ತಾಂಜೇನಿಯಾ ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದ ಎಸ್ಎಂಎಸ್
ಬೆಂಗಳೂರು, ಫೆಬ್ರವರಿ 05 : ತಾಂಜೇನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ನಡುವೆಯೇ ವಿದ್ಯಾರ್ಥಿಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಬಹುದು ಎಂಬ ಎಸ್ಎಂಎಸ್ ಹರಿದಾಡುತ್ತಿದೆ.
'ಶನಿವಾರದ ತನಕ ಎಚ್ಚರಿಕೆಯಿಂದಿರಿ, ಸ್ಥಳೀಯರು ನಿಮ್ಮ ಮೇಲೆ ಹಲ್ಲೆ ನಡೆಸಬಹುದು' ಎಂಬ ಸಂದೇಶ ಆಫ್ರಿಕಾದ ವಿದ್ಯಾರ್ಥಿಗಳ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ. ಇದರಿಂದ ಆತಂಕಗೊಂಡ ಕೆಲವು ವಿದ್ಯಾರ್ಥಿಗಳು ಕಾಲೇಜಿಗೂ ಹಾಜರಾಗಿಲ್ಲ. [ವಿದ್ಯಾರ್ಥಿನಿ ಹಲ್ಲೆ: ಪರಂ ವಿರುದ್ಧ ಟ್ವಿಟ್ಟರ್ ಮಂದಿ ಗರಂ]

ಪೊಲೀಸರು ಇಂತಹ ಎಸ್ಎಂಎಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆಚಾರ್ಯ ಕಾಲೇಜಿನಲ್ಲಿನ ಆಫ್ರಿಕಾದ ವಿದ್ಯಾರ್ಥಿಗಳು ಇಂಟರ್ನಲ್ ಪರೀಕ್ಷೆಗಳನ್ನು ಮುಂದೂಡಿ ಎಂದು ಕಾಲೇಜಿನ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. [ಲೈಂಗಿಕ ದೌರ್ಜನ್ಯ ನಡೆದಿಲ್ಲ, ಪ್ರಕರಣ ಸಿಸಿಬಿಗೆ: ಪರಮೇಶ್ವರ]
ಶುಕ್ರವಾರ ಇಂಟರ್ನಲ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿರುವ ಕಾಲೇಜಿನ ಆಡಳಿತ ಮಂಡಳಿ, ಆಫ್ರಿಕಾದ ವಿದ್ಯಾರ್ಥಿಗಳಿಗೆ ಪತ್ಯೇಕವಾಗಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ವಿದ್ಯಾರ್ಥಿಗಳ ಮನೆಗೆ ತೆರಳಿ ಇಂತಹ ಎಸ್ಎಂಎಸ್ ಬಗ್ಗೆ ಭಯಪಡಬೇಕಾಗಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಧೈರ್ಯ ತುಂಬಲಿದ್ದಾರೆ. [ಯುವತಿ ಮೇಲೆ ಹಲ್ಲೆ : ಸಿದ್ದರಾಮಯ್ಯಗೆ ಸುಷ್ಮಾ ಸ್ವರಾಜ್ ಕರೆ]
ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ತಾಂಜೇನಿಯಾ ರಾಯಭಾರ ಕಚೇರಿಯ ಅಧಿಕಾರಿಗಳ ಒಂದು ತಂಡ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಲಿದೆ. ಪ್ರಕರಣದ ಕುರಿತು ವಿವರವಾದ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದೆ.
ಜನವರಿ 31ರ ರಾತ್ರಿ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಂಜೇನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣದ ಭಾರೀ ವಿವಾದ ಹುಟ್ಟು ಹಾಕಿದ್ದು, ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದೆ.












Click it and Unblock the Notifications