'ಗಣಿಗಾರಿಕೆಯಿಂದ ದೇಶದ ಜಿಡಿಪಿಗೆ ಶೇ 2.5 ರಷ್ಟು ಕೊಡುಗೆ'
ಬೆಂಗಳೂರು, ಡಿ. 03 : ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಗಳ ಹರಾಜು ಹಾಗೂ ಗಣಿಗಾರಿಕೆಯಲ್ಲಿ ಹೂಡಿಕೆ ಅವಕಾಶಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶವನ್ನ ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿದರು.
ಹೂಡಿಕೆದಾರರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದೇಶದ ಜಿಡಿಪಿಗೆ ಗಣಿಗಾರಿಕೆಯಿಂದಲೇ ಶೇ 2.5 ರಷ್ಟು ಕೊಡುಗೆ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕಲ್ಲಿದ್ದಲು ಸೇರಿದಂತೆ ಗಣಿಗಾರಿಕೆಯಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. 2047ರ ವೇಳೆಗೆ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದ್ದು, ಹೇರಳವಾದ ವಿದ್ಯುತ್ ಉತ್ಪಾದನೆ ಅಗತ್ಯವಾಗಿದೆ. ಸಹಜವಾಗಿ ಕಲ್ಲಿದ್ದಲು ಬೇಡಿಕೆ ಕೂಡ ಹೆಚ್ಚಲಿದ್ದು, ಹೂಡಿಕೆದಾರಿಗೆ ಕಲ್ಲಿದ್ದಲು ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ಇಂಧನ ಹಾಗೂ ಖನಿಜ ಸಂಪತ್ತಿನ ಸುರಕ್ಷತೆಯನ್ನು ಕಾಪಾಡಲು ನಮ್ಮಲ್ಲಿರುವ ಕಲ್ಲಿದ್ದಲು ಹಾಗೂ ಖನಿಜ ಸಂಪನ್ಮೂಲದ ಸುಸ್ಥಿರ ಉಪಯೋಗ ಅವಶ್ಯಕವಾಗಿದೆ. ಈ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಹೂಡಿಕೆಯ ಅವಶ್ಯಕತೆ ಇದ್ದು, ಆಸಕ್ತ ಹೂಡಿಕೆದಾರರೊಂದಿಗೆ ನಾವು ನಿರಂತರ ಚರ್ಚೆಯಲ್ಲಿ ತೊಡಗುವ ಉದ್ದೇಶದಿಂದಲೇ ಈ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇದೇ ವೇಳೆ ಹೇಳಿದರು.
ಪ್ರಸ್ತುತ ನಡೆಯುತ್ತಿರುವ ಕಲ್ಲಿದ್ದಲು ಹಾಗೂ ಖನಿಜಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ ಏಳು ಕಲ್ಲಿದ್ದಲು ಬ್ಲಾಕ್ ಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆರನೇ ಕಂತಿನ 141 ಕಲ್ಲಿದ್ದಲು ಬ್ಲಾಕ್ ಗಳು ಕೂಡ ಹರಾಜಿಗೆ ಲಭ್ಯವಿವೆ ಎಂದು ಮಾಹಿತಿ ನೀಡಿದರು.
ಕಲ್ಲಿದ್ದಲು ಹೊರತುಪಡಿಸಿ ಬೇರೆ ಬೇರೆ ಗಣಿಗಾರಿಕೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅತ್ಮನಿರ್ಭರ ಭಾರತದಲ್ಲಿ ಹೂಡಿಕೆಯಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ತೊಂದರೆ ಆಗದ ಹಾಗೇ ಆರ್ಥಿಕವಾಗಿಯೋ ತೊಂದರೆ ಆಗದ ರೀತಿ ಕಲ್ಲಿದ್ದಲು ಬಳಿಕೆಯನ್ನ ಮಾಡಬೇಕಿದೆ. ಈಗಾಗಲೇ ಇಡಿ ದೇಶದಲ್ಲಿ 67 ಗಣಿ ಕಂಪನಿಗಳಿಗೆ ಹರಾಜು ಮಾಡಲಾಗಿದೆ. ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಪ್ರಮುಖ ಗಣ್ಯರು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಹೂಡಿಕೆದಾರರು ಉಪಸ್ಥಿತರಿದ್ದರು.












Click it and Unblock the Notifications