ರಾಮನಗರದಿಂದ ಚಿತ್ತ ತಿರುಗಿಸಲು ಬಳ್ಳಾರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ
ಬಳ್ಳಾರಿ, ನವೆಂಬರ್ 01: ಸಚಿವ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ರಾಮನಗರ ಉಪಚುನಾವಣೆ ಕಣದಿಂದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.

ರಾಮನಗರದಲ್ಲಿ ನಡೆದ ಭಾರಿ ರಾಜಕೀಯ ಬೆಳವಣಿಗೆಯ ಬಗ್ಗೆ ತುಟಿ ಬಿಚ್ಚದ ಡಿ.ಕೆ.ಶಿವಕುಮಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದ್ದ ವಿಷಯಗಳನ್ನೇ ತಮ್ಮ ಪದಗಳಲ್ಲಿ ಹೇಳಿ ಸುದ್ದಿಗೋಷ್ಠಿ ಮುಗಿಸಿದ್ದಾರೆ.
ಮಾಧ್ಯಮಗಳಲ್ಲಿ ಬೆಳಿಗಿನಿಂದಲೂ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಸೇರಿದ ವಿಷಯವೇ ಪ್ರಸ್ತಾಪವಾಗುತ್ತಿತ್ತು. ಅದು ಕಾಂಗ್ರೆಸ್ಗೆ ಋಣಾತ್ಮಕ ಪರಿಣಾಮ ಬೀರುವ ಅಪಾಯ ಇದ್ದ ಕಾರಣ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಚಿತ್ತ ರಾಮನಗರ ರಾಜಕೀಯದಿಂದ ಬೇರೆಡೆ ತಿರುಗಿಸಲು ಈ 'ನಾಮ್-ಕಾ-ವಾಸ್ತೆ' ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಸುಲಭದಲ್ಲಿ ಊಹಿಸಬಹುದಾಗಿದೆ.

ರಾಮನಗರ ರಾಜಕೀಯದ ಉಲ್ಲೇಖವೇ ಇಲ್ಲ
ರಾಮನಗರದ ಅಭ್ಯರ್ಥಿಯ ವಿಷಯವನ್ನು ಬಿಟ್ಟು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ವಿಷಯವನ್ನು ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿಯ ಆರಂಭದಲ್ಲಿ ಪ್ರಸ್ತಾಪಿಸಿದರು, ರಾಮನಗರ ರಾಜಕಾರಣ ಅಲ್ಲದಿದ್ದರೂ ಜನಾರ್ಧನ ರೆಡ್ಡಿ ಅಥವಾ ಶ್ರೀರಾಮುಲು ಅವರ ಮೇಲೆ ಭೂ ಕಬಳಿಕೆ ಆರೋಪ ಮಾಡುತ್ತಾರೆಂದೂ ಸಹ ನಿರೀಕ್ಷಿಸಲಾಗಿತ್ತು. ಆದರೆ ಅದೂ ಸಹ ನಿಜವಾಗಲಿಲ್ಲ.

ಪ್ರಶ್ನೋತ್ತರ ವೇಳೆಯಲ್ಲೂ ಜಾಣ ಉತ್ತರಗಳು
ಸುದ್ದಿಗೋಷ್ಠಿಯ ಅಂತಿಮ ಘಟ್ಟ ಪ್ರಶ್ನೋತ್ತರ ಸಮಯದಲ್ಲಿ ಸಹ ಡಿ.ಕೆ.ಶಿವಕುಮಾರ್ ಅವರು ರಾಮನಗರ ರಾಜಕೀಯ ಬೆಳವಣಿಗೆ ಬಗ್ಗೆ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದೆ, ಪ್ರಶ್ನೆಗಳನ್ನು ಪಕ್ಕಕ್ಕೆ ತಳ್ಳಿ ಬಿಟ್ಟರು. 'ರಾಮನಗರ ರಾಜಕೀಯದ ಬಗ್ಗೆ ಕೆಲವು ಗುಟ್ಟುಗಳನ್ನು ಬಿಟ್ಟುಕೊಡುವಂತಿಲ್ಲ' ಎಂದು ಮಾತ್ರವೇ ರಾಮನಗರದ ಬಗ್ಗೆ ಅವರು ಹೇಳಿದ ಒಂದು ಮಾತು.

ನಮ್ಮ ಆಡಳಿತದಲ್ಲಿ ಭಯದ ವಾತಾವರಣ ಇರಲ್ಲ
ಬೆಂಗಳೂರಿನವನಾದರೂ ಬಳ್ಳಾರಿ ಜಿಲ್ಲೆ ಉಸ್ತುವಾರಿ ನನಗೆ ನೀಡಿದ್ದಾರೆ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನೂ ಮತ್ತು ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಹಿಂದೆ ಈ ಜಿಲ್ಲೆಯಲ್ಲಿ ಭಯದ ವಾತಾವರಣ ಇತ್ತು, ಆದರೆ ನಮ್ಮ ಆಡಳಿತದಲ್ಲಿ ಭಯಕ್ಕೆ ಅವಕಾಶ ಇಲ್ಲ, ಇಲ್ಲಿ ಪ್ರಜೆಗಳೇ ಪ್ರಭುಗಳು. ಯಾವ ಪಕ್ಷದ ಕಾರ್ಯಕರ್ತರ ಮೇಲೂ ದೌರ್ಜನ್ಯ ಆಗಬಾರದು ಎಂದು ಹೇಳಿದರು.

13 ಸಾವಿರ ಕೋಟಿಯ ಯೋಜನೆಗೆ ಬಳ್ಳಾರಿಗೆ
13 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು, ಮೂಲಸೌಕರ್ಯ ಅಭಿವೃದ್ಧಿ, ನೀರಾವರಿ ಯೋಜನೆ, ನಿರುದ್ಯೋಗ ನಿವಾರಣೆ, ಶಿಕ್ಷಣ ಹೀಗೆ ಎಲ್ಲವೂ ಆ ಯೋಜನೆಯಲ್ಲಿ ಮಿಳಿತವಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.












Click it and Unblock the Notifications