ಮಾಜಿಯಾದ ಬಳಿಕ ರಾಜಾಜಿನಗರದ ಪ್ರಗತಿಗೆ ಟೊಂಕ ಕೊಟ್ಟಿ ನಿಂತ ಸುರೇಶ್ ಕುಮಾರ್
ಬೆಂಗಳೂರು, ಅ. 05: ಯಾರಾದರೂ ಸಚಿವ ಸ್ಥಾನದಿಂದ ನಿರ್ಗಮಿಸಿದರೆ ಸರ್ಕಾರದ ವಿರುದ್ಧವೇ ಮಸಲತ್ತು ಮಾಡಿ ಕಾಲ ಕಳೆಯುತ್ತಾರೆ. ಆದರೆ ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಆಗಲ್ಲ. ಶಿಕ್ಷಣ ಸಚಿವ ಸ್ಥಾನದಿಂದ ನಿರ್ಗಮಿಸಿದ ಬಳಿಕ ಕ್ಷೇತ್ರದ ಜತೆಗೆ ತುಂಬಾ ಸಮೀಪವಾಗಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಜತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರ ಸುತ್ತಾಡುತ್ತಾರೆ. ಪ್ರತಿ ಕಾಮಗಾರಿ ಗುಣಮಟ್ಟ ಪರಿಶೀಲಿಸುತ್ತಾರೆ. ಅದರ ಒಂದು ಭಾಗವಾಗಿ ರಾಜಾಜಿನಗರದಿಂದ ವಿಜಯನಗರಕ್ಕೆ ಸಂಪರ್ಕಿಸುವ ಕಾರ್ಡ್ ರೋರ್ಡ್ನ ಶಿವನಹಳ್ಳಿ ಮೇಲ್ಸೇತುವೆ ಕ್ಷೇತ್ರದ ಜತೆಗೆ ಅರ್ಪಿಸಿದ್ದಾರೆ.
ಸುರೇಶ್ ಕುಮಾರ್ ಶಿಕ್ಷಣ ಸಚಿವ ಸ್ಥಾನದಿಂದ ನಿರ್ಗಮಿಸಿದ್ದಕ್ಕೆ ಕಾರಣ ಗೊತ್ತಿಲ್ಲ. ಅವರು ಸಚಿವ ಸ್ಥಾನಕ್ಕಾಗಿ ಆಸೆ ಪಡುವವರು ಅಲ್ಲ. ಸಚಿವ ಸ್ಥಾನದಿಂದ ಕೆಳಗೆ ಇಳಿದರೆ ಪುನಃಲಾಬಿ ಮಾಡುವ ವರ್ಗಕ್ಕೂ ಸೇರಲ್ಲ ಎಂಬುದು ಹೈಕಮಾಂಡ್ಗೆ ಗೊತ್ತಿರಬೇಕು!. ಮಾಜಿ ಸಚಿವರಾದರೂ ತಾನು ತನ್ನ ಕ್ಷೇತ್ರದ ಸಮರ್ಥ ಸೇವಕ ಎಂದು ತೋರಿಸಿದ್ದಾರೆ. ಸಚಿವ ಸ್ಥಾನದಿಂದ ನಿರ್ಗಮಿಸಿದ ಎರಡೇ ತಿಂಗಳಲ್ಲಿ ಶಿವನಹಳ್ಳಿ ಮೇಲ್ಸೇತುವೆ ರಸ್ತೆಯನ್ನು ಜನತೆಗೆ ಅರ್ಪಣೆ ಮಾಡಿದ್ದಾರೆ.
ಸ್ವತಃ ಸಚಿವರೇ ಗುಣಮಟ್ಟ ಪರಿಶೀಲನೆ: ರಾಜಾಜಿನಗರದ ಶಿವನಹಳ್ಳಿ ವೃತ್ತದಿಂದ ಟೋಲ್ ಗೇಟ್ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿ ಹಲವು ತಿಂಗಳಿನಿಂದ ನಡೆಯುತ್ತಿದೆ. ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗಿತ್ತು. ಸಚಿವ ಸ್ಥಾನದಿಂದ ನಿರ್ಗಮಿಸಿದ ಕೂಡಲೇ ಕಾಮಗಾರಿಯ ಗುಣಮಟ್ಟದಲ್ಲಿ ಸ್ವಲ್ಪವೂ ರಾಜಿಯಾಗದಂತೆ ಪರಿಶೀಲನೆ ಮಾಡಿದರು. ನಿರಂತರವಾಗಿ ಮೇಲ್ಸೇತುವೆ ತಪಾಸಣೆ ಮಾಡಿ ಒಬ್ಬ ಜನ ಪ್ರತಿನಿಧಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಇದರಿಂದ ಶಿವನಹಳ್ಳಿ ಮೇಲ್ಸೇತುವೆ ಇದೀಗ ಜನರ ಸೇವೆಗೆ ಸಿದ್ಧವಾಗಿದೆ.
ಉದ್ಘಾಟನೆಗೆ ಸಜ್ಜು: ಶಿವನಹಳ್ಳಿ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗಿದೆ. ವಿನೂತನ ದೀಪದ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಮೇಲ್ಸೇತುವೆಗೆ ಚಾಲನೆ ನೀಡಿದರು. ಮೇಲ್ಸೇತುವೆಗೆ ಹಾಕಿರುವ ಟಾರ್ ಗುಣಮಟ್ಟ, ವಿದ್ಯುತ್ ಕಂಬಗಳು, ಬೆಳಗುತ್ತಿರುವ ವಿದ್ಯುತ್ ದೀಪಗಳು ರಾಜಾಜಿನಗರ ಕ್ಷೇತ್ರಕ್ಕೆ ಅಂದ ಕೊಟ್ಟಿದೆ. ಕಾಮಗಾರಿಗಳು ಅಂದರೆ ಶಾಸಕರು ಕೇವಲ ಗುತ್ತಿಗೆದಾರರನ್ನು ಮನೆಗೆ ಕರೆಸಿಕೊಂಡು ಮಾತನಾಡುವುದೇ ಜಾಸ್ತಿ. ಆದರೆ, ಸುರೇಶ್ ಕುಮಾರ್ ಅವರು ಹಲವು ಸಲ ಕಾಮಗಾರಿ ತಪಾಸಣೆ ನಡಿಸಿ, ಗುಣಮಟ್ಟ ಪರಿಶೀಲಿಸಿ ಸುದ್ದಿಯಾಗಿದ್ದರು. ಇದೀಗ ಜನರ ಸೇವೆಗೆ ಅರ್ಪಣೆ ಮಾಡಲಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದಕ್ಕೂ ಮೊದಲು ರಾಜಾಜಿನಗರದಲ್ಲಿ 150 ಹಾಸಿಗೆ ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಸುದ್ದಿಯಾಗಿದ್ದರು.
ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ತೆಗೆದುಕೊಂಡ ಕೆಲವು ತೀರ್ಮಾನಗಳು ಹಲವು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದವು. ಶಾಲಾ ಶುಲ್ಕ ವಿವಾದ, ಶಾಲೆಗಳ ಅಗ್ನಿ ಮತ್ತು ಸುರಕ್ಷತಾ ವಿವಾದ, ಎಸ್ಎಸ್ ಎಲ್ ಸಿ ಪರೀಕ್ಷೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರದ ಕೆಲವು ವಿಚಾರದಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಶಾಲಾ ಶುಲ್ಕ ವಿವಾದವಂತೂ ಕೋರ್ಟ್ ಮೆಟ್ಟಿಲು ಏರಿತು. ಚಾಮರಾಜನಗರ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ ದುರಂತ ನಕಾರಾತ್ಮಕ ಪರಿಣಾಮ ಬೀರಿತ್ತು. ಇದರ ನಡುವೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯದ ಕೂಡಲೇ ಯಾವ ಆರೋಪದ ಹಿನ್ನೆಲೆ ಇಲ್ಲದ ಸುರೇಶ್ ಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿತ್ತು.
ಸಚಿವ ಸ್ಥಾನ ಬೇಕು ಎಂಬ ಸಣ್ಣ ಪ್ರಸ್ತಾಪವೂ ಅವರು ಮಾಡಲಿಲ್ಲ. ನಾನು ನನ್ನ ಕ್ಷೇತ್ರದ ಶಾಸಕ. ನನ್ನ ಜನರ ಸೇವೆಗೆ ಮೀಸಲು ಎಂಬಂತೆ ರಾಜಾಜಿನಗರ ಕ್ಷೇತ್ರದಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಿ ಎಂಬ ಸಲಹೆ ಬಿಟ್ಟರೆ ಶಿಕ್ಷಣ ಸಚಿವ ಖಾತೆಯಲ್ಲೂ ಯಾವ ಹಸ್ತಕ್ಷೇಪವೂ ಮಾಡದೇ ದೂರ ಉಳಿದಿದ್ದಾರೆ. ಸಚಿವ ಸ್ಥಾನ, ಚಾಮರಾಜನಗರ ಉಸ್ತುವಾರಿಯ ಜವಾಬ್ಧಾರಿ ಹೊತ್ತು ಕ್ಷೇತ್ರವನ್ನು ಮರೆತ ಅರೋಪಕ್ಕೆ ಗುರಿಯಾಗಿದ್ದ ಶಾಸಕರು ಮೊದಲಿನಂತೆ ಕ್ಷೇತ್ರದ ಜನತೆಗೆ ತುಂಬಾ ಸಮೀಪವಾಗಿದ್ದಾರೆ.
Recommended Video
ನಮ್ಮ ಶಾಸಕರು ಯಾವ ಕ್ಷಣ ಬೇಕಾದರೂ ಈಗ ಸಿಗುತ್ತಾರೆ. ಅವರೇ ಸ್ವತಃ ಮುಂದೆ ನಿಂತು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಈ ನಡವಳಿಕೆಯೇ ನಮಗೆ ಇಷ್ಟ. ಅವರು ಸಚಿವರಾಗಿ ರಾಜ್ಯಕ್ಕೆ ಮತ್ತಷ್ಟು ಸೇವೆ ಕೊಡುವ ಅಗತ್ಯವಿತ್ತು. ಪರಿಸ್ಥಿತಿಯ ಬದಲಾವಣೆಯಿಂದ ಆಗಲಿಲ್ಲ. ಆದರೂ ನಮಗೆ ಬೇಸರವಿಲ್ಲ. ನಮ್ಮ ಶಾಸಕರು ನಮ್ಮ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಸುರೇಶ್ ಕುಮಾರ್ ಅವರ ಆಪ್ತ ಬಳಗ. ಅಂತೂ ಮಾಜಿಯಾದರೂ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ರಾಜಿಯಾಗದೇ ಸುರೇಶ್ ಕುಮಾರ್ ರಾಜಾಜಿನಗರ ಕ್ಷೇತ್ರದ ಪ್ರಗತಿ ನಾಂದಿ ಹಾಡಿದ್ದಾರೆ.