ಚೆಕ್ ಬೌನ್ಸ್ : ಹಿರಿಯ ನಿರ್ಮಾಪಕಿ ಜಯಶ್ರೀದೇವಿ ಬಂಧನ
ಬೆಂಗಳೂರು, ಮಾರ್ಚ್ 21: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಜಯಶ್ರೀದೇವಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಶ್ರೀ ಅವರ ವಿರುದ್ಧ ಕೋರ್ಟಿನಿಂದ ವಾರೆಂಟ್ ಜಾರಿಗೊಳಿಸಲಾಗಿತ್ತು.
ನಟ ಉಪೇಂದ್ರ ಮತ್ತು ಸುದೀಪ ಅಭಿನಯದ 'ಮುಕುಂದ ಮುರಾರಿ' ಚಿತ್ರದ ನಿರ್ಮಾಪಕಿಯಾಗಿರುವ ಜಯಶ್ರೀ ಅವರ ವಿರುದ್ಧ ಆನಂದ್ ಎಂಬುವರು ದೂರು ನೀಡಿದ್ದರು.
ನಮ್ಮೂರ ಮಂದಾರ ಹೂವೇ, ಹಬ್ಬ, ಸ್ನೇಹಲೋಕ, ವಂದೇ ಮಾತರಂ, ಶ್ರೀಮಂಜುನಾಥ ಸೇರಿದಂತೆ ಅನೇಕ ಮಲ್ಟಿ ಸ್ಟಾರ್ ಸಿನಿಮಾಗಳನ್ನು ನಿರ್ಮಿಸಿದ ಜಯಶ್ರೀ ಅವರು ಟಾಲಿವುಡ್ ಗೆ ಮರಳಿದ್ದರು.
ಏಳು ವರ್ಷಗಳ ಅಜ್ಞಾತವಾಸದಿಂದ ಹೊರಬಂದು ಮುಕುಂದ ಮುರಾರಿ ನಿರ್ಮಾಣಕ್ಕೆ ಕೈ ಹಾಕಿದಾಗ ವಿತರಕ ಎಂ ಎನ್ ಕುಮಾರ್ ಸಾಥ್ ನೀಡಿದ್ದರು.
ಅಶ್ವಿನಿ ಪಿಕ್ಚರ್ಸ್ ಗೆ ವಂಚನೆ: ಅಶ್ವಿನಿ ಪಿಕ್ಚರ್ಸ್ ನ ಆನಂದ್ ಎಂಬುವರಿಗೆ 34, 80,000 ರು ಹಣ ನೀಡಬೇಕಿತ್ತು. ಜಯಶ್ರೀ ಅವರು ನೀಡಿದ ಬ್ಯಾಂಕ್ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ, ಪೊಲೀಸರ ಮೊರೆ ಹೋಗಿದ್ದರು.
11 ವರ್ಷಗಳ ಹಿಂದಿನ ಪ್ರಕರಣದಲ್ಲಿ ಆನಂದ್ ಅವರು ದೂರು ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ವಿಚಾರಣೆಗೆ ಇಲ್ಲಿ ತನಕ ಜಯಶ್ರೀ ಅವರು ಹಾಜರಾಗಿರಲಿಲ್ಲ. ಬಡ್ಡಿದರ 17,40,000ರು ಹಣ ನೀಡದಿದ್ದರೆ ಒಂದು ವರ್ಷ ಜೈಲು ಎಂದು 18ನೇ ಎಸಿಎಂಎಂ ಕೋರ್ಟ್ ಇಂದ ಆದೇಶ ನೀಡಿತ್ತು. ಆರೋಪಿ ಜಯಶ್ರೀ ಅವರನ್ನು ಸದ್ಯ ಕೋರ್ಟಿಗೆ ಹಾಜರುಪಡಿಸಲಾಗಿದೆ.