ಬಳ್ಳಾರಿಯಲ್ಲಿ ವೈಎಸ್ಆರ್ ಪಕ್ಷಕ್ಕೆ ಸೇರಿದ ಗಡಿಯಾರ ವಶ
ಹತ್ತು ಬಾಕ್ಸ್ಗಳಲ್ಲಿ ಒಟ್ಟು 680 ಗೋಡೆ ಗಡಿಯಾರಗಳು ಇದ್ದವು. ಪ್ರತಿ ಗೋಡೆ ಗಡಿಯಾರದಲ್ಲಿ ವೈ.ಎಸ್. ಜಗನ್ಮೋಹನರೆಡ್ಡಿ ಮತ್ತು ಆಂಧ್ರದ ಗಡಿಭಾಗದಲ್ಲಿ ಇರುವ ರಾಯದುರ್ಗ ವಿಧಾನಸಭಾ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಕೆ. ರಾಮಚಂದ್ರರೆಡ್ಡಿ ಅವರ ಫೋಟೋಗಳು ಇದ್ದವು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕೆ. ರಾಮಚಂದ್ರರೆಡ್ಡಿ ಅವರು ಬಳ್ಳಾರಿ ನಗರ ನಿವಾಸಿಯಾಗಿದ್ದು, ಅವರನ್ನು ಆಂಧ್ರದ ರಾಯದುರ್ಗದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಇವರು ಗಣಿರೆಡ್ಡಿಗಳ ಆಪ್ತರ ಗುಂಪಿನಲ್ಲಿ ನಿರ್ಣಾಯಕರು. ಆಂಧ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಗೋಡೆಗಡಿಯಾರಗಳು ಬೆಂಗಳೂರಿನಿಂದ ಬಳ್ಳಾರಿ ತಲುಪಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಖಾಸಗಿ ಟ್ರಾವೆಲ್ಸ್ನ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಟ್ರಾವೆಲ್ಸ್ ಸಿಬ್ಬಂದಿಯು ಬೆಂಗಳೂರಿನಿಂದ ಬಾಕ್ಸ್ಗಳು ಬಂದಿದ್ದು, ಯಾರು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ, ತನಿಖೆ ಜಾರಿಯಲ್ಲಿದೆ. [ಲೋಕಸಭೆ ಚುನಾವಣೆ ವಿಶೇಷ ಪುಟ]
ಶುಕ್ರವಾರ ಸಿದ್ದು ಸಭೆ : ಬಳ್ಳಾರಿ ಎಸ್ಟಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಗೆಲುವಿನ ರಾಜಕೀಯ ತಂತ್ರಗಾರಿಕೆ ರೂಪಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ಸಿಗರ ಸಭೆ ನಡೆಯಲಿದೆ.
ಕಾಂಗ್ರೆಸ್ನ ಆಪ್ತ ಮೂಲಗಳ ಪ್ರಕಾರ, ಶುಕ್ರವಾರ ಸಂಜೆ 5 ಗಂಟೆಗೆ ಕಾಂಗ್ರೆಸ್ ಕಚೇರಿ ಅಥವಾ 'ಕಾವೇರಿ'ಯಲ್ಲಿ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಸಭೆಯನ್ನು ಏರ್ಪಡಿಸಿದ್ದಾರೆ. ಈ ಸಭೆಯಲ್ಲಿ ಜಿಲ್ಲೆಯ 30ಕ್ಕೂ ಹೆಚ್ಚು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯಿಂದ ಶ್ರೀರಾಮುಲು ಅವರು ಸ್ಪರ್ಧಿಸುತ್ತಿರುವುದರಿಂದ ಈ ಸಭೆ ಭಾರೀ ಮಹತ್ವ ಪಡೆದಿದೆ.
2009ರ ಚುನಾವಣೆಯಲ್ಲಿ ಇದೇ ಎನ್.ವೈ. ಹನುಮಂತಪ್ಪ ಅವರು ಬಿಜೆಪಿಯ ಜೆ. ಶಾಂತಾ ಅವರ ವಿರುದ್ಧ ಕೇವಲ 2 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈಗ ಜೆ ಶಾಂತಾ ಬದಲು, ಬಿಜೆಪಿ ಸೇರಿರುವ ಅವರ ಸಹೋದರ ಬಿ. ಶ್ರೀರಾಮುಲು ಅವರು ಸ್ಪರ್ಧೆಗಿಳಿದಿದ್ದಾರೆ.