ಬಳ್ಳಾರಿ ಅಭಿವೃದ್ಧಿಗೆ 850 ಕೋಟಿ ವಿಶೇಷ ಪ್ಯಾಕೇಜ್
ಬಳ್ಳಾರಿ, ಸೆ. 29 : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಪ ಚುನಾವಣೆ ವೇಳೆಯಲ್ಲಿ ಬಳ್ಳಾರಿ ಜನರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದೆ. ಬಳ್ಳಾರಿಯ ಅಭಿವೃದ್ಧಿಗಾಗಿ 850 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ಅನ್ನು ಸಿದ್ದರಾಮಯ್ಯ ಸೋಮವಾರ ಘೋಷಣೆ ಮಾಡಿದ್ದಾರೆ.
ಸೋಮವಾರ ಬಳ್ಳಾರಿಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ 9 ಸಚಿವರು ಭೇಟಿ ನೀಡಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬಳ್ಳಾರಿಯ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ಅನ್ನು ಘೋಷಣೆ ಮಾಡಿದರು. [ಬಳ್ಳಾರಿ ಕೈವಶ, ರೆಡ್ಡಿಪಾಳಯಕ್ಕೆ ಮುಖಭಂಗ]

ಕೆಲವು ದಿನಗಳ ಹಿಂದೆ ನಡೆದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದರೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ರೆಡ್ಡಿಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದ ಕಾಂಗ್ರೆಸ್ನ ಎನ್.ವೈ.ಗೋಪಾಕೃಷ್ಣ ಗೆಲುವು ಸಾಧಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಕ್ಷೇತ್ರದ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. [ಬಳ್ಳಾರಿಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಚಿತ್ರಗಳು]
ಯಾವ ಇಲಾಖೆಗೆ ಎಷ್ಟು : 850 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ಅನ್ನು ಹಲವು ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಅದರಂತೆ ಸಮಾಜಕಲ್ಯಾಣ ಇಲಾಖೆಗೆ 204 ಕೋಟಿ, ನಗರಾಭಿವೃದ್ಧಿ ಇಲಾಖೆ ವತಿಯಿಂದ 12,399 ಮನೆಗಳ ನಿರ್ಮಾಣ, 110 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರಗಳಲ್ಲಿ ಮನೆ ನಿರ್ಮಾಣ ಹಾಗೂ 2 ಲಕ್ಷ ವೆಚ್ಚದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಸೇರಿದೆ.
ಶೌಚಾಲಯ ನಿರ್ಮಾಣಕ್ಕೆ 37 ಕೋಟಿ ರೂ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ 50 ಕೋಟಿ ರೂ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 13 ಕೋಟಿ ರೂ, ವಿದ್ಯುತ್ ಸಂಪರ್ಕ ಕಲ್ಪಿಸಲು 10 ಕೋಟಿ ಹಾಗೂ ಕುಡಿಯುವ ನೀರಿಗಾಗಿ 60 ಕೋಟಿ ರೂ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದರು.












Click it and Unblock the Notifications