Bengaluru Second Airport: ದಕ್ಷಿಣ ಬೆಂಗಳೂರಿನಲ್ಲಿ ತಲೆ ಎತ್ತಲಿದೆಯಾ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ?
ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ನನಸಾಗುವತ್ತ ವೇಗವಾಗಿ ಹೆಜ್ಜೆ ಇಡುತ್ತಿದ್ದು, ದಕ್ಷಿಣ ಬೆಂಗಳೂರಿನಲ್ಲಿ ಇದು ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ. ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದ್ದರೂ, ಸರ್ಕಾರದ ಒಲವು ಮತ್ತು ಅಧ್ಯಯನಗಳ ವರದಿಗಳ ಪ್ರಕಾರ, ಕನಕಪುರ ರಸ್ತೆಯ ಉದ್ದಕ್ಕೂ ಇರುವ ಎರಡು ಸ್ಥಳಗಳು ಪ್ರಸ್ತುತ ರೇಸ್ನಲ್ಲಿ ಮುಂಚೂಣಿಯಲ್ಲಿವೆ.
ದಕ್ಷಿಣ ಬೆಂಗಳೂರು ಫೇವರಿಟ್
ಇತ್ತೀಚೆಗೆ ನಡೆದ 'ನೆಟ್ವರ್ಕ್ 18 ಫ್ಯೂಚರ್ ಆಫ್ ವರ್ಕ್ ಶೃಂಗಸಭೆ'ಯಲ್ಲಿ ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾರತದ ಟೆಕ್ ರಾಜಧಾನಿಗೆ ದಕ್ಷಿಣ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸಿಗಲಿದೆ ಎಂದು ಖಚಿತಪಡಿಸಿದ್ದಾರೆ. ಶಾರ್ಟ್ಲಿಸ್ಟ್ ಮಾಡಲಾಗಿರುವ ಸ್ಥಳಗಳಲ್ಲಿ ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ ಮುಂಚೂಣಿಯಲ್ಲಿವೆ. ಪಶ್ಚಿಮ ಕಾರಿಡಾರ್ನಲ್ಲಿರುವ ನೆಲಮಂಗಲ-ಕುಣಿಗಲ್ ರಸ್ತೆಯ ಸಮೀಪವಿರುವ ಮೂರನೇ ಸ್ಥಳವನ್ನೂ ಪರಿಗಣಿಸಲಾಗುತ್ತಿದೆ. ಆದರೆ, ಉತ್ತಮ ಕನೆಕ್ಟಿವಿಟಿ ಮತ್ತು ಭವಿಷ್ಯದ ವಿಸ್ತರಣೆಯ ಸಾಮರ್ಥ್ಯದ ಕಾರಣದಿಂದ ದಕ್ಷಿಣದ ಭಾಗವೇ ಹೆಚ್ಚಿನ ಆದ್ಯತೆ ಪಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಏಕೆ ಬೇಕು?
ಭಾರತದ ಐಟಿ ರಾಜಧಾನಿಯಾಗಿ ಬೆಂಗಳೂರಿನ ಬೆಳವಣಿಗೆಯು ಅದರ ಮೂಲಸೌಕರ್ಯಗಳಿಗಿಂತ ಬಹಳ ವೇಗವಾಗಿ ಸಾಗುತ್ತಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ತನ್ನ ಸಾಮರ್ಥ್ಯವನ್ನು ಹಂತಹಂತವಾಗಿ ವಿಸ್ತರಿಸಿದ್ದರೂ, ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ಕಾರ್ಗೋ ಬೇಡಿಕೆಯಿಂದಾಗಿ ಮುಂಬರುವ ವರ್ಷಗಳಲ್ಲಿ ಅದು ತನ್ನ ಮಿತಿಯನ್ನು ತಲುಪುವ ನಿರೀಕ್ಷೆಯಿದೆ.
ನಗರದ ಹಳೆಯ ವಿಮಾನ ನಿಲ್ದಾಣವಾದ ಎಚ್ಎಎಲ್ (HAL) ವಿಮಾನ ನಿಲ್ದಾಣವು ಇದೀಗ ಸೀಮಿತ ಕಾರ್ಯಾಚರಣೆಗಳನ್ನು ಮಾತ್ರ ನಿರ್ವಹಿಸುತ್ತಿದ್ದು, ಇದನ್ನು ವಿಸ್ತರಿಸಲು ಸಾಧ್ಯವಿಲ್ಲ. ಹೀಗಾಗಿ ಕೇವಲ ಒಂದೇ ವಿಮಾನ ನಿಲ್ದಾಣವನ್ನು ಅವಲಂಬಿಸುವುದು ಬೆಂಗಳೂರಿನಂತಹ ಬೃಹತ್ ನಗರಕ್ಕೆ ಮತ್ತು ಆರ್ಥಿಕತೆಗೆ ಅಸಾಧ್ಯವಾಗಿದೆ.
