ಬಿಎಸ್ವೈ ಶೀಘ್ರದಲ್ಲೇ ಬಿಜೆಪಿಗೆ : ಈಶ್ವರಪ್ಪ ಪುನರುಚ್ಚಾರ
ಬಳ್ಳಾರಿ, ನ. 30 : ಮುನಿಸಿಕೊಂಡು ಪಕ್ಷ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ದೆಹಲಿ ಮುಖಂಡರು ಒಪ್ಪಿಗೆ ಸೂಚಿಸಿದ್ದು, ಬಿಎಸ್ಆರ್ ವಿಚಾರದಲ್ಲಿ ಚಿಂತನೆ ನಡೆದಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಬಳ್ಳಾರಿಯಲ್ಲಿ ತಿಳಿಸಿದ್ದಾರೆ.
ಇಂಥ ಹೇಳಿಕೆಯನ್ನು ಬಿಜೆಪಿ ನಾಯಕರು ಅದೆಷ್ಟು ಬಾರಿ ಹೇಳಿದ್ದಾರೋ ಆ ದೇವರೇ ಬಲ್ಲ. ಬಿಜೆಪಿ ನಾಯಕರು, ಯಡಿಯೂರಪ್ಪ ಬಿಜೆಪಿ ಸೇರುತ್ತಾರೆ ಎಂಬ ಆಶಯ ವ್ಯಕ್ತಪಡಿಸುತ್ತಲೇ ಇದ್ದಾರೆ, ಯಡಿಯೂರಪ್ಪ ಈ ಹೇಳಿಕೆಗಳನ್ನು ತಳ್ಳಿ ಹಾಕುತ್ತಲೇ ಇದ್ದಾರೆ.
ಯಡಿಯೂರಪ್ಪ ಬಿಜೆಪಿ ಸೇರುತ್ತಾರೋ ಬಿಡುತ್ತಾರೋ. ಆದರೆ, ಬುಡಾ ಮಾಜಿ ಅಧ್ಯಕ್ಷ ಎಸ್. ಗುರುಲಿಂಗನಗೌಡ ಅವರ ಮನೆಯಲ್ಲಿ ಈಶ್ವರಪ್ಪ ಮತ್ತು ಬಿ. ಶ್ರೀರಾಮುಲು ಅವರು ಶನಿವಾರ ಪರಸ್ಪರ ಭೇಟಿ ಆಗಿದ್ದು ಕೂಡ ಭಾರೀ ಕುತೂಲಹ ಕೆರಳಿಸಿದೆ.
ಈ ಸಂದರ್ಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಅವರು, ಯಡಿಯೂರಪ್ಪ ಅವರು ಶೀಘ್ರದಲ್ಲೇ ಪಕ್ಷಕ್ಕೆ ಸೇರಲಿದ್ದಾರೆ. ಶ್ರೀರಾಮುಲು ವಿಚಾರದಲ್ಲಿ ಹೈಕಮಾಂಡ್ ತ್ವರಿತವಾಗಿ ಆಶಾದಾಯಕ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಜೆಪಿಯಲ್ಲಿಯ ಆಂತರಿಕ ಜಗಳ, ಬಿಎಸ್ವೈ ಪಕ್ಷ ತ್ಯಜಿಸಿ ಕೆಜೆಪಿ ಕಟ್ಟಿದ್ದು ಕಾರಣ. ಬಿಜೆಪಿ, ಕೆಜೆಪಿ ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಕಾರ್ಯಕರ್ತರು, ಮುಖಂಡರು ನಿರ್ಧರಿಸಿದ್ದಾರೆ ಎಂದರು.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಆಡಳಿತ ನಡೆಸುತ್ತಿದೆ. ಜನತೆ ಭ್ರಮನಿರಸಗೊಂಡಿದ್ದಾರೆ. ಸರ್ಕಾರದ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ. ಶಾದಿ ಭಾಗ್ಯ, ಅಹಿಂದ ವಿದ್ಯಾರ್ಥಿಗಳ ಪ್ರವಾಸ, ಮೂಢನಂಬಿಕೆ ವಿರುದ್ಧ ಕಾನೂನು, ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳಿಂದ ಸರ್ಕಾರ ತೀವ್ರ ವಿವಾದಕ್ಕೆ ಗುರಿಯಾಗಿದೆ, ಟೀಕೆಗೆ ಗುರಿಯಾಗಿದೆ ಎಂದರು.
ಹಿಂದೂಗಳನ್ನು ಅವಮಾನಿಸಲಿಕ್ಕಾಗಿಯೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆದಿದೆ. ಮೌಢ್ಯದ ವಿರುದ್ಧದ ಕಾನೂನಿನ ಮೂಲಕ ಹಿಂದುಗಳನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯನವರಷ್ಟು ಗೊಂದಲದ, ವಿವಾದದ ನಿರ್ದಾರಗಳನ್ನು ಕೈಗೊಂಡವರು, ವಿವಾದಕ್ಕೆ - ಟೀಕೆಗೆ ಗುರಿ ಆದ ಸಿಎಂಗಳು ಯಾರೂ ಇಲ್ಲ. ಸಿದ್ದರಾಮಯ್ಯರ ಕಾರ್ಯವೈಖರಿ, ಏಕಪಕ್ಷೀಯ ನಿರ್ಧಾರಗಳಿಂದಲೇ ಕಾಂಗ್ರೆಸ್ನಲ್ಲೇ ಭಿನ್ನಮತ ನಿರ್ಮಾಣವಾಗಿದೆ ಎಂದು ನುಡಿದರು.
ನ್ಯಾಯಾಲಯಕ್ಕೆ ಹಾಜರಿ : 2011ರ ಚುನಾವಣೆಯ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಕುರಿತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದ ಕೆ.ಎಸ್. ಈಶ್ವರಪ್ಪ, ಜಾಮೀನು ದೊರೆತಿದೆ. ವಿಧಾನಪರಿಷತ್ ಮಾಜಿ ಸದಸ್ಯ ಶಶಿಲ್ ಜಿ. ನಮೋಶಿ, ಎಸ್. ಇಂದುಶೇಖರ್, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.