ತು B ಹುದ್ದೆಗಳಾದ ನೀಡಲಾದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ನಲ್ಲಿ ಮಾತ್ರವೇ ಇತ್ತು. ಕನ್ನಡವನ್ನು ಭಾಷೆಯಾಗಿ ಕಲಿತ ಕನ್ನಡ ಭಾಷಿಕರಿಗೆ ಇದರಿಂದ ಅನ್ಯಾಯವಾಗಿದೆ ಎನ್ನಲಾಗಿದೆ.
ಹೊರ ರಾಜ್ಯದವರಿಗೂ ನೌಕರಿಗೆ ಸೇರಲು ಅವಕಾಶ ಕಲ್ಪಿಸಲಾಗಿದೆ. ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ರೀತಿಯ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲಿಯೇ ನೂರಾರು ಎಂಜಿನಿಯರಿಂಗ್ ಕಾಲೇಜುಗಳು ಇರುವಾಗ ಹೊರ ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏಕೆ ಅವಕಾಶ ನೀಡಬೇಕು ಎಂಬ ಪ್ರಶ್ನೆಯನ್ನು ರಾಜ್ಯದ ಉದ್ಯೋಗಾಕಾಂಕ್ಷಿಗಳು ಕೇಳುತ್ತಿದ್ದಾರೆ.
150 ಅಂಕದ ಕನ್ನಡ ಪರೀಕ್ಷೆಯಲ್ಲಿ 50 ಅಂಕ ಪಡೆದುಕೊಂಡರೆ ಸಾಕು ಎನ್ನುವ ನಿಯಮ ಮಾಡಲಾಗಿದೆ. ಇದರಿಂದ ಹೊರ ರಾಜ್ಯದವರಿಗೆ ನೌಕರಿ ಹಿಡಯಲು ಅನುಕೂಲವಾಗಿದೆ. AE ಹುದ್ದೆಗೆ ಎಂಜಿನಿಯರಿಂಗ್ ಕಲಿತವರಿಗಷ್ಟೆ ಅವಕಾಶ ಎಂಬ ನಿಯಮ ಹಾಕಲಾಗಿದೆಯಾದರೂ ಹೊರ ರಾಜ್ಯದ B.Tech ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಬ್ಯಾಂಕು, ರೈಲ್ವೆ ಇಲಾಖೆ, ಅಂಚೆ ಇಲಾಖೆ ಎಲ್ಲಾ ಆದ ನಂತರ ಈಗ ರಾಜ್ಯ ಸರ್ಕಾರದ ಇಲಾಖೆಗಳ ನೌಕರಿಗಳಲ್ಲೂ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.