ಪೊಲೀಸರಿಗೆ ಆಟ ಆಡಿಸುತ್ತಿದ್ದ ನಾಲ್ಕು ಪುಂಡರು ಕೊನೆಗೂ ಅಂದರ್!
ಬೆಂಗಳೂರು, ಮೇ. 31: ಅದು ಇನ್ನೂ ಮೀಸೆ ಚಿಗುರದ ವಯಸ್ಸಿನ ನಾಲ್ಕು ಹುಡುಗರ ಕಳ್ಳ ಗ್ಯಾಂಗ್. ಬೈಕ್ ಕಳ್ಳತನ ಹಾಗೂ ಸುಲಿಗೆ ಮಾಡುವ ಈ ಗ್ಯಾಂಗ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದರು. ಮೂರು ಸಲ ಪೊಲೀಸರಿಗೆ ಟಾಂಗ್ ನೀಡಿದ್ದ ಕಳ್ಳರು ನಾಲ್ಕನೇ ಸಲ ಕೊರೊನಾ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಾಲ್ವರು ಕಳ್ಳರ ಕಳ್ಳತನ ಪ್ರಕರಣಗಳ ಚರಿತ್ರೆಯನ್ನು ಹನುಮಂತನಗರ ಠಾಣೆ ಪೊಲೀಸರು ಬಯಲಿಗೆ ಎಳೆದಿದ್ದಾರೆ.
ಮೊಹಮ್ಮದ್ ಯೂಸುಫ್(19), ಮೊಹಮ್ಮದ್ ತೌಸಿಫ್(19), ಶ್ರೀನಿವಾಸ್(22) ಹಾಗೂ ಸೈಯ್ಯದ್ ಸಾಹೇಬ(22) ಬಂಧಿತರು. ಚಾಕು ಹಾಗೂ ಡ್ರಾಗರ್ ತೋರಿಸಿ ಮೊಬೈಲ್ ಹಾಗೂ ಬೈಕ್ ಕದಿಯುತ್ತಿದ್ದರು. ಮೇ. 25 ರಂದು ಬೆಳಗಿನ ಜಾವ ಹನುಮಂತನಗರದಲ್ಲಿ ಶಬರೀಶ್ ಎಂಬುವವರಿಗೆ ಚಾಕು ತೋರಿಸಿ ಬೈಕ್ ಕದ್ದಿದ್ದರು.
ಬಂಧಿತ ಆರೋಪಿಗಳಿಂದ ಮೈಸೂರಿನಲ್ಲಿ ಸುಲಿಗೆ ಹಾಗೂ ಬ್ಯಾಟರಾಯನಪುರದಲ್ಲಿ ಕಳವು ಪ್ರಕರಣ ಪತ್ತೆಯಾಗಿವೆ. ಇದರ ಜತೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಡಿದ್ದ ಸುಲಿಗೆ ಪ್ರಕರಣವೂ ಪತ್ತೆ ಮಾಡಿದಂತಾಗಿದೆ. ಮೇ. 26 ರಂದು ಲಾಕ್ ಡೌನ್ ನಿಯಮ ಉಲ್ಲಂಘನೆ ಸಂಬಂಧ ವಾಹನ ತಪಾಸಣೆ ನಡೆಸುತ್ತಿದ್ದರು.
Recommended Video
ಮಾರುತಿ 800 ಕಾರ್ನಲ್ಲಿ ಬಂದಿದ್ದ ಕಳ್ಳರು ಪೊಲೀಸರನ್ನು ನೋಡಿ ತಪ್ಪಿಸಿ ಕೊಂಡು ಪರಾರಿಯಾಗಿದ್ದರು. ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರು. ಅರೋಪಿಗಳನ್ನು ಬೆನ್ನತ್ತಿ ಹಿಡಿದಾಗ ಸುಲಿಗೆ ಹಾಗೂ ಕಳವು ಪ್ರಕರಣ ಪತ್ತೆಯಾಗಿದ್ದು, ಬಂಧಿತರಿಂದ 5.30 ಲಕ್ಷ ರೂ. ಬೆಲೆ ಬಾಳುವ ಮಾರುತಿ ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ.