ಬಳ್ಳಾರಿ ಉಪಚುನಾವಣೆ: ಡಿಕೆಶಿ ವಿರುದ್ದ ತೊಡೆತಟ್ಟಿದ ಶ್ರೀರಾಮುಲು
Recommended Video

ಯಾರಿಗೂ ಬೇಡವಾದ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅತ್ತ ಅಭ್ಯರ್ಥಿಗಳೂ ನಿರುತ್ಸಾಹ ತೋರುತ್ತಿರುವುದು ಒಂದೆಡೆಯಾದರೆ, ವರಿಷ್ಠರ ಸೂಚನೆಯ ಮೇರೆಗೆ ಮತ್ತು ಮುಂಬರುವ ಚುನಾವಣೆಯಲ್ಲಿ ಪ್ರಚಾರದ ಗೇರ್ ಬದಲಾಯಿಸಲು ಭಾರೀ ಪೈಪೋಟಿ ನೀಡುವ ಒತ್ತಡದಲ್ಲಿದ್ದಾರೆ ಮೂರೂ ಪಕ್ಷದ ಹಿರಿಯ ಮುಖಂಡರುಗಳು.
ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲೊಂದಾದ ಬಳ್ಳಾರಿಯ ಉಸ್ತುವಾರಿಯನ್ನು ಕಾಂಗ್ರೆಸ್ ವರಿಷ್ಠರು ಸಚಿವ ಡಿ ಕೆ ಶಿವಕುಮಾರ್ ಅವರಿಗೆ ನೀಡಿದ ನಂತರ, ಅಲ್ಲಿನ ರಾಜಕೀಯ ಕದನಕ್ಕೆ ಹೊಸ ಮೆರುಗು ಬಂದಿದೆ. ಶ್ರೀರಾಮುಲು ವರ್ಸಸ್ ಡಿಕೆಶಿ ನಡುವಿನ ಫೈಟ್ ಎಂದು ಬಿಂಬಿತವಾಗಿದೆ.
ವರಿಷ್ಠರ ಸೂಚನೆಯಂತೆ ಸಮಾಲೋಚನೆ ನಡೆಸಲು ಬಳ್ಲಾರಿಯ ಕಾಂಗ್ರೆಸ್ ಶಾಸಕರನ್ನು ಡಿಕೆಶಿ ಕರೆದಿದ್ದರು. ಆದರೆ, ನಾಲ್ಕು ಶಾಸಕರು ಸಭೆಗೆ ಗೈರಾಗುವ ಮೂಲಕ, ಆರಂಭದಲ್ಲೇ ಡಿ ಕೆ ಶಿವಕುಮಾರ್ ಗೆ ತಲೆನೋವು ತಂದೊಡ್ಡಿದ್ದಾರೆ. ಕ್ಷೇತ್ರದ ಅಭ್ಯರ್ಥಿಯನ್ನಾಗಿ ಯಾರನ್ನೂ ಘೋಷಿಸಲು ಕಾಂಗ್ರೆಸ್ ಹೊರಟಿದೆಯೋ ಅದಕ್ಕೆ ಅವರ ವಿರೋಧವಿದೆ ಎನ್ನುವ ಸುದ್ದಿಯಿದೆ.
ಈ ನಡುವೆ, ಗುರುವಾರ (ಅ 11) ಸಹೋದರಿ ಶಾಂತಾ ಅವರ ಮಗಳ ಮದುವೆಯಲ್ಲಿ ಭಾಗವಹಿಸಿ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು, ಉಪಚುನಾವಣೆಯಲ್ಲಿ ಬಳ್ಳಾರಿ ಮಾತ್ರ ಯಾಕೆ, ಮೂರೂ ಲೋಕಸಭಾ ಕ್ಷೇತ್ರದಲ್ಲಿ ನಮ್ಮದೇ ಜಯ ಎಂದಿದ್ದಾರೆ.
ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದು ಶುಕ್ರವಾರ ಅಂತಿಮವಾಗಲಿದೆ, ಐದು ಜನರ ಪಟ್ಟಿಯನ್ನು ಫೈನಲ್ ಮಾಡಿ ಕಳುಹಿಸಿದ್ದೇವೆ ಎಂದು ರಾಮುಲು ಹೇಳಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ರಾಮುಲು ಚಾಲೆಂಜ್,

ಐದು ಜನರ ಹೆಸರನ್ನು ಪಟ್ಟಿಮಾಡಿ ವರಿಷ್ಠರಿಗೆ ಕಳುಹಿಸಿದ್ದೇವೆ
ನಮ್ಮಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಐದು ಜನರ ಹೆಸರನ್ನು ಪಟ್ಟಿಮಾಡಿ ವರಿಷ್ಠರಿಗೆ ಕಳುಹಿಸಿದ್ದೇವೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ನಾವೆಲ್ಲಾ ಒಗ್ಗಟ್ಟಿನಿಂದ ಪ್ರಚಾರ ನಡೆಸಿ, ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವಂತೆ ಮಾಡುವುದೇ ನಮ್ಮ ಗುರಿ ಮತ್ತು ಜಯ ನಮ್ಮದೇ ಆಗಲಿದೆ - ಶ್ರೀರಾಮುಲು.

