ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನೇರಾನೇರ ಸ್ಪರ್ಧೆ
ಬಳ್ಳಾರಿ, ಮಾರ್ಚ್. 29: ಹ್ಯಾಟ್ರಿಕ್ ಗೆಲುವಿನ ಆತುರದಲ್ಲಿರುವ ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಇ. ತುಕಾರಾಂ ಅವರಿಗೆ ಈ ಬಾರಿಯ ನೇರಾನೇರಾ ಸ್ಪರ್ಧೆ ನೀಡಲಿರುವುದು ಬಿಜೆಪಿ. ಇನ್ನು ಜೆಡಿಎಸ್ ಅಭ್ಯರ್ಥಿ ಬಿ. ವಸಂತಕುಮಾರ್ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎನ್ನುವಂತಿದೆ ಸಂಡೂರು ಕ್ಷೇತ್ರ ಚುನಾವಣಾ ವಿಶ್ಲೇಷಣೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು
ಇ. ತುಕಾರಾಂ ಸಂಡೂರು ಕ್ಷೇತ್ರದಲ್ಲಿ ಆಡಳಿತ ನಡೆಸಿದ್ದೆಲ್ಲಾ ಸಂತೋಷ್ ಎಸ್. ಲಾಡ್ ಅವರ ಮೂಗಿನನೇರಕ್ಕೇ. ಅದೂ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ, ಕ್ಷೇತ್ರದ ಆಡಳಿತಾತ್ಮಕ ನಿರ್ಧಾರಗಳು ಎಲ್ಲವೂ ನಡೆದದ್ದು ಲಾಡ್ ಮನೆಯಲ್ಲಿಯೇ ಎನ್ನುವ ಸಾಮಾನ್ಯ ಅಭಿಪ್ರಾಯವಿದೆ.
ಸಂಡೂರು ಕ್ಷೇತ್ರದ ಚುನಾವಣಾ ಇತಿಹಾಸ
ಲಾಡ್ ಕುಟುಂಬದ ಸದಸ್ಯರಾಗಿರುವ ತುಕಾರಾಂ, ಲಾಡ್ ಅವರ ಗಣಿ ಕಂಪನಿಯಲ್ಲಿ ಲೆಕ್ಕಾಧಿಕಾರಿ, ದೈನಂದಿನ ಚಟುವಟಿಕೆಗಳ ಉಸ್ತುವಾರಿ ನಿರ್ವಹಿಸಿದ ನಂಬಿಕಸ್ಥ. ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾದಾಗ ಲಾಡ್ ಸಹೋದರರ ಕಣ್ಣಿಗೆ ಕಂಡಿದ್ದೇ ಇ. ತುಕಾರಾಂ. ಅವರೇ ಅಂದಿನ ಕಾಂಗ್ರೆಸ್ ಅಭ್ಯರ್ಥಿ. ಇ. ತುಕಾರಾಂ ಅವರನ್ನು ಘೋರ್ಪಡೆ ಮನೆತನದವರೂ ಬೆಂಬಲಿಸಿ, ಎರೆಡುಬಾರಿ ಗೆಲ್ಲಿಸಿದರು.
ಆದರೆ, 2018ರ ಚುನಾವಣೆಯಲ್ಲಿ ಇ. ತುಕಾರಾಂ ಗೆಲುವು ಸುಲಭವಾಗಿಲ್ಲ. ಬಿಜೆಪಿಯಿಂದ ಸಂಸದ ಬಿ. ಶ್ರೀರಾಮುಲು, ಚಿತ್ರೋದ್ಯಮಿ ಬಂಗಾರು ಹನುಮಂತು, ಮಾನಸಿಕ ತಜ್ಞ ಡಾ. ಟಿ.ಆರ್. ಶ್ರೀನಿವಾಸ್, ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕೆ.ಎಸ್. ದಿವಾಕರ್, ಪುರಸಭೆಯ ಕಾಂಗ್ರೆಸ್ನ ಮಾಜಿ ಸದಸ್ಯ ಡಿ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವನಾಯಕ್ ಟಿಕೇಟ್ಗಾಗಿ ತೀವ್ರ ಲಾಬಿ ನಡೆಸಿದ್ದಾರೆ.

ಬಿ. ಶ್ರೀರಾಮುಲು ಕಣಕ್ಕಿಳಿದಲ್ಲಿ ಉಳಿದ ಆಕಾಂಕ್ಷಿಗಳು ಒಟ್ಟಾಗಿ ಶ್ರಮಿಸಿ ಕಾಂಗ್ರೆಸ್ ಸೋಲಿಸಲು ಫಣ ತೊಟ್ಟಿದ್ದಾರೆ. ಇವರಲ್ಲಿ ಡಿ. ರಾಘವೇಂದ್ರ ಅವರು ಕಾಂಗ್ರೆಸ್ನ 2ನೇ ವಾರ್ಡ್ನ ಪುರಸಭೆ ಸದಸ್ಯರಾಗಿ ಆಯ್ಕೆ ಆಗಿ, ರಾಜೀನಾಮೆ ಸಲ್ಲಿಸಿ, ಬಿಜೆಪಿ ಟಿಕೇಟ್ಗಾಗಿ ಹರಸಾಹಸ ಪಡುತ್ತಿದ್ದಾರೆ.
ಕೆ.ಎಸ್. ದಿವಾಕರ್ ಅವರನ್ನು ಬಿ. ಶ್ರೀರಾಮುಲು ಸ್ವಯಂ ಆಗಿ ಅಮಿತ್ ಶಾ ಅವರಿಗೆ ಜಿಂದಾಲ್ ಏರ್ಪೋರ್ಟ್ನಲ್ಲಿ ಪರಿಚಯ ಮಾಡಿಕೊಟ್ಟು, 'ಸಂಡೂರು ಕ್ಷೇತ್ರದ ಸ್ಪರ್ಧಾಕಾಂಕ್ಷಿ’ ಎಂದು ತಿಳಿಸಿದ್ದಾರೆ. ಆದರೆ, ಶಾ ಅವರು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಎಂದು ಆಪ್ತ ಮೂಲಗಳು ತಿಳಿಸಿವೆ.
ಡಾ. ಟಿ.ಆರ್. ಶ್ರೀನಿವಾಸ್ ಅವರು ಆರ್ಎಸ್ಎಸ್, ಹಿಂದೂ ಸಂಘಟನೆಗಳ ಬೆಂಬಲ ಪಡೆದಿದ್ದಾರೆ. ಕ್ಷೇತ್ರದ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಕೆ.ಎಸ್. ದಿವಾಕರ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ, ಬಿಜೆಪಿಯ ಅಕೌಂಟ್ ತೆರೆದು, ಕಾಂಗ್ರೆಸ್ಗೆ ನೀರಿಳಿಸಿ, ನಾಯಕತ್ವ ಸಾಬೀತುಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವನಾಯಕ್ ಸ್ಪರ್ಧಿಸಲು ತೀವ್ರ ಆಸಕ್ತಿ ಹೊಂದಿದ್ದು, ಇವರಿಗೆ ಬಿ. ಶ್ರೀರಾಮುಲು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications