Breaking: ಬಿಬಿಎಂಪಿ: ಅ.31ರೊಳಗೆ ವಿವಿಧ ರಸ್ತೆ ಯೋಜನೆ ಪೂರ್ಣಗೊಳಿಸಿ
ಬೆಂಗಳೂರು, ಅಕ್ಟೋಬರ್ 13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸದ್ಯ ಪ್ರಗತಿಯಲ್ಲಿರುವ ಯೋಜನೆಗಳು, ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳನ್ನು ಇದೇ ತಿಂಗಳಾಂತ್ಯದ ಒಳಗೆ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಅವರು ನಗರದಲ್ಲಿ ಪಾಲಿಕೆಯ ಯೋಜನೆಗಳ ವಿಭಾಗದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುರುವಾರ ಪರಿಶೀಲನಾ ಸಭೆ ನಡೆಸಿದರು.
ನಂತರ ಮಾತನಾಡಿದ ಅವರು, ಶೀಘ್ರವೇ ಬೆಂಗಳೂರು ನಗರದಲ್ಲಿ ನಿಗದಿತ ಜಾಗತಿಕ ಹೂಡಿಕೆದಾರರ ಸಭೆ ನಡೆಯಲಿದೆ. ಜತೆಗೆ ಕೆಲವೇ ದಿನಗಳಲ್ಲಿ ದೀಪಾವಳಿ, ಕನ್ನಡ ರಾಜ್ಯೋತ್ಸವ ಹಬ್ಬಗಳು ಆಚರಿಸಲಾಗುತ್ತದೆ. ಈ ವೇಳೆ ಜನರಿಗೆ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಅಕ್ಟೋಬರ್ 31ರೊಳಗೆ ರಸ್ತೆ ಯೋಜನೆಗಳು ಪೂರ್ಣಗೊಳಿಸಲು ಗುರಿ ನಿಗದಿಪಡಿಸಿದರು. ತ್ವರಿತಗತಿಯಲ್ಲಿ ಕೆಲಸ ಮುಗಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಯಾವ ಯೋಜನೆಗಳಿಗೆ ಗುರಿ ನಿಗದಿ?
ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದಲ್ಲಿ ವಿವಿಧ ಕಡೆಗಳಲ್ಲಿ ರಸ್ತೆ, ಮೇಲ್ಸೇತುವೆ ಇನ್ನಿತರ ಕಾರ್ಯ ನಡೆಯುತ್ತಿವೆ. ಈ ಪೈಕಿ ಐದು ಟೆಂಡರ್ ಶ್ಯೂರ್ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
* ನಗರದ ಹೃದಯ ಭಾಗವಾದ ಶಿವಾನಂದ ವೃತ್ತದಿಂದ ರೇಸ್ಕೋರ್ಸ್ ರಸ್ತೆ ಜಂಕ್ಷನ್ವರೆಗೆ ಬಾಕಿ ಕಾಮಗಾರಿಯನ್ನು ಅಕ್ಟೋಬರ್ 23ರರೊಳಗೆ ಪೂರ್ಣಗೊಳಿಸಬೇಕು.
* ಮೈಸೂರು ಬ್ಯಾಂಕ್ ಜಂಕ್ಷನ್ ನಿಂದ ಮೆಜೆಸ್ಟಿಕ್ ವರೆಗಿನ (ಕೆಂಪೇಗೌಡ ರಸ್ತೆ) ಟೆಂಡರ್ ಶ್ಯೂರ್ ಕಾಮಗಾರಿಗೆ ಮುಗಿಸಲು ಅಕ್ಟೋಬರ್ 31 ಅಂತಿಮ ಗಡುವು.
* ಮತ್ತಿಕೆರೆ ಮುಖ್ಯರಸ್ತೆ ಜಂಕ್ಷನ್ಯಿಂದ ರೈಲ್ವೆ ಪ್ಯಾರಲಲ್ ರಸ್ತೆ ಜಂಕ್ಷನ್ (ಮೋಹನ್ ಕುಮಾರ್ ರಸ್ತೆ) ಕೆಲಸ ಮುಗಿಸಲು ಅಕ್ಟೋಬರ್ 31ಕೊನೆ ದಿನವಾಗಿದೆ.
* ದೊಮ್ಮಲೂರು ಮೇಲುಸೇತುವೆಯಿಂದ ಈಜಿಪುರದವರೆಗಿನ ಮಧ್ಯಂತರ ರಿಂಗ್ ರಸ್ತೆ ಜಂಕ್ಷನ್ ಕೆಲಸವನ್ನು ಇದೇ ತಿಂಗಳಾಂತ್ಯ (ಅ.31) ಮುಗಿಸಬೇಕಿದೆ.
* ಎನ್.ಆರ್ ರಸ್ತೆಯ ಟೆಂಡರ್ ಶ್ಯೂರ್ ಅನ್ನು ಅಕ್ಟೋಬರ್ 31ಕ್ಕೆ ಕೊನೆಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.