ಇಡೀ ಸಮ್ಮಿಶ್ರ ಸರಕಾರವೇ ಬಳ್ಳಾರಿಯಲ್ಲಿ ಠಿಕಾಣಿ ಹೂಡಲಿ
ಡಿ ಕೆ ಶಿವಕುಮಾರ್ ಅಥವಾ ಇಡೀ ಸಮ್ಮಿಶ್ರ ಸರಕಾರವೇ ಬಳ್ಳಾರಿಯಲ್ಲಿ ಠಿಕಾಣಿ ಹೂಡಲಿ, ಗೆಲುವು ನಮ್ಮದೇ. ನಾವು ಪಾಂಡವರು, ಹಾಗಾಗಿ ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ. ಮೋದಿಯವರ ಜನಪ್ರಿಯತೆ ಮತ್ತು ಅವರ ಮೇಲೆ ಜನರಿಗಿರುವ ವಿಶ್ವಾಸ, ಬಿಜೆಪಿ ಅಭ್ಯರ್ಥಿ ಗೆಲ್ಲಲು ಶ್ರೀರಕ್ಷೆಯಾಗಲಿದೆ - ಶ್ರೀರಾಮುಲು.

ಯುದ್ದದಲ್ಲಿ ಪಾಂಡವರು ಸೋಲುವುದಿಲ್ಲ
ಮಹಾಭಾರತದ ಯುದ್ದದಲ್ಲಿ ಪಾಂಡವರು ಸೋಲುವುದಿಲ್ಲ, ಹಾಗೆಯೇ ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲ. ಪಕ್ಷದ ಕಾರ್ಯಕರ್ತರೇ ನಮಗೆ ದೊಡ್ಡ ಆಸ್ತಿ. ಈ ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಎಷ್ಟೇ ಪ್ರಭಾವಿಗಳು ಬಂದರೂ, ಹಣದ ಹೊಳೆ ಹರಿಸಿದರೂ, ಗೆಲುವು ನಮ್ಮದೇ ಎಂದು ಶ್ರೀರಾಮುಲು ವಿಶ್ವಾಸದ ಮಾತನ್ನಾಡಿದ್ದಾರೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಅವರ ಸಹೋದರನನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಇದಕ್ಕೆ ಬಳ್ಳಾರಿ ಕಾಂಗ್ರೆಸ್ ಘಟಕದಲ್ಲಿ ತೀವ್ರ ವಿರೋಧವಿದೆ. ಈ ಕಾರಣಕ್ಕಾಗಿ, ಆನಂದ್ ಸಿಂಗ್, ಪರಮೇಶ್ವರ್ ನಾಯ್ಕ್, ಭೀಮಾ ನಾಯಕ್ ಮತ್ತು ಸಂತೋಷ್ ಲಾಡ್, ಡಿಕೆಶಿ ಕರೆದಿದ್ದ ಸಭೆಯಿಂದ ದೂರವುಳಿದದ್ದು ಎನ್ನಲಾಗುತ್ತಿದೆ.

ನೆನೆಗುದಿಗೆ ಬಿದ್ದ ಸಂಪುಟ ವಿಸ್ತರಣೆ
ದಸರಾ ಆರಂಭವಾಗುತ್ತಿದ್ದಂತೇ, ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಆರಂಭವಾಗಬಹುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಆಕಾಂಕ್ಷಿಗಳಿಗೆ ಮತ್ತೆ, ಮಗುದೊಮ್ಮೆ ನಿರಾಶೆಯಾಗಿದೆ. ಹಾಗಾಗಿ, ಉಪಚುನಾವಣೆಯಲ್ಲಿ ತಟಸ್ಥರಾಗಿರೋಣ ಎನ್ನುವ ನಿಲುವಿಗೆ ಬಂದಿರುವುದು, ಕಾಂಗ್ರೆಸ್ಸಿಗೆ ಆಗಿರುವ ಮತ್ತೊಂದು ಸಮಸ್ಯೆ.












Click it and Unblock the Notifications