ಸೂಕ್ತ ಸ್ಥಳವನ್ನು ಆಯ್ಕೆ ಮಾಡಲು, ಕರ್ನಾಟಕ ಸರ್ಕಾರವು ಮೈನ್ಹಾರ್ಡ್-ಕೆಪಿಎಂಜಿ (Meinhardt-KPMG) ಒಕ್ಕೂಟವನ್ನು ನೇಮಿಸಿದ್ದು, ಶಾರ್ಟ್ಲಿಸ್ಟ್ ಮಾಡಲಾದ ಮೂರೂ ಸ್ಥಳಗಳ ವಿವರವಾದ ಅಧ್ಯಯನ ನಡೆಸುವ ಜವಾಬ್ದಾರಿ ನೀಡಿದೆ. 4.96 ಕೋಟಿ ರೂ. ವೆಚ್ಚದ ಈ ಅಧ್ಯಯನ ಪೂರ್ಣಗೊಳ್ಳಲು ಸುಮಾರು ಐದು ತಿಂಗಳು ಬೇಕಾಗುತ್ತದೆ. ಕೇವಲ ಭೂಮಿಯ ಲಭ್ಯತೆಯ ಜೊತೆಗೆ ಭೌಗೋಳಿಕ ಲಕ್ಷಣ, ಮಣ್ಣು, ವಾಯುಪ್ರದೇಶ ನಿರ್ವಹಣೆ, ಪ್ರಸ್ತುತ ವಿಮಾನ ನಿಲ್ದಾಣಗಳಿಂದ ಇರುವ ದೂರ, ರಸ್ತೆ, ರೈಲು ಸಂಪರ್ಕ ಮತ್ತು ಪರಿಸರ ಸಂಬಂಧಿ ವಿಚಾರಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಮುಂದಿನ 35 ವರ್ಷಗಳ ಪ್ರಯಾಣಿಕ ಮತ್ತು ಸರಕು ಸಾಗಣೆಯ ಅಂದಾಜನ್ನು ಸಹ ಇದು ಒಳಗೊಂಡಿದೆ.
ಭೂಮಿ ಮತ್ತು ಕನೆಕ್ಟಿವಿಟಿ: ನಿರ್ಣಾಯಕ ಅಂಶಗಳು
ಪ್ರತಿ ಸ್ಥಳದಲ್ಲಿ ಭವಿಷ್ಯದ ಏರ್ಪೋರ್ಟ್ ಅಭಿವೃದ್ಧಿಗಾಗಿ ಸುಮಾರು 4,500 ಎಕರೆ ಜಾಗವನ್ನು ಗುರುತಿಸಲಾಗಿದೆ. ಕನಕಪುರ ರಸ್ತೆಯ ಸ್ಥಳಗಳು ನಗರದ ದಕ್ಷಿಣ ಭಾಗದ ವಸತಿ ಮತ್ತು ಕೈಗಾರಿಕಾ ಕಾರಿಡಾರ್ಗಳಿಗೆ ಹತ್ತಿರವಿರುವ ಪ್ರಯೋಜನವನ್ನು ಹೊಂದಿವೆ. ಏತನ್ಮಧ್ಯೆ, ನೆಲಮಂಗಲದ ಜಾಗವು ತುಮಕೂರು ರಸ್ತೆ ಮತ್ತು ಕೈಗಾರಿಕಾ ಪಟ್ಟಿಗಳಿಗೆ ಉತ್ತಮ ಸಂಪರ್ಕ ಹೊಂದಿದ್ದರೂ, ನಗರದ ವಿಸ್ತರಣೆಯ ದೃಷ್ಟಿಯಿಂದ ದಕ್ಷಿಣದ ಜಾಗಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
ಹೊಸೂರು ಏರ್ಪೋರ್ಟ್ ಪೈಪೋಟಿ ಮತ್ತು ಭವಿಷ್ಯ
ತಮಿಳುನಾಡು ಸರ್ಕಾರವು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತ್ವರಿತಗತಿಯಲ್ಲಿ ನಿರ್ಮಿಸಲು ಮುಂದಾಗಿದೆ. ಬೆಂಗಳೂರು ತನ್ನ ಎರಡನೇ ವಿಮಾನ ನಿಲ್ದಾಣವನ್ನು ವಿಳಂಬ ಮಾಡಿದರೆ, ಟ್ರಾಫಿಕ್ ಮತ್ತು ಹೂಡಿಕೆಗಳು ಹೊಸೂರಿನತ್ತ ಮುಖ ಮಾಡುವ ಸಾಧ್ಯತೆಯಿದೆ ಎಂಬ ಆತಂಕವೂ ಇದೆ.
ಪ್ರಸ್ತುತ 1.3 ಕೋಟಿ ಜನಸಂಖ್ಯೆ ದಾಟಿರುವ ಬೆಂಗಳೂರಿನ ಭವಿಷ್ಯದ ಆರ್ಥಿಕತೆಗೆ ಈ ಪ್ರಾಜೆಕ್ಟ್ ಕೇವಲ ಸಾರಿಗೆ ಯೋಜನೆಯಾಗಿರದೆ, ಆರ್ಥಿಕ ವೇಗವರ್ಧಕವಾಗಿ ಕೆಲಸ ಮಾಡಲಿದೆ. ಒಟ್ಟಿನಲ್ಲಿ, ಸಾಧ್ಯಾಸಾಧ್ಯತಾ ವರದಿ ಬಂದ ನಂತರ ಸರ್ಕಾರ ಅಧಿಕೃತವಾಗಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ದಕ್ಷಿಣ ಬೆಂಗಳೂರಿನಲ್ಲಿ ಹೊಸ ಏವಿಯೇಷನ್ ಹಬ್ ತಲೆ ಎತ್ತಲಿದೆ.












Click it and Unblock the Notifications