'ನರ್ಸ್' ಜಯಲಕ್ಷ್ಮೀ ಬಿಟಿಎಂ ಲೇಔಟ್ನಿಂದ ಕಣಕ್ಕೆ!
ಬೆಂಗಳೂರು, ಏಪ್ರಿಲ್ 18: ನರ್ಸ್ ಜಯಲಕ್ಷ್ಮೀ ಎಂಇಪಿ (ಮಹಿಳಾ ಎಂಪವರ್ಮೆಂಟ್ ಪಾರ್ಟಿ) ಪಕ್ಷದಿಂದ ಕಾಂಗ್ರೆಸ್ ಪಕ್ಷದ ರಾಮಲಿಂಗಾ ರೆಡ್ಡಿ ವಿರುದ್ಧ ಬಿಟಿಎಂ ಲೇಔಟ್ನಿಂದ ಸ್ಪರ್ಧಿಸಲಿದ್ದಾರೆ. ಹೀಗಾಗಿ ಇಬ್ಬರು ಹೆವಿ ವೇಟ್ ಗಳ ನಡುವೆ ಈಬಾರಿ ಭಾರೀ ಕದನ ನಡೆಯಲಿದೆ.
ಹಲವಾರು ಕಾರಣಗಳಿಂದ ಸುದ್ದಿಯಲ್ಲಿದ್ದ ಜಯಲಕ್ಷ್ಮೀ ಅವರು, ಬಿಗ್ ಬಾಸ್ ನಲ್ಲಿದ್ದಾಗಲೇ 'ಮುಖ್ಯಮಂತ್ರಿ' ಆಗುವ ಕನಸು ಕಂಡವರು. ಭಾರೀ ಮಹತ್ವಾಕಾಂಕ್ಷೆಯಿಂದ ವಿಧಾನಸಭೆ ಚುನಾವಣೆಗೆ ಇಳಿದಿದ್ದಾರೆ. 'ಮುಖ್ಯಮಂತ್ರಿ' ಆಗುವುದು ಅತ್ಲಾಗಿರಲಿ, ಬಿಟಿಎಂ ಲೇಔಟ್ 'ಬಿಗ್ ಬಾಸ್' ಆದ್ರೂ ಜಯಲಕ್ಷ್ಮೀ ಆಗ್ತಾರಾ? ಕಾಲವೇ ಉತ್ತರ ನೀಡಲಿದೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಬುಧವಾರ 2 ನೇ ಪಟ್ಟಿ ಬಿಡುಗಡೆ ಮಾಡಿದ್ದು, ಗುರುಮಲ್ಲೇಶ್ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ, ಶಶಿಕಲಾ ಮೈಸೂರಿನ ವರುಣಾ ಕ್ಷೇತ್ರದಿಂದ, ಸೈಯದ್ ಅಸ್ಲಾಂ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಖ್ 10 ಜಿಲ್ಲೆಗಳ 75 ಅಭ್ಯರ್ಥಿಗಳ 2ನೇ ಮತ್ತು ಅಂತಿಮ ಪಟ್ಟಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, 224 ಕ್ಷೇತ್ರಗಳ ಪೈಕಿ ಮಹಿಳೆಯರಿಗೆ 35 ರಿಂದ 40 ಸ್ಥಾನ ನೀಡಲಾಗಿದೆ ಇದರ ಜೊತೆಗೆ ರೈತರಿಗೆ 8 ಕ್ಷೇತ್ರಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಚುನಾವಣೆ 2018: ಎಂಇಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ನಮ್ಮ ಸಮೀಕ್ಷೆ ಪ್ರಕಾರ 100ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜು ಮಾಡಲಾಗಿತ್ತು ಆದರೆ ಕಾರ್ಯಕರ್ತರ ಉತ್ಸಾಹ ಹೆಚ್ಚಾಗುತ್ತಿದೆ ರಾಜ್ಯದ ಮಹಿಳೆಯರು ಎಂಇಪಿ ಪರ ಒಲವು ತೋರುತ್ತಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಎಂಇಪಿ 150 ಸ್ಥಾನ ಗಳಿಸಿ ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕೆಲಸ ಮಾಡಿದವರಿಗೆ ಟಿಕೆಟ್ ಕೊಡುವ ಸಂಪ್ರದಾಯ, ನೀತಿ ನಮ್ಮದು. ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಬಳಿಕೆ ಶಾಸಕರು ಸಭೆ ಸೇರಿ ಸಿಎಂ ಆಯ್ಕೆ ಮಾಡುತ್ತಾರೆ.2-3ದಿನಗಳಲ್ಲಿ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡುತ್ತೇನೆ. ಇದೇ 26ರಿಂದ ಮೇ 8ರವರೆಗೆ ರಾಜ್ಯದ ಉದ್ದಗಲಕ್ಕೂ ಪ್ರವಾಸ, ಪ್ರಚಾರ ಕೈಗೊಳ್ಳುತ್ತೇನೆ ಎಂದರು.
ಗುರುವಾರದಿಂದಲೇ ಎಲ್ಲ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮಾಡಲಾಗುವುದು ಎಂದು ಡಾ.ನೌಹೀರಾ ಶೇಖ್ ಹೇಳಿದರು.