"ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುತ್ತಾರೆ, ಆದರೆ ಚಳಿಗಾಲದ ಅಧಿವೇಶನ ಕರೆಯಲ್ಲ'
ಬೆಳಗಾವಿ, ಡಿಸೆಂಬರ್ 4: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಕರೆಯುತ್ತಿಲ್ಲ, ಆದರೆ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.
ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ವಿಚಾರವಾಗಿ ಮಾತನಾಡಿದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಜನರ ಸತತ ಪ್ರವಾಹದಿಂದ ಕಷ್ಟಪಡುತ್ತಿದ್ದಾರೆ. ರೈತರು ಸೇರಿ ಎಲ್ಲಾ ವರ್ಗದ ಜನರು ತುಂಬಾ ಸಂಕಷ್ಟದಲ್ಲಿದ್ದಾರೆಂದು ಹೇಳಿದರು.
"ಯಾರಾದರೊಬ್ಬರು ಹಿಂದೆ ಸರಿದರೆ ಚಿಕ್ಕೋಡಿ ಅಥವಾ ಗೋಕಾಕ್ ಜಿಲ್ಲೆ ಮಾಡಲು ಸಿದ್ಧ''
ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು, ಕಳೆದ ಎರಡು ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ನಡೆಸಿಲ್ಲ. 400 ರಿಂದ 500 ಕೋಟಿ ರುಪಾಯಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿದ್ದಾರೆ. ಆದರೆ ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿಲ್ಲ ಎಂದು ತಿಳಿಸಿದರು.
ನಾನು ಸ್ವಾಗತಿಸುವುದಿಲ್ಲ
ಸುವರ್ಣಸೌಧವನ್ನು ಬಾರ್ & ರೆಸ್ಟೋರೆಂಟ್ ಮಾಡಿ ಎಂದು ವಾಟ್ಸಪ್ಗಳಲ್ಲಿ ಹರದಾಡುತ್ತಿದೆ, ನಗೆಪಾಟಿಲಿಗೀಡಾಗಿದೆ ಎಂದ ಕಾಂಗ್ರೆಸ್ ಶಾಸಕಿ, ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಅದನ್ನು ನಾನು ಸ್ವಾಗತಿಸುವುದಿಲ್ಲ, ಖಂಡಿಸೋದು ಇಲ್ಲವೆಂದರು. ಅಧಿವೇಶನ ನಡೆಸಲು ಟೈಮ್ ಇಲ್ಲ, ಆದರೆ ಕಾರ್ಯಕಾರಿಣಿ ಸಭೆಗೆ ಸಮಯವಿದೆ. ಇಡೀ ಮಂತ್ರಿಮಂಡಲದವರು ಗೊಂದಲದಲ್ಲಿದಾರೆ. ರಾಜ್ಯದಿಂದ ಚುನಾಯಿತರಾದ ಸಂಸದರು ಏನು ಮಾಡುತ್ತಿದಾರೆ ಗೊತ್ತಿಲ್ಲ. ಈವರೆಗೂ ಎಷ್ಟು ನೆರೆ ಸಂತ್ರಸ್ತ ರೈತರಿಗೆ ಪರಿಹಾರ ಕೊಟ್ಟಿದ್ದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ಕಾರ್ಯಕಾರಿಣಿ ಸಭೆ ನಡೆಸಲು ದುಡ್ಡಿದೆಯಾ
ಕಾರ್ಯಕಾರಿಣಿ ಸಭೆ ನಡೆಸಲಿ, ಅದಕ್ಕೂ ಮೊದಲು ಸರ್ಕಾರ ಉತ್ತರ ಕರ್ನಾಟಕಕ್ಕೆ ಏನು ಕೊಟ್ಟಿದೆ ಅದನ್ನು ಹೇಳಲಿ. ಬೆಳಗಾವಿ ಜಿಲ್ಲೆಯಲ್ಲಿ 330 ಕೆರೆ-ಕಟ್ಟೆಗಳು ಒಡೆದು ಹೋಗಿವೆ. ಪ್ರವಾಹದಿಂದ ಹಲವು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೆ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದರೆ ಕೋವಿಡ್ ಸಂಕಷ್ಟದಿಂದ ದುಡ್ಡಿಲ್ಲ ಅಂತಾರೆ, ಆದರೆ ಬೆಳಗಾವಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಲು ದುಡ್ಡಿದೆಯಾ? ಎಂದು ಪ್ರಶ್ನಿಸಿದರು.
ನೇಕಾರರಿಗೆ ಪರಿಹಾರ ಸಿಕ್ಕಿಲ್ಲ
ಬಿಜೆಪಿಯವರು ಚುನಾವಣೆ ನಡೆಸಲು ಮಾತ್ರ ದುಡ್ಡು ಖರ್ಚು ಮಾಡುತ್ತಾರೆ, ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಮ್ಮ ಜಿಲ್ಲೆಯವರೇ ಜವಳಿ ಸಚಿವರಾಗಿದ್ದಾರೆ. ಆದರೆ ನೇಕಾರರಿಗೆ ಪರಿಹಾರ ಸಿಕ್ಕಿಲ್ಲ ಎಂದು ಸಚಿವ ಶ್ರೀಮಂತ ಪಾಟೀಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸುವರ್ಣಸೌಧದಲ್ಲಿ ಅಧಿವೇಶನ ಕರೆಯಬೇಕಾಗಿತ್ತು. ಆದರೆ ಕೇವಲ ಚುನಾವಣೆ ಗಿಮಿಕ್ಗಾಗಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ವಕ್ತಾರೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.
ನನ್ನ ವಿರುದ್ಧ ಅಪಪ್ರಚಾರ
ಸಾಂಬ್ರಾ ಜಿ.ಪಂ ಕಾಂಗ್ರೆಸ್ ಸದಸ್ಯ ಕೃಷ್ಣಾ ಅನಗೋಳಕರ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಯಿಸಿದ ಶಾಸಕಿ ಹೆಬ್ಬಾಳ್ಕರ್, ಹಿಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದರು. ರಾಜಕಾರಣದಲ್ಲಿ ಷಡ್ಯಂತ್ರ ರೂಪಿಸುವುದು ಕಾಮನ್ ಆಗಿದೆ. ಏಕಾಂಗಿ ಹೋರಾಟ ನನಗೇನೂ ಹೊಸದಲ್ಲ, ನಾನು ಮಾಡುತ್ತೇನೆ. ಹಿಂದೆ ಬೇರೆ ಗ್ರೂಪ್ ಇತ್ತು, ಈಗ ಬೇರೆ ಗ್ರೂಪ್ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂದು ಉತ್ತರಿಸಿದರು.