ಕಾಂಗ್ರೆಸ್ ದ್ವಂದ್ವ ನೀತಿಗೆ ತಿರುಗೇಟು ನೀಡಿದ ಜಾವ್ಡೇಕರ್
ಬೆಂಗಳೂರು, ಮೇ 19: ಹಂಗಾಮಿ ಸ್ಪೀಕರ್ ಆಗಿ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದ ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ. ಹಿರಿತನ ಎಂಬುದು ಸಂಪ್ರದಾಯವಷ್ಟೇ, ಇದನ್ನೇ ಕಾನೂನು ಎನ್ನಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ನಡುವೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಅವರು, ಹಿರಿತನ-ಕಿರಿತನ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

2008ರಲ್ಲಿ ಕೆಜಿ ಬೋಪಯ್ಯ ಅವರನ್ನು ಅಂದಿನ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ಆಗ ಕಾಂಗ್ರೆಸ್ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ.

ಇದೇ ರೀತಿ ಜಾರ್ಖಂಡ್ ನಲ್ಲಿ ಕಿರಿಯ ಶಾಸಕರೊಬ್ಬರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿತ್ತು. ಇದನ್ನು ಕಾಂಗ್ರೆಸ್ಸಿನ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರೇ ಸಮರ್ಥಿಸಿಕೊಂಡು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆದರೆ, ಈಗ ಯಾಕೆ ಭಯಪಡುತ್ತಿದ್ದಾರೆ.
2009 ಹಾಗೂ 2013ರಲ್ಲಿ ಸ್ಪೀಕರ್ ಆಗಿದ್ದ ಬೋಪಯ್ಯ ಅವರು ಮೂರು ದಿನಗಳಲ್ಲಿ ಎರಡು ಬಾರಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಿಕೊಟ್ಟಿದ್ದರು. ಬಿಎಸ್ ಯಡಿಯೂರಪ್ಪ ಅವರ ಅಂದಿನ ಸರ್ಕಾರವನ್ನು ಉಳಿಸಿದ್ದರು.
2011ರ ಅಕ್ಟೋಬರಿನಲ್ಲಿ 11 ಶಾಸಕರು ಹಾಗೂ 5 ಪಕ್ಷೇತರರನ್ನು ಕೆಜೆ ಬೋಪಯ್ಯ ಅವರು ಕಾನೂನುಬಾಹಿರವಾಗಿ ಅನರ್ಹಗೊಳಿಸಿ, ಸುಪ್ರೀಂಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದನ್ನು ಕಾಂಗ್ರೆಸ್ ಇಂದು ಪ್ರಸ್ತಾಪಿಸಿ, ಬೋಪಯ್ಯ ಅವರ ಹಿನ್ನಲೆಯನ್ನು ಪ್ರಶ್ನಿಸಿತ್ತು. ಆದರೆ, ಕಾಂಗ್ರೆಸ್ ವಾದವನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ ತಿರಸ್ಕರಿಸಿದೆ.












Click it and Unblock the Notifications