ಡಿಕೆ ರವಿ ಕೇಸ್: ಸಿಬಿಐನಿಂದ ಅಧಿಕೃತವಾಗಿ ವಿಚಾರಣೆ ಆರಂಭ
ಬೆಂಗಳೂರು,ಏ.247: ಐಎಎಸ್ ಅಧಿಕಾರಿ ಡಿಕೆ ರವಿ ಡೆತ್ ಕೇಸ್ ಫೈಲ್ ಮತ್ತೆ ಓಪನ್ ಮಾಡಿರುವ ಸಿಬಿಐ ತಂಡ ಅಧಿಕೃತವಾಗಿ ತನಿಖೆ ಆರಂಭಿಸಿದೆ. ಬೆಂಗಳೂರಿನ ಸಿಬಿಐ ಅಧಿಕಾರಿಗಳ ಜೊತೆಗೂಡಿ ಹೆಚ್ಚುವತಿ ಗೃಹ ಕಾರ್ಯದರ್ಶಿಗಳೊಡನೆ ಮಹತ್ವದ ಚರ್ಚೆ ನಡೆಸಿದೆ. ಇದಾದ ಬಳಿಕ ಡಿಕೆ ರವಿ ಆಪ್ತರ ವಿಚಾರಣೆ ಕೈಗೊಳ್ಳುವ ಸೂಚನೆ ಸಿಕ್ಕಿದೆ.
ಸಿಬಿಐ ತಂಡ ಎಫ್ ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಸಿಬಿಐ ತಂಡದ ಮೊದಲ ಸಮನ್ಸ್ ಯಾರಿಗೆ ಜಾರಿಯಾಗಲಿದೆ. ಯಾವ ಜನಪ್ರತಿನಿಧಿ, ಉದ್ಯಮಿ, ಅಧಿಕಾರಿ ವಿಚಾರಣೆಗೊಳಪಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. [ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]
ಸಿಬಿಐ ತಂಡ ಮೊದಲಿಗೆ ಡಿಕೆ ರವಿ ಅವರ ಕಾರಿನ ಚಾಲಕನನ್ನು ಪ್ರಶ್ನಿಸಲಿದ್ದು, ನಂತರ ಅವರ ಮಾವ ಹನುಮಂತರಾಯಪ್ಪ ಹಾಗೂ ಇನ್ನಿತರರಿಂದ ಮಾಹಿತಿ ಪಡೆಯಲಿದೆ. ರವಿ ಸಾಯುವುದಕ್ಕೆ ಮುನ್ನ ನಡೆದ ಘಟನಾವಳಿಗಳು ಹಾಗೂ ಸೈಂಟ್ ಜಾನ್ ವುಡ್ಸ್ ಅಪಾರ್ಟ್ಮೆಂಟ್ ಪರಿಶೀಲಿಸಲು ಸಿಬಿಐ ತಂಡ ಮುಂದಾಗಿದೆ. [ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]

ಮಾ.23ರಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿದ್ದ ಷರತ್ತುಗಳಿಗೆ ಸಿಬಿಐ ಒಪ್ಪಿರಲಿಲ್ಲ. ಮುಖ್ಯವಾಗಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳಬೇಕು ಎಂಬ ಷರತ್ತಿಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿ ಅಧಿಸೂಚನೆ ಹಿಂತಿರುಗಿಸಿತ್ತು. ರವಿ ಕೇಸ್ ಕೈಗೆತ್ತಿಕೊಳ್ಳುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.[ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ಅದರೆ, ಸಿದ್ದರಾಮಯ್ಯ ಸರ್ಕಾರ ತ್ವರಿತಗತಿಯಲ್ಲಿ ನಡೆ ಇಟ್ಟು ಯಾವುದೇ ಷರತ್ತುಗಳಿಲ್ಲದೆ ಮುಕ್ತವಾಗಿ ತನಿಖೆ ನಡೆಸುವಂತೆ ಸಿಬಿಐಗೆ ಮತ್ತೊಮ್ಮೆ ಅಧಿಸೂಚನೆ ಕಳಿಸಿತ್ತು. ಇದಕ್ಕೆ ಕೇಂದ್ರ ಗೃಹಸಚಿವಾಲಯದ ಒಪ್ಪಿಗೆಯೂ ಸಿಕ್ಕಿತ್ತು. ಇದಾದ ಬಳಿಕೆ ಸಿಬಿಐ ತಂಡ ತನ್ನ ತನಿಖೆ ಮುಂದುವರೆಸಿದೆ.
ಈ ನಡುವೆ ಪ್ರಕರಣವನ್ನು ಮತ್ತೊಮ್ಮೆ ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸಿದ ರವಿ ಅವರ ಗೆಳತಿ ಐಎಎಸ್ ಅಧಿಕಾರಿ, ಸತ್ಯಕ್ಕೆ ಜಯವಾಗಲಿ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಸಿಬಿಐನ ಒಂದು ತಂಡ ರವಿ ಅವರ ಮೊಬೈಲ್, ಈಮೇಲ್, ಫೇಸ್ಬುಕ್ ಖಾತೆಗಳನ್ನು ಪರಿಶೀಲಿಸಲಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ.ಜೊತೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆ ವರದಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾದ ಎಫ್ ಎಸ್ ಎಲ್ ವರದಿಯನ್ನು ಸಿಬಿಐ ತಂಡ ಪಡೆಯಲಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications