ಸಿಎ ಸೈಟು ಕೇಸ್: ಗಿರಿನಗರದ ರಾಮಚಂದ್ರಾಪುರ ಮಠಕ್ಕೆ ಮುಖಭಂಗ
ಬೆಂಗಳೂರು, ಮೇ 30: ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಲಭ್ಯವಾಗಿದ್ದ ನಾಗರಿಕ ಸೌಲಭ್ಯದ (ಸಿ.ಎ) ನಿವೇಶನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ರಾಮಚಂದ್ರಪುರಮಠಕ್ಕೆ ಹಿನ್ನಡೆ ಉಂಟಾಗಿದೆ
ಸಿಎ ಸೈಟಿನಲ್ಲಿ ಕಟ್ಟಡ ನಿರ್ಮಾಣ ಯೋಜನೆ ಮತ್ತು ಖಾತೆ ನೋಂದಣಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರದ್ದುಗೊಳಿಸಿದೆ. ಬಿಬಿಎಂಪಿ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ವಿಜಯ್ ಗೋಪಾಲ್ ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಿಸಿದ ಕೋರ್ಟ್ ಆದೇಶ ಪ್ರತಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಏನಿದು ಪ್ರಕರಣ?: 1979ರಲ್ಲಿ 21,249 ಚದರ ಅಡಿ ನಿವೇಶನವನ್ನು ವಿಶ್ವಭಾರತಿ ಗೃಹ ನಿರ್ಮಾಣ ಸಂಘದಿಂದ ಮಠಕ್ಕೆ ಜಾಗ ಹಸ್ತಾಂತರವಾಗಿತ್ತು. 2010ರಲ್ಲಿ ಸಿ.ಎ ನಿವೇಶನ ಸಂಖ್ಯೆ 2ರ ಖಾತೆ ನೋಂದಣಿಗೆ ನಿರಾಕ್ಷೇಪಣಾ ಪತ್ರ ನೀಡಲು ಬಿಡಿಎಗೆ ಅರ್ಜಿ ಸಲ್ಲಿಸಿತ್ತು. ಅಂಥ ಯಾವುದೇ ಸೈಟನ್ನು ತಾನು ಮಂಜೂರು ಮಾಡಿಲ್ಲ ಎಂದು ಹೇಳಿ ಬಿಡಿಎ ಅರ್ಜಿಯನ್ನು ತಿರಸ್ಕರಿಸಿತು.
1981ರಲ್ಲಿ ಸಿ.ಎ ನಿವೇಶನ ಎಂದು ಖರೀದಿಸಲಾಗಿದ್ದ ಪ್ರದೇಶದಲ್ಲಿ ಬಿಡಿಎ ಒಪ್ಪಿಗೆ ನೀಡಿದ ಯೋಜನೆಗೆ ಹೊರತಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಕಂಡು ಬಂದಿದೆ.
1985ರ ಏಪ್ರಿಲ್ 6ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಿಕ್ಕಿದೆ ಎನ್ನಲಾದ ನಿರಾಕ್ಷೇಪಣಾ ಪತ್ರ (NOC) ದ ಜೆರಾಕ್ಸ್ ಪ್ರತಿ ಮಾತ್ರ ಲಭ್ಯವಿದ್ದು, ಮೂಲ ಪ್ರತಿ ಬಿಡಿಎ ಬಳಿಯೂ ಇಲ್ಲ ಎಂಬುದು ದೃಢಪಟ್ಟಿತ್ತು. ಈ ಬಗ್ಗೆ ಹೈಕೋರ್ಟಿನಲ್ಲಿ ವಿಚಾರಣೆ ನಡೆದು, ಮೂಲ ಪ್ರತಿ ಒದಗಿಸಲು ಸೂಚಿಸಲಾಗಿತ್ತು.
ಹೀಗಾಗಿ, ಅಕ್ರಮವಾಗಿ ಒತ್ತುವರಿಯಾಗಿರುವ ಜಾಗವನ್ನು ಹಿಂಪಡೆಯುವಂತೆ ಹೈಕೋರ್ಟ್ ನಿಂದ ಬಿಬಿಎಂಪಿಗೆ ಆದೇಶ ಸಿಕ್ಕಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಈ ಆಸ್ತಿಯನ್ನು ಧಾರ್ಮಿಕ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದು ಮಠದವರು ಹೇಳಿದರೂ, ಅದಕ್ಕೆ ಪುರಾವೆ ನೀಡಲು ವಿಫಲವಾಗಿತ್ತು.












Click it and Unblock the Notifications